ಪುಟ:ಭಾರತ ದರ್ಶನ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನ್ವೇಷಣೆ

೪೭

ಸಾಧ್ಯವಿಲ್ಲದವರಿಗೆ ಅವಕಾಶವೇ ಇರಲಿಲ್ಲ; ಸುಮ್ಮನೆ ಹಿಂದುಳಿಯುತ್ತಿದ್ದರು. ಹಾಗಾದರೆ ಪ್ರಜಾಸತ್ತೆ ಎಂದರೆ ಮಂದಮತಿಗಳಿಗೆ ತಂಟೆಕೋರರಿಗೆ ವಿಚಾರಶೂನ್ಯರಿಗೆ ಮಾತ್ರ ಮೀಸಲೆ?

ಸಣ್ಣ ಚುನಾವಣಾ ಕ್ಷೇತ್ರಗಳಲ್ಲಂತೂ ಈ ತೊಂದರೆಗಳು ವಿಪರೀತ, ದೊಡ್ಡ ಕ್ಷೇತ್ರಗಳಲ್ಲಿ ಇವುತಲೆ ಎತ್ತಲು ಅಷ್ಟು ಅವಕಾಶವಾಗುತ್ತ ಇರಲಿಲ್ಲ; ಒಂದು ವೇಳೆ ಇದ್ದರೂ ತೊಂದರೆಯಾಗುತ್ತಿರಲಿಲ್ಲ. ದೊಡ್ಡ ದೊಡ್ಡ ಚುನಾವಣಾ ಕ್ಷೇತ್ರಗಳು ಸಹ ಯಾವುದೋ ಅಲ್ಪ ವಿಷಯ ಅಥವ ಜಾತಿಯ ಪ್ರಶ್ನೆ ಗಳಮೇಲೆ ಅವಿವೇಕಕೊಳಗಾಗಬಹುದಾಗಿತ್ತು. ಆದರೆ ಅಂತಹ ಅನಾಹುತ ತಪ್ಪಿಸಲು ಕೆಲವು ಸದವಕಾಶಗಳೂ ಇರುತ್ತಿದ್ದು ವು. ಮತದಾನದ ಹಕ್ಕು ಎಷ್ಟು ವ್ಯಾಪಕವಾದರೆ ಅಷ್ಟು ಮೇಲು ಎಂಬ ನನ್ನ ನಂಬಿಕೆ ದೃಢಪಟ್ಟಿತು. ಆಸ್ತಿ ಅಥವ ವಿದ್ಯೆಯ ಅರ್ಹತೆಯ ಮೇಲಿನ ಸಣ್ಣ ಕ್ಷೇತ್ರಕ್ಕಿಂತ ವಿಶಾಲಕ್ಷೇತ್ರದಲ್ಲಿ ನಂಬಿಕೆ ಹೆಚ್ಚು. ಆಸ್ತಿಯ ಅರ್ಹತೆಯಂತೂ ಬಹಳ ಕೆಟ್ಟದ್ದು. ವಿದ್ಯೆಯ ಅರ್ಹತೆ ಬೇಕೇ ಬೇಕು, ಅವಶ್ಯವೂ ಹೌದು. ಆದರೆ ವಿದ್ಯೆ ಇಲ್ಲದಿದ್ದರೂ ಒಳ್ಳೆಯ ಅನುಭವಸ್ಥ ರೈತನ ಅಭಿಪ್ರಾಯ ಅಲ್ಪ ವಿದ್ಯೆಯ ಮನುಷ್ಯನ ಅಭಿಪ್ರಾಯಕ್ಕಿಂತ ಯಾವ ರೀತಿಯಲ್ಲೂ ಕೀಳಲ್ಲ. ಏನೇ ಆಗಲಿ ಮುಖ್ಯ ಸಮಸ್ಯೆ ರೈತನದಿರುವಾಗ ರೈತನ ಅಭಿಪ್ರಾಯವೇ ಮುಖ್ಯ. ಗಂಡಸರಾಗಲಿ, ಹೆಂಗಸರಾಗಲಿ ವಯಸ್ಕರಿಗೆಲ್ಲ ಮತದಾನದ ಹಕ್ಕು ಇರಲೇಬೇಕೆಂಬುದು ನನ್ನ ಖಚಿತ ಅಭಿಪ್ರಾಯ ; ತೊಂದರೆಗಳೇನೋ ಇವೆ. ಆದರೆ ಇಂಡಿಯದಲ್ಲಿ ಆಚರಣೆಗೆ ತರಲು ಇರುವ ವಿರೋಧವೆಲ್ಲ ಆಸ್ತಿವಂತರ ಮತ್ತು ಬಂಡವಾಳಗಾರರ ಭೀತಿಯ ಭೂತಗಳು.

