ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
139

ತಪ-ಮುಂತಾದ ಪರಿಕಲ್ಪನೆಗಳನ್ನು, ಒಟ್ಟು ವಸ್ತುವಿನ ಪ್ರಕಾಶನಕ್ಕೆ ಪೂರಕ ವಾಗಿ ಬಳಸಬಹುದು.

ಪ್ರಯೋಗಶೀಲನಾದ ಅರ್ಥದಾರಿ, ಹೇಗೆ ಪ್ರವರ್ತಿಸುತ್ತಾನೆ ಎಂಬುದಕ್ಕೆ ದೃಷ್ಟಾಂತಗಳಾಗಿ, ಕೆಲವು ಸಂದರ್ಭಗಳನ್ನೀಗ ನೋಡಬಹುದು:

1. ತಂದೆಗಾಗಿ ಸಕಲ ಸುಖಗಳನ್ನೂ ತ್ಯಾಗಮಾಡಿ ಭೀಷ್ಮನು ಪ್ರತಿಜ್ಞೆ ಮಾಡಿದುದು ಪಿತೃಭಕ್ತಿಯಿಂದ ಎನ್ನುವುದು, ಪ್ರಸಿದ್ಧ ವಿಚಾರವಷ್ಟೆ. ಶೇಣಿ ಗೋಪಾಲಕೃಷ್ಣ ಭಟ್ಟರು ಭೀಷ್ಮನಾಗಿ, ಅದು ಅಷ್ಟೆ ಅಲ್ಲ, ಅದು ಕುಲಾಭಿಮಾನ ದಿಂದಾಗಿ ಮಾಡಿದ ಕೃತಿಯೆನ್ನುತ್ತಾರೆ. ರಾಜನೊಬ್ಬ ಬಯಸಿದ ವಸ್ತು ಸಿಗಲಿಲ್ಲವೆಂದಾದರೆ ಅದು ಚಕ್ರವರ್ತಿತ್ವಕ್ಕೆ, ಚಂದ್ರವಂಶಕ್ಕೆ ಅವಮಾನ. ಯಾವ ಬೆಲೆಯನ್ನು ತೆತ್ತಾದರೂ ಅದನ್ನು ತರಲೇಬೇಕು- ಇದು ಭೀಷ್ಮ ಪ್ರತಿಜ್ಞೆಯ ಹಿಂದಿನ ಸ್ಫೂರ್ತಿ ಎಂಬುದು ಅವರ ಕಲ್ಪನೆ.ರಾಮನಿಗೆ ವನವಾಸವು ನಿರ್ಣಯಿಸಲ್ಪಟ್ಟಾಗಲೂ, ಬರಿಯ ಸರಳ ಪಿತೃಭಕ್ತಿ ಎಂಬುದ ರಿಂದಲೇ ಒಪ್ಪಿಕೊಂಡುದಲ್ಲ. ಪ್ರಕರಣವನ್ನು ವಿಮರ್ಶೆಗೆಳೆದರೆ, ಒಳಗೆ ಅಡಗಿರುವ ಅದಾವುದೋ ಇರುಸು ಮುರುಸು ಹೊರ ಬರುತ್ತದೆ, ವಿಷಯ ಬೀದಿ ಬಯಲಾಗಿ, ತಂದೆ ತಾಯಂದಿರನ್ನು ಅಪರಾಧಿಗಳಾಗಿ ನಿಲ್ಲಿಸಿ, ಹೊಲ ಸಾಗುತ್ತದೆ ಎಂಬುದಕ್ಕೆ ಸುಮ್ಮನಿದ್ದು ಸಹಿಸುವುದೇ ಸಭ್ಯತೆ ಎಂದೆನಿಸಿತಂತೆ ರಾಮನಿಗೆ ಇದು ಶೇಣಿಯವರ ಇನ್ನೊಂದು ಕಲ್ಪನೆ. ಭೀಷ್ಮನ ಪತನ ಕಾಲದಲ್ಲಿ ಭೀಷ್ಮನಿಗೆ ಆದ ಬಾಯಾರಿಕೆ ಎನ್ನುವುದು, ತಾಯಿಯನ್ನು (ಗಂಗೆ) ನೋಡಬೇಕೆಂಬ ದಾಹ ಎನ್ನುತ್ತಾರೆ ಅವರು. ಹಿರಣ್ಯಕಶ್ಯಪನಾಗಿ, ಪ್ರಹ್ಲಾದನ ಬಗೆಗಿನ ವಿರೋಧವು, ಬರಿಯ ಮತೀಯವಾಗಿರದೆ, ಪ್ರಚಂಡ ಶಕ್ತಿಶಾಲಿಯಾದ ತನ್ನ ವಿರುದ್ಧ ತನ್ನ ಮಗನೇ ಬಂಡಾಯವೆದ್ದಾಗ ಬಂದ ನೋವಿನಿಂದ ಮೂಡಿದುದೆನ್ನುವುದು ಅವರ ಇನ್ನೊಂದು ಸೃಷ್ಟಿ

2. ರಾವಣನ ಪಾತ್ರವನ್ನು, ರಾಮರಾವಣರ ಸಂಘರ್ಷದ ನೆಲೆಯಲ್ಲಿ ಚಿತ್ರಿಸುವಾಗ, ಶೂರ್ಪನಖಾ ಮಾನಭಂಗದ ಔಚಿತ್ಯ, ಜನಾಂಗೀಯ ಸಂಘರ್ಷ,