೨೬೨
ರಂಗಣ್ಣನ ಕನಸಿನ ದಿನಗಳು
ಸಮೀಪಿಸಿದ ಮೇಲೆ, 'ಏನು ಸಿದ್ದಪ್ಪ ! ಆರೋಗ್ಯವಾಗಿದ್ದೀಯಾ ? ಏನಿದು ಅಪರೂಪವಾಗಿ ಜನಾರ್ದನಪುರಕ್ಕೆ ಭೇಟಿ?” ಎಂದು ಕಲ್ಲೇಗೌಡ ಕೇಳಿದನು.
'ಕೆಲಸವಿತ್ತಪ್ಪ ! ಬಂದಿದ್ದೇನೆ. ಬಂದ ಮೇಲೆ ನೀವೂ ಈ ಊರಿಗೆ ಬಂದಿದ್ದೀರಿ ಎಂದು ಗೊತ್ತಾಯಿತು. ಭೇಟಿ ಮಾಡೋಣ ಎಂದು ಹೊರಟುಬರುತ್ತಿದ್ದೆ.'
'ಇಲ್ಲಿ ಎಲ್ಲಿ ಇಳಿದುಕೊಂಡಿದ್ದೀಯೆ ?'
'ಇನ್ಸ್ಪೆಕ್ಟರ್ ರಂಗಣ್ಣನವರ ಮನೆಯಲ್ಲಿ. ಅವರು ನನಗೆ ತಿಳಿದವರು ! ಬೇಕಾದವರು !'
ಕಲ್ಲೇಗೌಡನೂ ಕರಿಯಪ್ಪನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ತಮಗೆ ಎದುರು ಕಕ್ಷಿಯಾಗಿ ಸಿದ್ದಪ್ಪ ! ದಿವಾನರ ಹತ್ತಿರ ಸಲಿಗೆಯಿಂದ ಓಡಾಡುವ, ಮುಖಂಡರಲ್ಲಿ ಹೆಸರು ವಾಸಿಯಾದ, ನ್ಯಾಯ ವಿಧಾಯಕ ಸಭೆಯ ಸದಸ್ಯನಾದ ಸಿದ್ಧಪ್ಪ ! ಇಬ್ಬರ ಮುಖಗಳೂ .ಸ್ವಲ್ಪ ಕಳೆಗುಂದಿದುವು. 'ನೀನು ಬಂದದ್ದು ಒಳ್ಳೆಯದೇ ಆಯಿತು. ಬಾ ! ಚೆನ್ನಪ್ಪನ ಮನೆಗೆ ಹೋಗೋಣ. ಬೀದಿಯಲ್ಲೇನು ಮಾತು ! ಚೆನ್ನಪ್ಪನ ಮನೆಯಲ್ಲಿ ಊಟ ಮಾಡುವಿಯಂತೆ.
'ಊಟಕ್ಕೆ ನಾನು ಇನ್ಸ್ಪೆಕ್ಟರ ಮನೆಗೇನೆ ಹೋಗಬೇಕು. ಅಲ್ಲಿ ಅವಲಹಳ್ಳಿ ಯ ಗೌಡರು, ರಂಗನಾಥಪುರದ ಗೌಡರು ಇದ್ದಾರೆ !'
'ಎಲ್ಲರೂ ಸೇರಿ ಮೀಟಿಂಗ್ ನಡೆಸುತ್ತಿದ್ದೀರೇನೋ ! ಒಕ್ಕಲಿಗ ಮೇಷ್ಟರುಗಳನ್ನು ಸಸ್ಪೆಂಡ್ ಮಾಡಿಸಿ, ನೀವುಗಳು- ಒಕ್ಕಲಿಗ ಮುಖಂಡರು-ಆ ಇನ್ ಸ್ಪೆಕ್ಟರ ಮನೆಯಲ್ಲಿ ಔತಣದ ಭೋಜನ ಮಾಡುತ್ತೀರೋ ಸಂತೋಷದಿಂದ ನಲಿಯುತ್ತಿರೋ !'
'ಕಲ್ಲೇಗೌಡ ! ನಿನಗೆ ಈ ಕೋಮುವಾರು ಭಾವನೆ ಬಿಟ್ಟು ಬೇರೆ ಸದ್ಭಾವನೆ ಏನೂ ಇಲ್ಲವೇ ? ಈಗ ರೇಂಜಿನಲ್ಲಿ ನೂರಾರು ಜನ ಒಕ್ಕಲಿಗ ಮೇಷ್ಟರುಗಳಿದ್ದಾರಲ್ಲ. ಎಷ್ಟು ಜನಕ್ಕೆ ಸಸ್ಪೆಂಡ್ ಆಗಿದೆ ? ನೂರಾರು ಜನ ಒಕ್ಕಲಿಗರು ಗ್ರಾಮ ಪಂಚಾಯತಿ ಚೇರ್ಮನ್ನರುಗಳಾಗಿದ್ದಾರಲ್ಲ ! ಯಾರು ನಿನ್ನ ಹಾಗೆ ಇನ್ಸ್ಪೆಕ್ಟರನ್ನು ದೂರುತ್ತಾರೆ? ಎಲ್ಲರೂ ಅವರನ್ನು