ಪುಟ:ಭಾರತ ದರ್ಶನ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೨

ಭಾರತ ದರ್ಶನ

ರನು ಸೈತಾನಿ ವಿದ್ಯೆ ಎಂದು ಹಳಿಯುತ್ತಿದ್ದ ಲಲಿತಕಲೆ, ಕುಶಲವಿದ್ಯೆ, ಸುಖಜೀವನ, ವಿಜ್ಞಾನ, ಬೌದ್ಧಿಕ ವಿಚಾರದೃಷ್ಟಿಗಳು ಬಂದವು.

ಈ ಧರ್ಮಯುದ್ಧಗಳಲ್ಲಿ ಕೊನೆಯದರಲ್ಲಿ ಮುಖಕ್ಕೆ ಮಂಗಳಾರತಿ ಆಗುವುದರ ಒಳಗೆ ಮಧ್ಯ ಏಷ್ಯದಲ್ಲಿ ಒಂದು ಪ್ರಚಂಡ ಪ್ರಳಯವೇ ಆಗಿತ್ತು. ಚ೦ಗೀಸ್ ಖಾನನು ತನ್ನ ಪಶ್ಚಿಮದ ವಿಧ್ವಂಸಕ ಯಾತ್ರೆಯನ್ನು ಆರಂಭಿಸಿದನು. ೧೧೫೫ ರಲ್ಲಿ ಮಂಗೋಲಿಯದಲ್ಲಿ ಹುಟ್ಟಿದವನು, ಈ ಪ್ರಳಯಾಗ್ನಿಯನ್ನು ಹೊತ್ತಿಸಿ ೧೨೧೯ ರ ಹೊತ್ತಿಗೆ ಮಧ್ಯ ಏಷ್ಯವನ್ನೆಲ್ಲ ಹೊಗೆಕವಿದ ಸ್ಮಶಾನವನ್ನು ಮಾಡಿದ್ದನು. ಆಗ ಅವನೇನು ಹುಡುಗನಾಗಿರಲಿಲ್ಲ. ಬೊಖಾರ, ಸಾಮರಖಂಡ್, ಹೀರತ್, ಬಾಲ್ಟ್, ಮುಂತಾದ ಹತ್ತು ಲಕ್ಷಕ್ಕಿಂತ ಹೆಚ್ಚು ಪ್ರಜಾ ಸಂಖ್ಯೆಯ ಈ ಎಲ್ಲ ನಗರಗಳೂ ಉರಿದು ಬೂದಿಯಾದವು. ಚ೦ಗೀಸ್ ಖಾನ್ ರಷ್ಯದ ಕೀವ್ ನಗರದ ವರೆಗೆ ಹೋಗಿ ಹಿಂದಿರುಗಿದನು. ಬಾಗ್ದಾದ್ ಅವನ ದಾರಿಯಲ್ಲಿ ಇಲ್ಲದ ಕಾರಣ ಹೇಗೋ ಉಳಿದುಕೊಂಡಿತು. ಆತನು ತನ್ನ ಎಪ್ಪತ್ತೆರಡ ನೆಯ ವರ್ಷದಲ್ಲಿ ೧೨೨೭ ರಲ್ಲಿ ಸತ್ತನು. ಆತನ ವಂಶೀಕರು ಯೂರೋಪಿನೊಳಗೆ ಮುನ್ನುಗ್ಗಿದರು. ೧೨೫೮ರಲ್ಲಿ ಹುಲಾಗು ಬಾಗ್ದಾದ್ ನಗರವನ್ನು ಹಿಡಿದು ಸುಮಾರು ಐದುನೂರು ವರ್ಷಗಳಿಂದ ಹೆಚ್ಚಾಗಿ ಪ್ರಪಂಚದ ಎಲ್ಲ ಭಾಗಗಳ ಸಂಪತ್ತು ಬಂದು ಸೇರಿದ್ದ, ಜ್ಞಾನ ಮತ್ತು ಕಲೆಗಳಿಗೆ ಪ್ರಸಿದ್ದ ಕೇಂದ್ರ ವಾಗಿದ್ದ ಆ ಮಹಾನಗರವನ್ನು ನಿರ್ನಾಮ ಮಾಡಿದನು. ಅರಬ್ಬಿ-ಪಾರ್ಸಿ ನಾಗರಿಕತೆಯು ಮಂಗೋಲರ ಕೈಕೆಳಗೆ ಬಾಳಿದರೂ ಇದರಿಂದ ಆ ನಾಗರಿಕತೆಗೆ ಏಷ್ಯದಲ್ಲಿ ದೊಡ್ಡ ಧಕ್ಕೆ ತಗಲಿತು. ಮುಖ್ಯವಾಗಿ ಅದು ಉತ್ತರ ಆಫ್ರಿಕದಲ್ಲಿ ಮತ್ತು ಸ್ಪೇನ್‌ನಲ್ಲಿ ಮುಂದುವರಿಯಿತು. ಸಹಸ್ರಾರು ವಿದ್ವಾಂಸರು ತಮ್ಮ ಗ್ರಂಥಗಳನ್ನು ಹೊತ್ತು ಕೊಂಡು ಬಾಗ್ದಾದಿನಿ೦ದ ಕೈರೋ ನಗರಕ್ಕೆ ಮತ್ತು ಸ್ಪೇನಿಗೆ ಪಲಾಯನ ಮಾಡಿದರು. ಅಲ್ಲಿ ಪುನಃ ಕಲೆ ಮತ್ತು ಜ್ಞಾನದ ಪುನರುಜ್ಜಿವನವಾಯಿತು. ಆದರೆ ಸ್ಪೇನ್ ದೇಶವೇ ಅರಬ್ಬಿ ಜನರ ಕೈಯಿಂದ ಕಳಚುತ್ತಿತ್ತು. ಕಾರ್ಡೊಬ ೧೨೩೬ರಲ್ಲಿ ಕೈ ಬಿಟ್ಟು ಹೋಗಿತ್ತು. ಇನ್ನೂ ಎರಡುನೂರು ಐವತ್ತು ವರ್ಷಗಳ ಕಾಲ ಗ್ರಾನಡ ಅರಬ್ಬಿ ಸಂಸ್ಕೃತಿಗೆ ಒಂದು ಉಜ್ವಲಕೇಂದ್ರವಾಗಿ ಉಳಿದಿತ್ತು. ೧೪೯೨ರಲ್ಲಿ ಫರ್ಡಿನೆಂಡ್ ಮತ್ತು ಇಸಬೆಲ ಗ್ರಾನಡವನ್ನು ಜಯಿಸಿದ್ದರಿಂದ ಸ್ಪೇನಿನಲ್ಲಿ ಅರಬ್ಬಿ ಆಡಳಿತ ಮುಗಿಯಿತು. ಅನಂತರ ಅರಬ್ಬಿ ಸಂಸ್ಕೃತಿಗೆ ಕೈರೋ ಪಟ್ಟಣವು- ತುರ್ಕಿಯ ಅಧೀನ ನಾದರೂ ಕೇಂದ್ರವಾಯಿತು. ಆಟೊಮನ್ ತುರ್ಕಿ ಜನರು ೧೪೫೩ರಲ್ಲಿ ಕಾನ್‌ಸ್ಟೆಂಟಿನೋಪಲ್ ನಗರವನ್ನು ಹಿಡಿದರು. ಇದರಿಂದ ಯೂರೋಪಿನ ಪುನರುಜೀವನಕ್ಕೆ ಕಾರಣಭೂತವಾದ ನೂತನ ಶಕ್ತಿಗಳು ಹೊರಹೊಮ್ಮಿದುವು.

