ಈ ಪುಟವನ್ನು ಪರಿಶೀಲಿಸಲಾಗಿದೆ
ಮಿಂಚು 171
"ಇದು ಮಂಗೇಶ್ಕರ್ದು ಅಲ್ಲ; ಸುಬ್ಬಲಕ್ಷ್ಮೀದು." "ಸುಬ್ಬಲಕ್ಷ್ಮಿ! ಹಿಂದೀಲಿ!" "ಹ್ಞ! ಆಶ್ಚರ್ಯವಾಯ್ತಾ ?" ಮೈದುಲಾ ಕಿವಿಗೊಟ್ಟು ಆಲಿಸಿದಳು. "ಕೋಯೆಲಿಯಾ,ಕೋಯೆಲಿಯಾ,ಕೋಯೆಲಿಯಾ..." _ಈ ಸಾಲು ಬಂದೊಡನೆ ಮೈದುಲಾಬೆನ್ ಮೇಜನ್ನು ತಟ್ಟಿದಳು. ನೀರಿನ ಲೋಟ ಉರುಳಿ ನೆಲ ಒದ್ದೆಯಾಯಿತು. ಬೇರೊಂದು ಲೋಟ ನೀರು ಬಂತು. ಪರಶುರಾಮ ಹಿ೦ದಿನ ದಿನವೇ ಪತ್ನಿಗೆ ಊಟದ ವಿಷಯ ತಿಳಿಸಿದ್ದ, ನಿವಾಸದಲ್ಲಿ ಭೋಜನವಿರುವ ದಿನ ಹರಿಣಾಕ್ಷಿ ಅಡುಗೆ ಮಾಡಬೇಕಾಗಿರಲಿಲ್ಲ. ಅಂಗರಕ್ಷಕರ ಮನೆಗಳಲ್ಲೂ ಅಷ್ಟೆ. ಊಟದ ಮಟ್ಟಿಗೆ ಪೋಲೀಸರೂ ಆಮಂತ್ರಿತರೇ, ಅವರದು ಎರಡನೆಯ ಪಂಕ್ತಿ, ಅಷ್ಟೆ. * * * ಕಲಾ ವಿಮರ್ಶಕರು ಕಾರ್ಯಕ್ರಮವನ್ನು ಪತ್ರಿಕೆಗಳಲ್ಲಿ ಮುಕ್ತಕಂಠದಿಂದ ಅಲ್ಲವಾದರೂ ತಕ್ಕಮಟ್ಟಿನ ಔದಾರ್ಯ ತೋರಿಸಿ ಹೊಗಳಿದ್ದರು. ಚಿತ್ರಗಳನ್ನು ಧಾರಾಳವಾಗಿ ಬಳಸಿದ್ದರು. ಮರು ಪ್ರಯಾಣಕ್ಕೆ ಮೃದುಲಾಬೆನ್ಗೂ ಆಪ್ತ ಸಹಾಯಕಿ ಜುಮ್ಕಿಗೂ ಒಂದು ಫಸ್ ಕ್ಲಾಸ್ಟ್ ಕೂಪೆ ಸಿಕ್ಕಿತು. ಕೆಳಗಿನ ತರಗತಿಯಾದರೂ ಸ್ವತಂತ್ರವಾಗಿದ್ದ ಕಂಪಾರ್ಟ್ಮೆಂಟ್, ತಂಡದವರಿಗೆ. ಅವರಲ್ಲಿದ್ದ ಲಕ್ಷ ಬೆಲೆಯ ಒಂದು ಸೂಟ್ಕೇಸನ್ನು ಕಾಯಲು ಸಾದಾ ದಿರಿಸಿನಲ್ಲಿದ್ದ ಇಬ್ಬರು ಪೋಲೀಸರು. (ಬೆಂಗಾವಲು ಮುಂಬಯಿವರೆಗೆ.) ಕೋಚ್ ಬಂತು, ಮೃದುಲಾಬೆನ್, ಜುಮ್ಕಿ, ಪರಶುರಾಮರೊಂದಿಗೆ ಮುಖ್ಯ ಮಂತ್ರಿ ತನ್ನ ಕಾರಿನಲ್ಲಿ ಬಂದಳು. ರಾಮರಾಜು ಅನುಭವಿಸಿದ ಸಂಕಟ ಆಗಲೇ ಪರಶುರಾಮನ ಅರಿವಿಗೆ ಬಂದಿತ್ತು. ವೃಥಾ ಕೆಲಸ ಕಳೆದುಕೊಳ್ಳುತ್ತಾನೆ_ಎಂದು ಕೆಡುಕೆನಿಸಿತು, ಆ ಕಂಪಾರ್ಟ್ಮೆಂಟಿನ ಬಳಿ ರಾಮರಾಜುವನ್ನು ಕರೆದು ಹಿತವಚನ ಹೇಳಿದ : "ಆ ಪ್ರತಿಷ್ಠಾನದ ಮಾಜಿ ನಮ್ಮ ಮಾತಾಜಿಗೆ ಇಲ್ಲಿ ಒಂದು ಮಾತು ಹೇಳಿದರೂ ಸರಿ, ಮು೦ಬಯಿಗೆ ಹೋಗಿ ಒ೦ದು ಕಾಗದ ಬರೆದರೂ ಸರಿ_ನೀನು ಡಿಸ್ಮಿಸ್ ಆಗ್ತೀಯ, ಹುಷಾರ್! ಸ್ನೇಹಿತ ಅಂತ ಇದನ್ನು ಹೇಳಿದ್ದೇನೆ.” ರಾಮರಾಜು ಕಂಪಾರ್ಟ್ಮೆಂಟಿನಿಂದ ದೂರ ಸರಿದ. ಮುಖ್ಯಮಂತ್ರಿಯ ಬೆನ್ನ ಹಿಂದೆ ನಿಂತುಕೊಂಡ. ಮೃದುಲಾಬೆನ್ಳ ದೃಷ್ಟಿ ತನ್ನತ್ತ ಸರಿದಾಗಲೆಲ್ಲ ಕೈ ಮುಗಿದ.