ಪುಟ:ಭಾರತ ದರ್ಶನ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪೪

ಭಾರತ ದರ್ಶನ

ತೋರಿದಾಗ ತಮಗೆ ಬೇಕಾದವರಿಗೆ ಬೆನ್ನು ತಟ್ಟಿ ಸಹಾಯಮಾಡಿ ಒಬ್ಬರಮೇಲೊಬ್ಬರನ್ನು ಎತ್ತುಗಟ್ಟುವುದೇ ಅವರ ನೀತಿಯಾಗಿತ್ತು. ಇತರ ಪಕ್ಷಗಳು ಬುದ್ದಿವಂತರಿದ್ದಿದ್ದರೆ ಈ ತೊಂದರೆ ನಿವಾರಿಸಿಕೊಳ್ಳಬಹುದಿತ್ತು. ಆದರೆ ಆ ವಿವೇಕವಾಗಲಿ ದೂರದೃಷ್ಟಿಯಾಗಲಿ ಬರಲಿಲ್ಲ. ಒಪ್ಪಂದವಾಯಿತೆಂದು ತೋರುವ ಸಮಯದಲ್ಲಿ ಸರಕಾರವು ಮಧ್ಯೆ ಪ್ರವೇಶಮಾಡಿ ಎಲ್ಲವನ್ನೂ ತಲೆಕೆಳಗೆ ಮಾಡಿ ಬಿಡುತ್ತಿತ್ತು

ಅಲ್ಪ ಸಂಖ್ಯಾತರ ರಕ್ಷಣೆಗೆ ಅಂತರ ರಾಷ್ಟ್ರೀಯ ಸಂಘದ ನಿರ್ಣಯದಂತೆ ಸರ್ವಸಾಮಾನ್ಯ ವಿಧಿಗಳನ್ನು ನಿರ್ಮಿಸಲು ಯಾವ ಆಕ್ಷೇಪಣೆಯೂ ಇರಲಿಲ್ಲ. ಇನ್ನೂ ಹೆಚ್ಚಿನ ರಕ್ಷಣೆಯನ್ನೇ ಒಪ್ಪಿ ಒದಗಿಸಲಾಗಿತ್ತು, ಅಲ್ಪಸಂಖ್ಯಾತರ ಧರ್ಮ, ಸಂಸ್ಕೃತಿ, ಭಾಷೆ, ವ್ಯಕ್ತಿ ಮತ್ತು ಪಂಗಡದ ಮೂಲಭೂತ ಹಕ್ಕುಗಳು ಇವೆಲ್ಲಕ್ಕೂ ರಕ್ಷಣೆಕೊಡಲು ಒಪ್ಪಲಾಗಿತ್ತು. ಪ್ರಜಾಪ್ರಭುತ್ವ ತತ್ವದ ತಳಹದಿಯಮೇಲೆ ರಚಿಸುವ ಸಂವಿಧಾನದಲ್ಲಿ ಎಲ್ಲರಿಗೂ ಅನ್ವಯಿಸುವಂತೆ ಈ ಮೂಲಭೂತ ಹಕ್ಕುಗಳನ್ನು ಒದಗಿಸುವುದಾಗಿ ಭರವಸೆ ಕೊಡಲಾಯಿತು. ಇವೆಲ್ಲಕ್ಕೂ ಹೆಚ್ಚಾಗಿ ಭಾರತದ ಇತಿಹಾಸವೆಂದರೆ ಪರಧರ್ಮ ಸಹಿಷ್ಣುತೆಯ ಇತಿಹಾಸ; ಅಲ್ಪಸಂಖ್ಯಾತರ ಮತ್ತು ವಿದೇಶೀಯರ ಪ್ರೋತ್ಸಾಹದ ಇತಿಹಾಸ, ಯೂರೋಪಿನ ಧರ್ಮಾಂಧತೆಯ ಯುದ್ಧಗಳು ಮತ್ತು ಪರಧರ್ಮಿಯರ ಹಿಂಸೆಗೆ ಸರಿತೂಗುವ ನಿದರ್ಶನ ಒಂದೂ ಇಲ್ಲಿ ದೊರೆಯುವುದಿಲ್ಲ. ಆದ್ದರಿಂದ ಪರಧರ್ಮ ಮತ್ತು ಪರಸಂಸ್ಕೃತಿ ಸಹಿಷ್ಣುತೆಯನ್ನು ಪರದೇಶಗಳಿಂದ ಭಾರತ ಕಲಿಯಬೇಕಾದುದು ಏನೂ ಇರಲಿಲ್ಲ. ಅವು ಭಾರತೀಯರ ಸಹಜಗುಣಗಳಾಗಿದ್ದವು. ವೈಯಕ್ತಿಕ ಮತ್ತು ರಾಜಕೀಯ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳ ವಿಷಯದಲ್ಲಿ ಫ್ರೆಂಚ್ ಮತ್ತು ಅಮೆರಿಕೆಯ ಕ್ರಾಂತಿಗಳಿಂದ, ಬ್ರಿಟಿಷ್ ಪಾರ್ಲಿ ಮಂಟನ ಸಂವಿಧಾನದ ಇತಿಹಾಸದಿಂದ ಪಾಠಕಲಿಯಲು ಸಿದ್ದರಿದ್ದೆವು. ಅನಂತರ ಬಂದ ಸಮಾಜವಾದ ಮತ್ತು ಸೋವಿಯಟ್ ಕ್ರಾಂತಿಗಳು ನಮ್ಮ ಆರ್ಥಿಕಭಾವನೆಗಳಮೇಲೆ ಪ್ರಬಲ ಪರಿಣಾಮಮಾಡಿದವು.

