ಪುಟ:ಪರಂತಪ ವಿಜಯ ೨.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೯

೮೭


ಣೆಯನ್ನು ವಹಿಸಿ, ಅವನಿಗೆ ಅಲ್ಲಿಯೇ ಸ್ವಲ್ಪ ದ್ರವ್ಯವನ್ನು ಕೊಟ್ಟು, ಮುಂದೆ ವಿಶೇಷವಾಗಿ ಕೊಡುವಂತೆ ವಾಗ್ದಾನಮಾಡಿ, ಶಂಬರನು ಸುಮಿತ್ರನ ಉತ್ತರಕ್ರಿಯೆಗಳನ್ನು ನಡೆಸುವುದಕ್ಕೋಸ್ಕರ ಅಲ್ಲಿಂದ ಹಿಂದಿರುಗಿದನು. ಆ ದಿನ ಮಧ್ಯಾಹ್ನಕ್ಕೆ ಉತ್ತರಕ್ರಿಯೆಗಳು ಪೂರಯಿಸಿದುವು. ಆ ಕಾಲದಲ್ಲಿ ಬಹುಜನಗಳು ಉತ್ತರಕ್ರಿಯೆಗಳಿಗೆ ಹೋಗಿದ್ದರು. ಶಂಬರನು ಮಾತ್ರ, ದೇಹ ಸ್ವಸ್ಥವಿಲ್ಲದಂತೆ ವೇಷವನ್ನು ಹಾಕಿಕೊಂಡು, ಸುಮಿತ್ರನ ಭಂಡಾರದಲ್ಲಿ ಉಯಿಲು ಮೊದಲಾದ ಕಾಗದ ಪತ್ರಗಳನ್ನು ಹುಡುಕುವುದರಲ್ಲಿ ಉದ್ಯುಕ್ತನಾಗಿದ್ದನು. ಕಲಾವತಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಇವನಿಗೆ ಇಷ್ಟವಿರಲಿಲ್ಲ. ಆದರೆ, ಸುಮಿತ್ರನು ಕಲಾವತಿಯನ್ನು ಮದುವೆ ಮಾಡಿಕೊಂಡವನಿಗೆ ತನ್ನ ಆಸ್ತಿಯನ್ನು ಕೊಡುವಂತೆ ಉಯಿಲು ಬರೆದಿದ್ದನು.
  ಆ ವುಯಿಲನ್ನು ಅಪಹರಿಸಿ ಸಮಸ್ತ ಆಸ್ತಿಯನ್ನೂ ಸುಮಿತ್ರನು ತನಗೇ ಕೊಟ್ಟಿರುವಂತೆ ಅರ್ಥಪರನಿಂದ ಒಂದು ಹೊಸ ಉಯಿಲನ್ನು ನಿರ್ಮಾಣ ಮಾಡಿಸಿದರೆ ತನಗೆ ಸುಮಿತ್ರನ ಆಸ್ತಿಯೆಲ್ಲಾ ದಕ್ಕುವುದೆಂದು ಯೋಚಿಸಿದನು. ಪರಂತಪನನ್ನು ಕೊಂದು, ಕಾಮಮೋಹಿನಿಯನ್ನು ಮದುವೆ ಮಾಡಿಕೊಂಡು, ಸುಮಿತ್ರನ ಆಸ್ತಿಯನ್ನು ಅಪಹರಿಸಿ, ಕಲಾವತಿಗೆ ಏನೂ ಇಲ್ಲದಂತೆ ಮಾಡಿದರೆ, ತನ್ನ ಇಷ್ಟಾರ್ಥ ಪರಿಪೂರ್ತಿಯಾಗುವುದೆಂದು ಶಂಬರನು ಭಾವಿಸಿದನು. ದುರಾತ್ಮರ ಸಂಕಲ್ಪವು ಒಂದು ವಿಧವಾಗಿದ್ದರೆ ದೈವ ಸಂಕಲ್ಪವು ಮತ್ತೊಂದು ವಿಧವಾಗಿರುವುದೇನಾಶ್ಚರ್ಯ? ಉತ್ತರಕ್ರಿಯೆಗಳಿಗೋಸ್ಕರ ಬಂದಿದ್ದ ಜನಗಳು ಇನ್ನೂ ಸುಮಿತ್ರನ ಮನೆಯಲ್ಲಿರುವಾಗಲೇ, ಶಂಬರನು ಸುಮಿತ್ರನ ಭಂಡಾರವನ್ನು ಪ್ರವೇಶಿಸಿ ಉಯಿಲನ್ನು ಹುಡುಕುತ್ತಿದ್ದ ನಷ್ಟೆ! ಹಾಗೆ ಅವನು ಹುಡುಕುತ್ತಿದ್ದಾಗ, ದೈವಾಧೀನದಿಂದ ಕಲಾವತಿಯ ಅಲ್ಲಿಗೆ ಹೋದಳು ಶಂಬರನು ಅನೇಕ ಕಾಗದ ಪತ್ರಗಳನ್ನು ತೆಗೆದು "ಇದೇ ಸುಮಿತ್ರನ ಆಖೈರ್ ಉಯಿಲು; ದೈವಾಧೀನದಿಂದ ನನ್ನ ಕೈಗೆ ಸಿಕ್ಕಿತು; ಇನ್ನು ನಾನು ಕೃತಕೃತ್ಯನಾದೆನು.” ಎಂಬುದಾಗಿ, ಆನಂದ ಪರವಶತೆಯಿಂದ ಗಟ್ಟಿಯಾಗಿ ಅಂದನು.

ಕಲಾವತಿ- ಏನೆಂದೆ?

ಶಂಬರ- ಯಾರು, ಕಲಾವತಿಯೇ?