ಏಷ್ಯ ಮತ್ತು ಯೂರೋಪಿನಲ್ಲಿ ಮಂಗೋಲರ ವಿಜಯದಿಂದ ಯುದ್ಧ ಕಲೆಯಲ್ಲಿ ಒಂದು ಹೊಸ ವಿಧಾನವು ಕಂಡುಬಂದಿತು. ಈ ಪ್ರಮಾಣದಲ್ಲಿ ಮತ್ತು ಗುಣದಲ್ಲಿ ಆಕಸ್ಮಿಕದಲ್ಲಿ ಮತ್ತು ಚಲನೆಯಲ್ಲಿ, ರಚನಾಕೌಶಲ್ಯದಲ್ಲಿ ಮತ್ತು ಅಪ್ರತ್ಯಕ್ಷವಾಗಿ ಬಂದೊದಗಿದ ಬುದ್ದಿವಂತಿಕೆಯಲ್ಲಿ ಮಂಗೋಲರ ಈ ದಂಡಯಾತ್ರೆಗಳನ್ನು ಹೋಲತಕ್ಕವು ಇತಿಹಾಸದಲ್ಲಿ ಯಾವುವೂ ಇಲ್ಲ” ಎಂದು ಪ್ರಸಿದ್ಧ ಚರಿತ್ರಕಾರನಾದ ಲಿಡ್ಡೆಲ್ ಹಾರ್ಟ್ ಹೇಳುತ್ತಾನೆಪ್ರಪಂಚದಲ್ಲಿ ಜನ್ಮತಾಳಿದ ಮಹಾಸೇನಾನಿಗಳಲ್ಲಿ ಚಂಗೀಸ್ ಖಾನನು ಅತಿ ಶ್ರೇಷ್ಠ ನಲ್ಲದಿದ್ದರೂ, ಶ್ರೇಷ್ಠ ರಲ್ಲಿ ಒಬ್ಬ. ಏಷ್ಯ ಮತ್ತು ಯೂರೋಪುಗಳ ಪೌರಸವೆಲ್ಲ ಆತನ ಮತ್ತು ಆತನ ವಂಶೀಕರ ಎದುರು ಹುಲ್ಲುಕಡ್ಡಿ ಯಂತೆ ಉರುಬಿಹೋಯಿತು. ಮಧ್ಯ ಮತ್ತು ಪಶ್ಚಿಮ ಯೂರೋಪು ಆತನ ಅಧೀನವಾಗದಿದ್ದುದು ಕೇವಲ ಆಕಸ್ಮಿಕ, ಯೂರೋಪು ತನ್ನ ನೂತನ ಯುದ್ಧ ಕಲೆ ಮತ್ತು ಕೌಶಲ್ಯವನ್ನು ಈ ಮಂಗೋಲರಿಂದ ಕಲಿಯಿತು. ಬಂದೂಕಿನ ಮಸಿಯ ಉಪಯೋಗವನ್ನು ಚೀನದಿಂದ ತಂದು ಯೂರೋಪಿಗೆ ಕಲಿಸಿದವರೂ ಈ ಮಂಗೋಲರೆ.

ಮಂಗೋಲರು ಇಂಡಿಯಕ್ಕೆ ದಂಡೆತ್ತಿ ಬರಲಿಲ್ಲ. ಸಿಂಧು ನದಿಯ ದಡದಲ್ಲಿಯೇ ನಿಂತು ಅವರ ದಂಡಯಾತ್ರೆಗಳನ್ನು ಬೇರೆ ಕಡೆಗಳಲ್ಲಿ ಮುಂದುವರಿಸಿದರು. ಅವರ ಮಹಾ ಸಾಮ್ರಾಜ್ಯವು ಒಡೆದು ಹೋದಾಗ ಏಷ್ಯದಲ್ಲಿ ಅನೇಕ ಸಣ್ಣ ರಾಜ್ಯಗಳು ಹುಟ್ಟಿದುವು. ೧೩೬೯ರಲ್ಲಿ, ತನ್ನ ತಾಯಿಯ ಮೂಲಕ