ಪುಟ:ಭಾರತ ದರ್ಶನ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೫೧

ಸ್ಥಿತಿಯಲ್ಲಿ ಇಡಲು ತನಗೆ ಬೇಕಾದ ಹಣ, ಸಹಾಯ ಅಥವ ಇನ್ನಾವ ಸಲಕರಣೆಯನ್ನೂ ಒದಗಿಸಿಲ್ಲವೆಂದು ತಿಳಿಸಿದ. ಈ ಕಳೆದ ಎಂಟು ವರ್ಷಗಳಲ್ಲಿ ಏನಾಗಿದೆಯೊ ನಾನರಿಯ. ಪ್ರಾಯಶಃ ಇನ್ನೂ ಹೆಚ್ಚಿನ ಹಾನಿಯಾಗುತ್ತಿರಬೇಕು ; ಇನ್ನು ಸ್ವಲ್ಪ ವರ್ಷಗಳಲ್ಲಿ ಮೊಹೆಂಜೊದಾರೊವಿನ ವಿಶಿಷ್ಟ ಸ್ವರೂಪವೇ ನಾಶವಾಗುತ್ತದೆ,

ಈ ದುರಂತ ಅಕ್ಷಮ್ಯ. ಏನು ಕೊಟ್ಟರೂ ದೊರೆಯಲಾರದ ಅಮೂಲ್ಯ ವಸ್ತು ನಾಶಹೊಂದುತ್ತದೆ. ಉಳಿಯುವುದು ಕೆಲವು ಚಿತ್ರಗಳು, ಮತ್ತು ಹೀಗೆಂದು ಜ್ಞಾಪಕ ಕೊಡುವ ಕೆಲವು ವಿವರಣೆಗಳು.

ಮೊಹೆಂಜೋದಾರೋ ಮತ್ತು ಹರಪ್ಪಗಳಿಗೆ ಮಧ್ಯೆ ಬಹುದೂರವಿದೆ. ಈ ಎರಡು ಸ್ಥಳಗಳಲ್ಲಿ ಭೂಶೋಧನೆ ನಡೆದದ್ದೂ ಕೇವಲ ಆಕಸ್ಮಿಕ. ಈ ಎರಡು ಸ್ಥಳಗಳ ಮಧ್ಯೆ ಇನ್ನೂ ಅನೇಕ ಮಹಾ ನಗರಗಳೂ, ಪುರಾತನ ಮಾನವನ ಕುಶಲ ಕರ್ಮದ ಅನೇಕ ಪಳೆಯುಳಿಕೆಗಳೂ ಭೂಗತವಾಗಿವೆ ಎಂಬುದರಲ್ಲಿ ಸಂಶಯವಿಲ್ಲ. ಈ ನಾಗರಿಕತೆ ಭಾರತದ ಬಹುಭಾಗದಲ್ಲಿ, ಮುಖ್ಯವಾಗಿ, ಉತ್ತರ ಹಿಂದೂ ಸ್ಥಾನದಲ್ಲಿ ತುಂಬ ಹರಡಿತ್ತು. ಭಾರತದ ಪುರಾತನ ಇತಿಹಾಸದ ಶೋಧನಾ ಕಾರ್ಯವನ್ನು ಪುನಃ ಕೈಗೊಂಡು ಅದ್ಭುತ ಸಂಶೋಧನೆಗಳನ್ನು ಕಂಡುಹಿಡಿಯುವ ಕಾಲವೂ ಬರಬಹುದು. ಈ ನಾಗರಿಕತೆಯ ಕುರುಹುಗಳು ಪಶ್ಚಿಮದಲ್ಲಿ ಬಹುದೂರದ ಕಾಥೇವಾಡದಲ್ಲಿ, ಪಂಜಾಬಿನ ಅಂಬಾಲಾ ಜಿಲ್ಲೆ ಯಲ್ಲಿ ದೊರೆತಿವೆ. ಗಂಗಾನದಿಯ ಕಣಿವೆಯಲ್ಲ ಹಬ್ಬಿತ್ತು ಎಂದು ನಂಬಲು ಸಾಕಾದ ಪ್ರಮಾಣಗಳಿವೆ. ಆದ್ದರಿಂದ ಅದು ಸಿಂಧೂ ಕಣಿವೆಯ ನಾಗರಿಕತೆ ಎನ್ನುವುದಕ್ಕಿಂತ ಹೆಚ್ಚಿನದಾಗಿತ್ತು. ಮೊಹೆಂಜೊದಾರೊದಲ್ಲಿ ದೊರೆತಿರುವ ಲಿಪಿಯ ಅರ್ಥ ಇನ್ನೂ ತಿಳಿದಿಲ್ಲ.

ಆದರೆ ಈಗ ತಿಳಿದಿರುವಷ್ಟು ಸಹ ಅತಿ ಮಹತ್ವದ ವಿಷಯವಾಗಿದೆ. ಸಿಂಧೂ ಕಣಿವೆಯ ನಾಗರಿಕತೆ ಒಳ್ಳೆಯ ಉಚ್ಛಾಯಸ್ಥಿತಿಯಲ್ಲಿತ್ತು. ಪ್ರಾಯಶಃ ಆ ಮಟ್ಟಕ್ಕೆ ಬರಲು ಸಹಸ್ರಾರು ವರ್ಷಗಳಾದರೂ ಆಗಿರಬೇಕು. ಅದು ಬಹುಮಟ್ಟಿಗೆ ಲೌಕಿಕ ನಾಗರಿಕತೆಯಾಗಿದ್ದುದು ಒಂದು ಅತ್ಯಾಶ್ಚರ್ಯ; ಧಾರ್ಮಿಕ ವಿಷಯವಿದ್ದರೂ ಅದಕ್ಕೆ ಪ್ರಾಧಾನ್ಯವಿರಲಿಲ್ಲ. ಮುಂದೆ ಭಾರತದಲ್ಲಿ ಉದಯಿಸಿದ ಸಾಂಸ್ಕೃತಿಕ ಯುಗಗಳಿಗೂ ಅದೇ ಉಗಮಸ್ಥಾನ.

