ಪುಟ:ಪರಂತಪ ವಿಜಯ ೨.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೭

೫೯


ಸುಮಿತ್ರ-ಎಲೈ ಶಂಬರನೆ ! ನಿನ್ನ ಸಂತಾಪವನ್ನು ನೋಡಿದರೆ ನನಗೆ ಬಹಳ ವ್ಯಸನವಾಗುತ್ತದೆ. ಕಾಮಮೋಹಿನಿಯು ಮೊದಲಿಂದಲೂ ನಿನ್ನಲ್ಲಿ ಅನುರಕ್ತಳಾಗಿರಲಿಲ್ಲ. ಅವಳಲ್ಲಿ ನಿನಗಿದ್ದ ಅಭಿಮಾನವನ್ನು ನೋಡಿ, ನಿಮ್ಮಿಬ್ಬರಿಗೂ ಘಟನೆ ಮಾಡಬೇಕೆಂದು ನಾನು ಬಹಳ ಪ್ರಯತ್ನ ಪಟ್ಟೆನು. ಇದೆಲ್ಲ ನಿಪ್ಪಲವಾಯಿತು.
ಶಂಬರ- ಎಂದಿಗೂ ನಿಪ್ಪಲವಾಗುವುದಿಲ್ಲ. ಪರಂತಪನನ್ನು ನೋಡಿ ಅವಳು ನನ್ನನ್ನು ತಿರಸ್ಕಾರ ಮಾಡಿದ್ದಾಳೆ. ಇವನನ್ನು ಹಿಡಿದು ಕಾರಾಗೃಹದಲ್ಲಾದರೂ ಇಡುತ್ತೇನೆ; ಅಥವಾ ಯಮಪುರಿಗಾದರೂ ಕಳುಹಿಸುತ್ತೇನೆ. ಕೂಡಲೇ ಅವಳು ವಿನೀತಳಾಗುವಳು.
ಸುಮಿತ್ರ- ಇದು ಅಸಾಧ್ಯ. ಪರಂತಪನು ಸಾಮಾನ್ಯನಲ್ಲ. ಇವನ ಬುದ್ದಿಯೂ, ಶಕ್ತಿಯೂ, ಊಹಾಪೋಹಜ್ಞಾನವೂ ಅಸಾಧಾರಣವಾಗಿರುವುವು. ಇವನ ಗುಣಾತಿಶಯಗಳ ಹಾಗೆಯೇ, ಇವನನ್ನು ನೋಡಿದವರೂ, ಇವನ ಸಂಗಡ ಸಂಭಾಷಣೆಯನ್ನು ಮಾಡಿದವರೂ ಸಹ, ಇವನಲ್ಲಿ ಅತ್ಯಂತ ವಿಶ್ವಾಸಪಡುತ್ತಾರೆ. ಇವನನ್ನು ಪ್ರತಿಭಟಿಸಿದರೆ, ನಮ್ಮ ಪರಿಣಾಮ ಹೇಗಾಗುವುದೋ ಕಾಣೆನು.
ಶಂಬರ- ಯಾರಿಗೂ ತಿಳಿಯದಂತೆ ಇವನನ್ನು ಹಿಡಿದು ಕಾರಾಗೃಹದಲ್ಲಿಡುವೆನು. ಮರಣಾವಧಿ ಬಿಡುವುದಿಲ್ಲ.
ಸುಮಿತ್ರ- ನೀನು ಲೋಕ ವ್ಯವಹಾರಜ್ಞನಲ್ಲ. ಪ್ರಪಂಚದಲ್ಲಿ ನಾವು ಒಂದು ವಿಧವಾಗಿ ಯೋಚಿಸುತ್ತಿದ್ದರೆ, ಅದು ನೆರವೇರದಂತೆ ಮಾಡುವುದಕ್ಕೆ ದೈವವು ಯೋಚಿಸುತ್ತಿರುವುದು. ಕೊನೆಗೆ “ಯತೋಧರ್ಮಸ್ತತೋಜಯಃ" ಎಂಬಂತೆ, ಧರ್ಮವಿದ್ದ ಕಡೆ ಜಯವುಂಟಾಗುವುದು ನಾವು ಮಾಡಿದ ಅನೇಕ ಅಧರ್ಮಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುವೆವು, ಈರೀತಿಯನ್ನು ತಿಳಿದೂ, ಪುನಃ ಅಧರ್ಮದಲ್ಲಿ ಪ್ರವರ್ತಿಸಬಹುದೆ?
ಶಂಬರ- ಈ ವೈದಿಕೋಕ್ತಿಗಳಿಂದ ಪ್ರಯೋಜನವಿಲ್ಲ. ಕಾರ್ಯ ಸಾಧನೆಗಾಗಿ ಪ್ರವರ್ತಿಸತಕ್ಕವರು ವೈದಿಕೋಕ್ತಿಗಳಿಗೆ ಕಿವಿಗೊಟ್ಟರೆ, ಅವರಿಗೆ ಯಾವ ಕಾರ್ಯವೂ ಕೈಗೂಡುವುದಿಲ್ಲ. ನಿನ್ನ ಧರ್ಮೋಪದೇಶಗಳು, ಪುರಾಣ