ವ್ಯಕ್ತಿ ಮತ್ತು ಪಂಗಡಗಳ ಹಕ್ಕುಗಳಿಗೆ ಪೂರ್ಣರಕ್ಷಣೆಕೊಡುವದಲ್ಲದೆ ವ್ಯಕ್ತಿ ಮತ್ತು ಪಂಗಡಗಳ ಪೂರ್ಣ ವಿಕಾಸಕ್ಕೆ ಸಮಾಜದಲ್ಲಿನ ಎಲ್ಲ ಸಾಂಪ್ರದಾಯಕ ನಿರ್ಬಂಧಗಳನ್ನೂ ನಿರ್ಮೂಲಮಾಡಲು ರಾಷ್ಟ್ರವೂ ಮತ್ತು ಖಾಸಗಿ ಸಂಸ್ಥೆಗಳೂ ಎಲ್ಲ ಪ್ರಯತ್ನ ಮಾಡಬೇಕೆಂದೂ, ವಿದ್ಯೆ ಮತ್ತು ಆರ್ಥಿಕ ಪ್ರಗತಿಯಲ್ಲಿ ಹಿಂದೆ ಉಳಿದಪಂಗಡಗಳಿಗೆ ಆದಷ್ಟು ಬೇಗ ತಮ್ಮ ನ್ಯೂನತೆ ಕಳೆದುಕೊಂಡು ಮುಂದೆಬರಲು ಸಹಾಯ ಮಾಡಬೇಕೆಂದೂ ಒಪ್ಪಿದೆವು. ಹೆಂಗಸರಿಗೆ ಗಂಡಸರಂತೆ ಸಮಾನ ನಾಗರಿಕ ಹಕ್ಕು ಇರಬೇಕೆಂದು ಸಹ ತೀರ್ಮಾನಿಸಿದೆವು.

