ಪುಟ:ಪರಂತಪ ವಿಜಯ ೨.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೮

೬೯


ಇದರ ಫಲಿತಾಂಶದಿಂದಲೇ, ನಾನು ಮಾಡಿದ ಆಪಾದನೆಗಳೆಲ್ಲ ಅಸತ್ಯಗಳೆಂದು ವ್ಯಕ್ತಪಡುವುದು. ನನ್ನ ದುರ್ಬುದ್ಧಿಗಾಗಿ ನಾನೇ ವಿಷಾದಿಸಬೇಕಾಗಿದೆ. ಈ ನನ್ನ ಅಪರಾಧಗಳನ್ನು ಕ್ಷಮಿಸುವನಾಗು.
ಪರಂತಪ -ಅಯ್ಯಾ! ಶಂಬರನೆ! ಅಪಕಾರ ಮಾಡಿಸಿಕೊಂಡವರಿಗಿಂತಲೂ ಅಪಕಾರ ಮಾಡಿದವರಿಗೆ ದ್ವೇಷವು ದೀರ್ಘವಾಗಿರುವುದು ಲೋಕ ಸ್ವಭಾವವು. ಹೀಗಿರುವಲ್ಲಿ, ನೀನೇ ದ್ವೇಷವನ್ನು ಬಿಟ್ಟು ಸಮಾಧಾನವನ್ನು ಹೊಂದುವಾಗ, ನಾನು ಮನಃಕಾಲುಷ್ಯವನ್ನು ಬಿಡುವುದೇನು ಅಸಾಧ್ಯ? ನಿನ್ನ ಪ್ರಾರ್ಥನೆಯಿಂದ ನಾನು ಬಹಳ ಸಂತೋಷಿಸಿದೆನು. ಸ್ನೇಹದಿಂದಾಗ ತಕ್ಕ ಅನುಕೂಲ್ಯಗಳು ದ್ವೇಷದಿಂದ ಆಗುವುದಿಲ್ಲ. ಈ ಯುದ್ಧದಿಂದ ನಿನಗೆ ಆಗಿರತಕ್ಕ ನಷ್ಟಗಳನ್ನು ನೋಡಿ, ನಾನು ತುಂಬ ವಿಷಾದಿಸಬೇಕಾಗಿದೆ. ಮಾಧವನ ಆಸ್ತಿಗೆ ನಾನು ಆಸೆ ಪಟ್ಟು ಪ್ರವರ್ತಿಸಿದವನೆಂದು ತಿಳಿಯಬೇಡ. ಅವನು ಬರೆದಿರುವ ಉಯಿಲಿನಲ್ಲಿಯೇ, ಆ ದ್ರವ್ಯದ ವಿನಿಯೋಗಗಳೆಲ್ಲ ವ್ಯಕ್ತ ಪಡುವುವು. ಅದರಂತೆ ಆ ಪತ್ರವನ್ನು ರಿಜಿಸ್ಟರ್ ಮಾಡಿಸುವುದಕ್ಕಾಗಿ ಮಾಧವನ ಕಡೆ ಲಾಯರಾದ ಅರ್ಥಪರನು ಬರುತ್ತಾನೆ. ಆ ವುಯಿಲು ರಿಜಿಸ್ಟರಾದ ಕೂಡಲೆ, ಅದರಲ್ಲಿ ಕಾಣಿಸಿರುವಂತೆ ನನ್ನ ಭಾಗಕ್ಕೆ ಬರತಕ್ಕ ದ್ರವ್ಯಗಳನ್ನು ನಿನಗೇ ಒಪ್ಪಿಸುತ್ತೇನೆ. ಅದನ್ನೂ, ನಿನ್ನ ದೊಡ್ಡಪ್ಪನಾದ ಸುಮಿತ್ರನ ಆಸ್ತಿಯನ್ನೂ ಸ್ವಾಧೀನ ಪಡಿಸಿಕೊಂಡು, ಕಲಾವತಿಯನ್ನು ವರಿಸಿ, ಅವಳೊಡನೆ ಸೌಖ್ಯವಾಗಿ ಬದುಕು. ಇನ್ನು ನಾನು ಹೋಗುತ್ತೇನೆ. ಅನುಮತಿಯನ್ನು ಕೊಡು.
ಶಂಬರ- "ಅಯ್ಯಾ! ವಂದಿಸುವೆನು, ನೀನು ಹೇಳಿದ ವಿಷಯವನ್ನೆಲ್ಲ ಮುಂದೆ ಪರ್ಯಾಲೋಚಿಸಿ ಸೂಕ್ತವಾದಂತೆ ನಡೆಸೋಣ," ಎಂದು ಹೇಳಿ, ಆತನನ್ನೂ ಪಂಚಾಯಿತರನ್ನೂ ಬಹುಮಾನಪುರಸ್ಸರನಾಗಿ ಕಳುಹಿಸಿಕೊಟ್ಟನು.
  ಸಮರಸಿಂಹನು, ಪಂಚಾಯಿತರೊಡನೆ ದಾರಿಯಲ್ಲಿ ಹೋಗುತ್ತ, ಪರಂತಪನನ್ನು ನೋಡಿ - 'ಅಯ್ಯಾ ! ಪರಂತಪ ! ನೀನೇ ಅದೃಷ್ಟಶಾಲಿ. ಶಂಬರನ ಗುಂಡು ನಿನಗೆ ತಗುಲಿದ್ದರೆ, ನಿನ್ನ ಗತಿಯೇನಾಗುತಿತ್ತು?
ಪರಂತಪ- (ಹುಸಿನಗೆಯೊಡನೆ) ನಾನು ಇಂಥ ನೂರಾರು ವಿಪತ್ತುಗಳಿಗೆ ಗುರಿಯಾಗಿದ್ದೇನೆ. ಅವೆಲ್ಲ ದೈವಯೋಗದಿಂದ ಪರಿಹಾರವಾಗಿವೆ.