ಪ್ರಕರಣ ೨೨
ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ
ಮಾರನೆಯ ದಿನ ಜನಾರ್ದನ ಪುರಕ್ಕೆ ಹಿಂದಿರುಗುವ ಮೊದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೊಗೋಣವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, ಜನಾರ್ದನಪುರಕ್ಕೆ ಗೋಪಾಲ ಹಿಂದಿರುಗಲಿ ನಾವು ಆ ಹಳ್ಳಿಗಳ ವ್ಯಾಜ್ಯಗಳನ್ನು ಪರಿಹರಿಸಿ ಅನಂತರ ಊರು ಸೇರೋಣ' ಎಂದು ಹೇಳಿದನು,
'ಸ್ವಾಮಿ ! ಆ ಹಳ್ಳಿಗಳ ವ್ಯಾಜ್ಯ ಬಹಳ ತೊಡಕು. ಬಹಳ ಒರಟು. ಹಿಂದಿನ ಇನ್ ಸ್ಪೆಕ್ಟರು ಬಹಳ ಭಂಗಪಟ್ಟು ಹೋದರು ! ಎಂದು ಶಂಕರಪ್ಪ ಹೇಳಿದನು.
'ಎಲ್ಲವೂ ಸರಿಯೆ. ಆದರೆ ಸಾಹೇಬರು ಹೇಳಿದ್ದಾರಲ್ಲ ! ನಾವು ಸಹ ಆ ವ್ಯಾಜ್ಯಕ್ಕೆ ಏನಾದರೊಂದು ಪರಿಹಾರವನ್ನು ಹುಡುಕಬೇಕಾಗಿದೆಯಲ್ಲ. ಹಾಗೆಯೇ ಬೆಳಸು ವುದು ಚೆನ್ನಾಗಿಲ್ಲ,'
'ತಮ್ಮ ಚಿತ್ತ ಸ್ವಾಮಿ! ಹೋಗೋಣ '
ಹಳ್ಳಿಗಳ ಜಗಳ ಹನುಮಂತನಿಗೂ ಗರುಡನಿಗೂ ಆದ ಯುದ್ಧದ ಮತ್ತು ಗರುಡಗರ್ವಭಂಗದ ಪೌರಾಣಿಕ ಕಥೆಯನ್ನು ನಮ್ಮ ಸ್ಮರಣೆಗೆ ತರಬಹುದು. ಯಾವ ಮಹಾರಾಯರು ಆ ಹಳ್ಳಿಗಳಿಗೆ ಆ ಹೆಸರುಗಳನ್ನು ಇಟ್ಟರೋ ! ಒಂದು ಗ್ರಾಂಟು ಸ್ಕೂಲಿನ ವಿಚಾರದಲ್ಲಿ ಆ ಹಳ್ಳಿಗಳಿಗೆ ಪ್ರಬಲವಾದ ಜಗಳಗಳು ನಡೆಯುತ್ತಿದ್ದುವು. ಗರುಡನ ಹಳ್ಳಿಗೂ ಹನುಮನ ಹಳ್ಳಿಗೂ ಮೂರೇ ಮೂರು ಫರ್ಲಾಂಗು ಅಂತರ. ಒಂದೊಂದರಲ್ಲಿ ಸುಮಾರು ಇನ್ನೂರೈವತ್ತು ಪ್ರಜಾಸ೦ಖ್ಯೆಯಿದ್ದು ಒಟ್ಟಿನಲ್ಲಿ ಐನೂರು ಜನಸಂಖ್ಯೆ ಆ ಪಂಚಾಯತಿಗೆ ದಾಖಲಾಗಿತ್ತು, ಆ ಎರಡು ಹಳ್ಳಿಗಳಿಂದಲೂ ಒಂದೇ ಗ್ರಾಮಪಂಚಾಯತಿ ; ಅರ್ಧ ಸದಸ್ಯರು ಗರುಡನಹಳ್ಳಿಯವರು, ಉಳಿದರ್ಧ ಹನುಮನ ಹಳ್ಳಿಯವರು. ಚೇರಮನ್ನು