ಪುಟ:ಪರಂತಪ ವಿಜಯ ೨.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೭

ಅಧ್ಯಾಯ ೩


ದುರ್ಬುದ್ಧಿಯೆಂಬವನು, ದ್ಯೂತದಲ್ಲಿ ಉಂಟಾದ ಕಲಹದಿಂದ ಕೋಪಪರವಶನಾಗಿ, ತನ್ನನ್ನು ದ್ಯೂತದಲ್ಲಿ ಸೋಲಿಸಿ ಸರ್ವಸ್ವವನ್ನೂ ಗೆದ್ದುಕೊಂಡ ಮಾಧವನೆಂಬ ಒಬ್ಬ ಮನುಷ್ಯನನ್ನು ಕಠಾರಿಯಿಂದ ತಿವಿದು ಕೊಂದನೆಂಬುದಾಗಿಯೂ, ಕೂಡಲೆ ಮಾಧವನ ಕಡೆಯವನಾದ ಯಾವನೂ ಒಬ್ಬನು ಒಬ್ಬರಿಗೂ ತಿಳಿಯದಂತೆ ತುಪಾಕಿಯನ್ನು ಹಾರಿಸಿ ದುರ್ಬುದ್ಧಿಯನ್ನು ಕೊಂದನೆಂಬುದಾಗಿಯೂ, ದುರ್ಬುದ್ಧಿಯನ್ನು ಕೊಂದವನೆಂಬ ಸಂಶಯದಿಂದ ಒಬ್ಬ ಮನುಷ್ಯನನ್ನು ಯಾಮಿಕರು ಹಿಡಿದು ಕಾರಾಗೃಹದಲ್ಲಿ ಇಟ್ಟಿದ್ದುದಾಗಿಯೂ, ಹಾಗೆ ಇಡಲ್ಪಟ್ಟ ಮನುಷ್ಯನ ಮಿತ್ರನಾವನೋ ಒಬ್ಬನು ಕಾರಾಗೃಹದ ಬಳಿಗೆ ಹೋಗಿ ಅಲ್ಲಿದ್ದ ಕಾವಲುಗಾರನನ್ನು ಹಿಡಿದು ಅವನ ಕೈಕಾಲುಗಳನ್ನು ಕಟ್ಟಿ ಕೆಡವಿ ಬಾಯಿಗೆ ಬಟ್ಟೆಯನ್ನು ತುರುಕಿ ಅವನನ್ನು ಬಿಡಿಸಿಕೊಂಡು ಹೋದುದಾಗಿಯೂ ವರ್ತಮಾನ ತಿಳಿಯಿತು. ಇದರ ನಿಜಾಂಶವನ್ನು ತಿಳಿಯುವುದಕ್ಕಾಗಿ, ನಗರಾಧ್ಯಕ್ಷನನ್ನು ಕರೆದುಕೊಂಡು ಆ ದ್ಯೂತಶಾಲೆಗೆ ಹೋಗಿ ನೋಡುವಲ್ಲಿ, ಅಲ್ಲಿ ದುರ್ಬುದ್ಧಿಯು ತಲೆಯು ಅನೇಕ ಶಕಲಗಳಾಗಿ ಬಿದ್ದಿದ್ದಿತು. ದುರ್ಬುದ್ಧಿಗೂ ಮಾಧವನಿಗೂ ದ್ಯೂತದಲ್ಲಿ ನಡೆದಿದ್ದ ನಿರ್ಣಯಪತ್ರಿಕೆಯು ಅಲ್ಲಿದ್ದ ಜನಗಳ ವಶದಲ್ಲಿದ್ದಿತು. ಅದಕ್ಕಾಗಿ ಅಲ್ಲಿದ್ದ ಪ್ರತಿಯೊಬ್ಬರ ವಾಙ್ಮೂಲಗಳನ್ನೂ ಆಮೂಲಾಗ್ರವಾಗಿ ಪತ್ರಿಕಾಮುಖೇನ ತೆಗೆದುಕೊಂಡು, ಆ ಜನರನ್ನೂ ಅವರಲ್ಲಿದ್ದ ಪತ್ರಿಕೆಯನ್ನೂ ದಂಡಾಧ್ಯಕ್ಷನ ಬಳಿಗೆ ಕಳುಹಿಸಿ, ದುರ್ಬುದ್ಧಿಯ ಅಸ್ತಿ ಯಾವುದೂ ಹೋಗದಂತೆ ನೋಡಿಕೊಳ್ಳುವುದಕ್ಕಾಗಿ ಅವನ ಮನೆಬಾಗಲಿಗೂ ದ್ಯೂತಾಲಯಕ್ಕೂ ಯಾಮಿಕರನ್ನು ಕಾವಲಿಟ್ಟು, ಆ ಯಾಮಿಕಾಧಿಕಾರಿಯು ದಂಡಾಧ್ಯಕ್ಷನೊಡನೆ ನಿನ್ನನ್ನೇ ಹುಡುಕಿಕೊಂಡು ನಿನ್ನ ಮನೆಯ ಕಡೆಗೆ ಹೋಗುತ್ತಿರುವನು.' ಎಂದು ಹೇಳಿದನು.

  ನ್ಯಾಯಾಧಿಪತಿ-ಅಯ್ಯಾ ! ಪರಂತಪ ! ಜಾಗ್ರತೆಯಾಗಿ ಹೋಗಿ ಅವರನ್ನೂ ಇಲ್ಲಿಯೇ ಕರೆದುಕೊಂಡು ಬಾ.
  ಪರಂತಪನು ಹೋದ ಕೂಡಲೆ ಕೋಶಾಧಿಕಾರಿಯನ್ನು ನೋಡಿ “ಅಯ್ಯಾ ! ಕೋಶಾಧ್ಯಕ್ಷನೆ ! ಇದೋ ಇವನೇ ಮಾಧವನು. ದುರ್ಬುದ್ಧಿಯ ಪ್ರಹಾರದಿಂದ ಮೂರ್ಭೆ ಹೋದ ಕೂಡಲೆ ಈ ವೈದ್ಯನೂ ನಿನ್ನನ್ನು