ಇನ್ನು ಉಳಿದುದೇನು ? ಬಹು ಸಂಖ್ಯಾತ ಪಂಗಡದವರು ರಾಜಕೀಯದಲ್ಲಿ ಅಲ್ಪಸಂಖ್ಯಾತರನ್ನು ತುಳಿಯಬಹುದೆಂದು, ಬಹು ಸಂಖ್ಯಾತರೆಂದರೆ ರೈತರು ಮತ್ತು ಶ್ರಮಜೀವಿಗಳು; ಅವರಲ್ಲಿ ಎಲ್ಲಮತದವರೂ ಇದ್ದರು; ಬಹುಕಾಲದಿಂದ ಅವರೆಲ್ಲರನ್ನು ತುಳಿದವರು ಬ್ರಿಟಿಷರು ಮಾತ್ರವಲ್ಲದೆ ಭಾರತೀಯ ಶ್ರೀಮಂತರೂ ಅವರೊಂದಿಗೆ ಸೇರಿದ್ದರು. ಧರ್ಮ ಮತ್ತು ಸಂಸ್ಕೃತಿ ರಕ್ಷಣೆಯ ಭರವಸೆ ದೊರೆತಮೇಲೆ ಉಳಿದ ಮುಖ್ಯ ಪ್ರಶ್ನೆ ಎಂದರೆ ಆರ್ಥಿಕ ಪ್ರಶ್ನೆ, ವ್ಯಕ್ತಿಯ ಆರ್ಥಿಕ ಪ್ರಶ್ನೆಗೂ ಅವನ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ. ಆರ್ಥಿಕ ಘರ್ಷಣೆಗಳಿಗೆ ಅವಕಾಶವಿರುವುದು ಸಹಜ. ಆದರೆ ಆಸ್ತಿರಕ್ಷಣೆಯ ಪ್ರಶ್ನೆ ಇಲ್ಲದೆ ಧರ್ಮದ ಹೆಸರಿನಲ್ಲಿ ಘರ್ಷಣೆಗೆ ಅವಕಾಶವೇ ಇಲ್ಲ. ಆದರೂ ಜನರ ಮನಸ್ಸು ಕೋಮುವಾರು ಭಿನ್ನತೆಯ ಹಿಂದೆಯೇ ಓಡಲಾರಂಭಿಸಿತು; ಕೋಮುವಾರು ಸಂಸ್ಥೆಗಳೂ ಸರ್ಕಾರವೂ ಅದಕ್ಕೆ ಪ್ರೋತ್ಸಾಹಕೊಟ್ಟವು; ಬಹು ಸಂಖ್ಯಾತ ಹಿಂದುಗಳು ತಮ್ಮನ್ನು ತುಳಿಯುತ್ತಾರೆಂಬ ಭಾವನೆ ಮುಸ್ಲಿಂರಲ್ಲಿ ಬಲಗೊಳ್ಳಲಾರಂಭಿಸಿತು. ಮುಸ್ಲಿಮರು ಕೆಲವು ಪ್ರಾಂತಗಳಲ್ಲಿ ಕೇಂದ್ರೀಕೃತರಾಗಿ ಬಹುಸಂಖ್ಯಾತರಿದ್ದು ಪ್ರಾಂತಗಳಿಗೆ ಪೂರ್ಣ ಸ್ವಾಯತ್ತೆಯು ದೊರೆಯತಕ್ಕದಿದ್ದುರಿಂದ ಅಷ್ಟು ಪ್ರಬಲ ಅಲ್ಪಸಂಖ್ಯಾತ ಪಂಗಡವನ್ನು ಬಹು ಸಂಖ್ಯಾ ಶರು ತುಳಿಯಲು ತಾನೇ ಹೇಗೆ ಸಾಧ್ಯ ಎಂಬುದು ಅರ್ಥವಾಗಲಿಲ್ಲ. ಆದರೆ ಭಯಗ್ರಸ್ತರಿಗೆ ವಿಚಾರಪರತೆ ಎಲ್ಲಿ?

ಮೊದಲು ಮುಸ್ಲಿಮರಿಗೆ ಅನಂತರ ಇತರ ಪಂಗಡಗಳಿಗೆ ಪ್ರತ್ಯೇಕ ಚುನಾವಣಾ ಪದ್ಧತಿ ಏರ್ಪಡಿಸಿ ಅವರ ಸಂಖ್ಯೆಗಿಂತ ಹೆಚ್ಚು ಪ್ರಾತಿನಿಧ್ಯ ಒದಗಿಸಲಾಯಿತು. ಆದರೆ ಈ ವಿಶೇಷ ಪ್ರಾತಿನಿಧ್ಯದಿಂದ ಸಹ