೧೯೩೭ರಲ್ಲಿ ನಡೆದ ಪ್ರಾಂತ್ಯ ಶಾಸನ ಸಭೆಗಳ ಸಾರ್ವತ್ರಿಕ ಚುನಾವಣೆಗಳಲ್ಲಿ ಬಹಳ ಸ್ವಲ್ಪ ಜನರಿಗೆ, ಶೇಕಡ ೧೨ರಷ್ಟು ಜನರಿಗೆ ಮಾತ್ರ, ಮತದಾನದ ಹಕ್ಕು ಇತ್ತು. ಆದರೆ ಹಿಂದೆ ಇದ್ದ ಸಂಖ್ಯೆಯೊಂದಿಗೆ ಹೋಲಿಸಿ ನೋಡಿದರೆ ಇದೇ ಒಂದು ದೊಡ್ಡ ಪ್ರಗತಿಯಾಗಿತ್ತು. ಸಂಸ್ಥಾನಗಳನ್ನು ಬಿಟ್ಟು ಭಾರತದಲ್ಲಿ ಆಗ ೩ ಕೋಟಿ ಜನ ಮತದಾರರಿದ್ದರು. ಸಂಸ್ಥಾನಗಳನ್ನು ಬಿಟ್ಟು ಭಾರತದಲ್ಲಿ ದೇಶಾದ್ಯಂತ ಈ ಚುನಾವಣೆಗಳು ನಡೆಯಬೇಕಾಗಿತ್ತು. ಪ್ರತಿ ಪ್ರಾಂತ್ಯದಲ್ಲೂ ಶಾಸನ ಸಭೆಗೆ ಚುನಾವಣೆಯಾಗಬೇಕಾಗಿತ್ತು. ಕೆಲವು ಪ್ರಾಂತಗಳಲ್ಲಿ ಎರಡು ಸಭೆಗಳು, ಎರಡು ತರಹೆ ಚುನಾವಣೆಗಳು, ಉಮೇದುವಾರರ ಸಂಖ್ಯೆ ಸಾವಿರಗಟ್ಟಲೆ.

ಚುನಾವಣೆಗಳ ವಿಷಯದಲ್ಲಿ ನನ್ನ ದೃಷ್ಟಿ ಯೂ ಮತ್ತು ಇನ್ನೂ ಕೆಲವು ಕಾಂಗ್ರೆಸಿನವರ ದೃಷ್ಟಿಯೂ ಸಾಮಾನ್ಯ ದೃಷ್ಟಿ ಗಿಂತ ಭಿನ್ನವಿತ್ತು. ವ್ಯಕ್ತಿಗಳ ಕಡೆ ನಾನು ಗಮನ ಕೊಡಲಿಲ್ಲ. ಕಾಂಗ್ರೆಸ್ ಪ್ರತಿಬಿಂಬಿಸುವ ರಾಷ್ಟ್ರೀಯ ಚಳವಳಿ ಮತ್ತು ಚುನಾವಣಾ ಘೋಷಣೆಯಲ್ಲಿ ಅಡಕವಾದ ಕಾರ್ಯ ಕ್ರಮದ ಪರ ದೇಶಾದ್ಯಂತ ಒಂದು ಒಳ್ಳೆಯ ವಾತಾವರಣವನ್ನುಂಟುಮಾಡ ಬೇಕೆಂದು ಯೋಚಿಸಿದೆ. ಇದರಲ್ಲಿ ನಮಗೆ ಯಶಸ್ಸು ದೊರೆತರೆ ಎಲ್ಲ ಸರಿಹೋಗುವುದು; ಇಲ್ಲವಾದರೆ ಒಂದೆರಡು ಸ್ಥಳಗಳಲ್ಲಿ ಸೋಲಾದರೂ ನಷ್ಟವಿಲ್ಲ ಎಂದೆ.

ತಾತ್ವಿಕ ದೃಷ್ಟಿಯಿಂದ ಮತದಾರರಲ್ಲಿ ಪ್ರಾರ್ಥನೆ ಮಾಡುತ್ತಿದ್ದೆ. ನಮ್ಮ ಧೈಯಸಾಧನೆಯ ಮುಂದಾಳುಗಳೆಂದು ಸೂಚಿಸುತ್ತಿದ್ದುದರ ಹೊರತು ಬೇರೆ ವಿಧದಲ್ಲಿ ಉಮೇದುವಾರರ ಮಾತನ್ನೆ ಎತ್ತುತ್ತಿರಲಿಲ್ಲ. ಅನೇಕರು ನನಗೆ ಗೊತ್ತಿದ್ದರು; ಉಳಿದವರ ಪರಿಚಯವೇ ಇರಲಿಲ್ಲ, ನೂರಾರು ಹೆಸರುಗಳನ್ನು ಜ್ಞಾಪಕದಲ್ಲಿಡುವುದು ಅನಾವಶ್ಯಕವಾಗಿ ಕಂಡಿತು. ಕಾಂಗ್ರೆಸ್‌ಗಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರದ ಹೋರಾಟಕ್ಕಾಗಿ ನಾನು ವೋಟು ಬೇಡಿದೆ. ಸ್ವಾತಂತ್ರ ಸಿಗುವ ವರೆಗೆ ನಿರಂತರ ಹೋರಾಟವೆಂದು ವಿನಾ ಯಾವ ಭರವಸೆಯನ್ನೂ ಕೊಡಲಿಲ್ಲ. ನಮ್ಮ ಧೈಯ ನಮ್ಮ ಕಾರ್ಯಕ್ರಮಗಳನ್ನು ಒಪ್ಪಿದರೆ, ಅರ್ಥಮಾಡಿಕೊಂಡಿದ್ದರೆ ಮತ್ತು ಅವಕ್ಕನುಗುಣವಾಗಿ ನಡೆಯಲು ಸಿದ್ಧವಿದ್ದರೆ ಮಾತ್ರ ನಮಗೆ ಮತ ಕೊಡಿ ಇಲ್ಲವಾದರೆ ಬೇಡ ಎಂದು ಹೇಳಿದೆ. ನಮ್ಮ ಧೈಯ ಮತ್ತು ಕಾರ್ಯಕ್ರಮದಲ್ಲಿ ನಂಬಿಕೆ ಇಲ್ಲದಿದ್ದರೆ ಕಾಂಗ್ರೆಸ್ ಪರ ವೋಟುಮಾಡಬೇಡಿ ಎಂತಲೂ ಹೇಳಿದೆ. ನಮಗೆ ಯಾವ ಕೃತಕ ಮತದಾನವೂ ಬೇಕಿರಲಿಲ್ಲ; ಅವರ ವಿಶ್ವಾಸಕ್ಕೆ