ಪುಟ:ಮಾತೃನಂದಿನಿ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಸತೀಹಿತ್ಯ ಹೀಗೇ ಬಹುದು !. ವಿಶೇಷ ವಿವರಣಾವೇಕೆ? ಪ್ರಕೃತದಲ್ಲಿ ನಮಗೆ ಬೇಕಾಗಿರುವುದು ನಗೇಶರಾಯನ ಮತ್ತು ಆತನ ಬಂಧು-ಮಿತ್ರಪರಿವಾರದವರ ವಿಚಾರವಷ್ಟೆ? ಅದನ್ನೇ ಇಲ್ಲಿ ಸ್ಪಷ್ಟ ಪಡಿಸಿಟ್ಟರೆ ಸಾಕಾಗಿರುವುದು.

  • ನಮ್ಮ ದೇಶಭಕ್ತ ನಗೇಶರಾಯನ ಕಡೆಗೆ, ಗುರುಪೀಠದಿಂದ ಬಹಿಷ್ಕಾರ ಪತ್ರವು ಬಂದು ಒಂದೆರಡು ವಾರಗಳಾದುವು. ಆದರೂ, ನಗೇಶನಾಗಲೀ, ಆತನ ಅನುಗಾಮಿಗಳಾಗಲೀ ಯಾರೂ, ಪ್ರಾಯಶ್ಚಿತ್ತದ ಅಥವಾ ಅಪರಾಧ ಕ್ಷಮಾಪ್ರಾರ್ಥನೆಯ ಮಾತನ್ನಾದರೂ ಎತ್ತಿರುವಂತೆ ಕಂಡುಬಂದುದಿಲ್ಲ. ಇದರಿಂದ ಭಟ್ಟಾಚಾರ್ಯರಾದಿಯಾಗಿ ಪೀಠಾಶ್ರಿತರೆಲ್ಲರಿಗೂ ವಿಪರೀತ ಸಂಕಟ. ಏಕೆಂದರೆ, ನಗೇಶನಿಂದ ಆವರೆಗೆ ತಮಗೆ ದೊರೆಯುತ್ತಿದ್ದ ದಕ್ಷಿಣಾಪೂರ್ವಕವಾದ ಸುಖಭೋಜನವೂ, ಹಬ್ಬ-ಹುಣ್ಣಿಮೆ, ಮದುವೆ-ಮು೦ಜೆ, ವ್ರತ-ನೇಮ - ಸಂತರ್ಪಣೆಗಳಿಗೆಂದು ಪಡೆಯುತ್ತಿದ್ದ ದ್ರವ್ಯಸಹಾಯವೂ, ಇನ್ನೂ ಅನೇಕ ವಿಧವಾದ ಲಾಭಗಳೂ ಈಗ ಬಂದಾಗಿ ಹೋದುವು. ತಮ್ಮಲ್ಲಿ ಯಾರಿಗೂ ಒಂದು ಕುರುಡು ಕವಡೆಯಾಗಲೀ ಆತ ನಿಂದ ಬರುವಂತೆ ಕಾಣಲಿಲ್ಲ. ಇನ್ನೇನು ಮಾಡಬೇಕು ? ಇದಿರೆ ಬಂದು ಹೇಳಿ ಕೇಳುವಷ್ಟು ಧೈರ್ಯ-ಸ್ಥೈರ್ಯ-ಸಾಹಸಗಳು ಯಾರಿಗೂ ಇಲ್ಲ. ನಗೇಶನು ಕೈಯಲ್ಲಾಗದ ಹೇಡಿ ಗಂಡಸಾಗಿದ್ದರೆ, ಇಷ್ಟು ಹೊತ್ತಿಗೆ ಅವನಾಗಲೇ ಇವರ ಬಲೆಯಲ್ಲಿ ಬೀಳುತ್ತಿದ್ದನು. ಈಗ ಹಾಗಾಗಲಿಲ್ಲ; ಅಗುವನೆಂದು ಯೋಚಿಸುವಂತೆಯೂ ಇಲ್ಲ. ಏಕೆಂದರೆ, ಪಾಪ! ಶಿವಪುರದ ಮಹಾಜನರು, ಗುರುಪೀಠದ ಸಮಕ್ಷದಲ್ಲಿ ಕಂಕಣ ಕಟ್ಟಿಕೊಂಡಂತೆ ನಡೆಯ ಬೇಕಲ್ಲವೆ? ಅವರು ನಗೇಶನಿಗೂ ಅವನ ಅನುಗಾಮಿಗಳಿಗೂ ಸಹಾಯ ಮಾಡುವ ಮಾತು ಹಾಗಿರಲಿ; ಅವರ ಸೊಕ್ಕನ್ನು ಮುರಿದು. ಹೇಗಾದರೂ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬೇಕೆಂದು ತೊಟ್ಟಿರುವ ಹಠವನ್ನಾದರೂ ಸಾಧಿಸಿಕೊಂಡರೆ ಸಾಕು. ಅದು ಹೇಗಾಗಬೇಕು?

ಹೇಸಿಕೆ, ತಂಬುಲ, ಮಸಿಯ ಮಡಕೆ, ವಿಕೃತಾಕಾರದ ಮಾಟದ ಜೊಂಬೆಗಳು, ಇವೆಲ್ಲವನ್ನೂ ದಿನವೂ ಬೆಳಗಾಗುವುದರೊಳಗಾಗಿ ಮನೆಯ ಮುಂದೆ ತಂದು ತುಂಬಿಸುವುದೂ, ರಾತ್ರಿಯಲ್ಲಿ ಮನೆಯಮೇಲೆ ಕಲ್ಲುಗಳನ್ನೆಸುವುದೂ, ಇನ್ನೂ ಎಷ್ಟೆಷ್ಟೋ ಕೆಟ್ಟ ಕೆಲಸಗಳನ್ನು ಮಾಡಿಸಿದುರಾಯಿತು.