ಪುಟ:ಪರಂತಪ ವಿಜಯ ೨.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೫೪

ಪರಂತಪ ವಿಜಯ


ವಿರ ಎಕರೆ ಭೂಮಿಯಿರುವುದು. ಈ ಕಟ್ಟಡವು ಅನೇಕ ಉಪ್ಪರಿಗೆಗಳುಳ್ಳದ್ದಾಗಿದೆ. ಸುತ್ತಮುತ್ತಲೂ ಇರತಕ್ಕ ಬೆಟ್ಟಗಳನ್ನೂ, ಅಲ್ಲಿ ವಾಸವಾಗಿರತಕ್ಕ ದುಷ್ಟಮೃಗಗಳನ್ನೂ, ಮಧ್ಯೆ ಇರತಕ್ಕ ಈ ಕಟ್ಟಡವನ್ನೂ ನೋಡಿದರೆ, ನಗರವಾಸಿಗಳಾದ ಜನರಿಗೆ ಬಹಳ ಭಯವುಂಟಾಗುವುದು. ಈ ಅರಮನೆಯ ವಿಷಯದಲ್ಲಿ ಕೆಲವು ಕಥೆಗಳನ್ನು ಹೇಳುತ್ತಾರೆ. ಈ ಕಟ್ಟಡದಲ್ಲಿ ಅನೇಕ ನೆಲಮಾಳಿಗೆಗಳು ಇರುತ್ತವೆ. ಅಲ್ಲಿಗೆ ಹೋಗಿಬಂದವರು, ಈ ಕಟ್ಟಡದಲ್ಲಿ ಅನೇಕ ಪಿಶಾಚಿಗಳಿರುತ್ತವೆಯೆಂದೂ, ಮಧ್ಯಾಹ್ನ ವೇಳೆಯಲ್ಲಿಯೂ ಕೂಡ ಅತ್ಯಂತ ಭಯಂಕರವಾದ ಪಿಶಾಚಧ್ವನಿಗಳು ಅಲ್ಲಿ ಕೇಳಿಸುತ್ತವೆಯೆಂದೂ, ಅಲ್ಲಿರತಕ್ಕ ಅದೃಶ್ಯವಾದ ಭೂತಾದಿಗಳು ಒಂದು ಕಡೆಯಲ್ಲಿರತಕ್ಕೆ ಮನುಷ್ಯರನ್ನು ದೂರವಾದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುತ್ತವೆಯೆಂದೂ, ಈ ಭೂತಗಳು ಒಂದೊಂದು ವೇಳೆಯಲ್ಲಿ ಮನುಷ್ಯರ ದೃಷ್ಟಿಗೆ ಗೋಚರವಾಗುವುದುಂಟೆಂದೂ, ಇವುಗಳಲ್ಲಿ ಕೆಲವು ಮನು ಷ್ಯಮುಖವುಳ್ಳ ವ್ಯಾಘೃಗಳಾಗಿಯೂ ವ್ಯಾಘೃ ಮುಖವುಳ್ಳ ಮನುಷ್ಯರಾಗಿಯೂ ಹಾಗೆಯೆ ಕರಡಿ ಸಿಂಹ ಕೋತಿಗಳ ಮುಖವೂ ಶರೀರವೂ ಉಳ್ಳವಾಗಿಯೂ ಇರುವುವೆಂದೂ, ಇವುಗಳನ್ನು ನೋಡಿ ಅನೇಕರು ಭಯ ಪಟ್ಟು ಓಡಿ ಹೋಗಿ ಭೀತಿಯಿಂದ ಜ್ವರಾದಿಗಳು ಬಂದು ಸತ್ತಿರುವರೆಂದೂ ಹೇಳುವರು. ಇದು ವಾಸ್ತವವಾಗಿರಬಹುದು. ಪ್ರಥಮತಃ ಈ ಕಟ್ಟಡವನ್ನು ಕಟ್ಟಿಸಿದ ಚೋರನು ಬಹು ದುರಾತ್ಮನೆಂಬುದಾಗಿಯೂ, ಅನೇಕ ಲಕ್ಷ ಜನರನ್ನು ಹಿಡಿದು ಇಲ್ಲಿಗೆ ತಂದು ಅವರ ಸರ್ವಸ್ವವನ್ನೂ ಕಿತ್ತುಕೊಂಡು ಅವರಲ್ಲಿ ಅನೇಕರನ್ನು ಕೊಂದು ಸಮಿಾಪ ಭೂಮಿಗಳಲ್ಲಿಯೇ ಅವರನ್ನು ಹೂಳಿದನೆಂಬುದಾಗಿಯೂ, ಹೀಗೆ ಮೃತರಾದವರೆಲ್ಲರೂ ಪಿಶಾಚಗಳಾಗಿ ಆ ಕಟ್ಟಡದಲ್ಲಿ ವಾಸ ಮಾಡುತ್ತಾರೆಂಬುದಾಗಿಯೂ ಹೇಳುತ್ತಾರೆ. ಇದಲ್ಲದೆ, ಈ ಕಟ್ಟಡಕ್ಕೆ ರತ್ನಾಕರವೆಂಬ ಅಭಿಧಾನವೂ ಉಂಟಾಗಿದೆ. ಇದು ಅನ್ವರ್ಥ ನಾಮವೆಂದು ತೋರುತ್ತದೆ. ಈ ದುರ್ಗದ ಪ್ರಾಂತದಲ್ಲಿ ಚಿನ್ನದ ಗಣಿಗಳು ಅನೇಕವಾಗಿರುತ್ತವೆ; ಈ ಮನೆಯ ಕೆಳಗೆ ರತ್ನಗಳ ಗಣಿಗಳು ಇರುತ್ತವೆ. ಈ ಮನೆಯ ನೆಲಮಾಳಿಗೆಗಳಲ್ಲೊಂದರ ಕೆಳಗೆ, ವಿವಿಧ ರತ್ನ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರ, ಒಂದು ಸುರಂಗವನ್ನು ಹೊಡೆದು,