ಸರ್ ಜಾನ್ ಮಾರ್ಷಲ್ "ಮೊಹೆಂಜೊದಾರೊ ಹರಪ್ಪಗಳಲ್ಲಿ ದೊರೆತ ನಾಗರಿಕತೆ ಪ್ರಥಮಾ ವಸ್ಥೆಯ ನಾಗರಿಕತೆಯಲ್ಲ. ಅನೇಕ ಶತಮಾನಗಳ ಮಾನವ ಪ್ರಯತ್ನದಿಂದ ಭಾರತ ಭೂಮಿಯಲ್ಲಿ ಬೇರುಬಿಟ್ಟಿರುವ ಹಳತಾದ ಸಹಸ್ರಾರು ವರ್ಷಗಳ ಹಿಂದಿನ ನಾಗರಿಕತೆ, ಪರ್ಷಿಯ, ಮೆಸೊಪೊಟೋಮಿಯ, ಈಜಿಪ್ಟ್ ದೇಶಗಳಂತೆ ಇಂಡಿಯ ಸಹ ನಾಗರಿಕತೆಯನ್ನು ಹರಡುವ ಉದ್ಯಮ ಆರಂಭಿಸಿ, ಬೆಳೆಸಿದ ದೇಶ ಎಂದು ಇನ್ನು ಮುಂದೆ ಪರಿಗಣಿಸಬೇಕು” ಎಂದಿದ್ದಾರೆ. ಮತ್ತು “ಇಂಡಿಯದ ಇತರ ಭಾಗಗಳಲ್ಲಿ ಅಲ್ಲದಿದ್ದರೂ ಪಂಜಾಬ್ ಮತ್ತು ಸಿಂಧು ದೇಶಗಳಲ್ಲಿ ಮೆಸೊಪೊಟೇಮಿಯ ಮತ್ತು ಈಜಿಪ್ಟ್ ಗಳಲ್ಲಿ ಇದ್ದ ಮಾದರಿಯ ಮತ್ತು ಕೆಲವು ವಿಷಯಗಳಲ್ಲಿ ಅದಕ್ಕೂ ಮುಂದುವರಿದಿದ್ದ ಒಂದೇ ಬಗೆಯ ಉತ್ತಮ ನಾಗರಿಕತೆ ಹರಡಿತ್ತು” ಎಂದು ಹೇಳಿದಾರೆ.

ಸಿಂಧೂ ಕಣಿವೆಯ ಈ ಜನ ಆ ಕಾಲದ ಸುಮೇರಿಯನ್ ನಾಗರಿಕತೆಯೊಂದಿಗೆ ಅನೇಕ ವಿಧವಾಗಿ ಸಂಬಂಧ ಬೆಳಸಿದ್ದರು. ಅಕ್ಕಡದಲ್ಲಿ ಪ್ರಾಯಶಃ ಭಾರತೀಯ ವರ್ತಕರ ಒಂದು ಪಾಳೆಯವೇ ಇದ್ದಂತೆ ಸಾಕ್ಷ ದೊರೆಯುತ್ತದೆ. “ಸಿಂಧೂನದೀ ತೀರದ ನಗರಗಳಲ್ಲಿ ತಯಾರಾದ ಮಾಲುಗಳು ಟೈಗ್ರಿಸ್ ಮತ್ತು ಯೂಫ್ರೆಟಿಸ್ ನದೀದಡದ ಪೇಟೆಗಳಲ್ಲಿ ಮಾರಾಟಕ್ಕೆ ದೊರೆಯುತ್ತಿದ್ದವು. ಅದೇ ರೀತಿ ಸುಮೇರಿಯನ್ ನಾಗರಿಕತಯ ಕೆಲವು ಕಲಾವಸ್ತುಗಳು, ಮೆಸೊಪೊಟೇಮಿಯದ ಅಲಂಕಾರ ಸಾಮಗ್ರಿಗಳು, ಒಂದು ದುಂಡು ಮುದ್ರೆ ಸಿಂಧುದಡದಲ್ಲಿ ದೊರೆತಿವೆ. ವ್ಯಾಪಾರವು ಕಚ್ಚಾ ಮಾಲು, ಮತ್ತು ಭೋಗದ ಮಾಲುಗಳಲ್ಲಿ ಮಾತ್ರ ನಡೆಯುತ್ತಿರಲಿಲ್ಲ. ಅರಬ್ಬಿ ಸಮುದ್ರದಿಂದ ನಿತ್ಯವೂ ಬರುತ್ತಿದ್ದ ವಿಾನು ಮೊಹೆಂಜೊದಾರೊ ನಾಗರಿಕರಿಗೆ ಆಹಾರವಸ್ತುವಾಗಿತ್ತು" (ಗಾರ್ಡನ್ ಚೈಲ್ಡ್).