ಪುಟ:ಸಂತಾಪಕ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬

ಕರ್ಣಾಟಕ ಚ೦ದ್ರಿಕೆ.


ಹೆಸರು ಗುಣಮಾಲಿನಿ. ಗುಣಮಾಲಿನಿಯು ಗರ್ಭಿಣಿಯಾಗಿ ಏಳನೆಯ
ತಿಂಗಳಲ್ಲಿಯೇ ಪ್ರಸವಿಸಿ ಲೋಕಾಂತರವನ್ನು ಸೇರಿದಳು. ವಿನಯಚಂದ್ರನು
ಆ ಶಿಶುವನ್ನು ಬಹು ಕಷ್ಟಪಟ್ಟು ಸಾಕಿ ದೊಡ್ಡವನನ್ನಾಗಿ ಮಾಡಿದನು.
ಏಕಮಾತ್ರ ಪುತ್ರನಾದುದರಿಂದಲೂ ತಾನು ಬಹು ಶ್ರಮೆಪಟ್ಟು ಸಾಕಿದುದ
ರಿಂದಲೂ ವಿನಯಚಂದ್ರನಿಗೆ ಮಗನನ್ನು ಒಂದು ನಿಮಿಷವಾದರೂ ಬಿಟ್ಟಿ
ರುವುದಕ್ಕೆ ಮನಸ್ಸು ಬಾರದು. ಅವನು ವ್ಯಾಪಾರಕ್ಕೋಸ್ಕರ ಆಗಾಗ
ಪ್ರಸನ್ನನಗರಕ್ಕೆ ಹೋಗಿ ಬರುವ ಪದ್ಧತಿಯುಂಟು. ಪ್ರಸನ್ನನಗರದಿಂದ
ಹಿಂತಿರುಗಿ ಹೋಗುವಾಗಲೆಲ್ಲ ಈ ಶಾರಿಕಾವನದಲ್ಲಿದ್ದ ಕಳಾಮಾಲಿನಿಯನ್ನು
ನೋಡಿಕೊಂಡು ಹೋಗುವ ಪದ್ದತಿಯಿದ್ದಿತು. ಇಂದಿಗೆ ಹದಿನೈದು
ದಿನಗಳಲ್ಲಿ ಇವನು ಈ ವನಕ್ಕೆ ಬಂದಿದ್ದನು. ಇಷ್ಟು ಸ್ವಲ್ಪ ಕಾಲದೊಳ
ಗಾಗಿಯೇ ಇವನು ಮತ್ತೆ ಈ ವನಕ್ಕೆ ಬಂದುದರಿಂದ ಕಳಾಮಾಲಿನಿಯು
ಆಶ್ಚರ್ಯಯುಕ್ತೆಯಾದಳು. ವಿನಯಚಂದ್ರನು " ಅತ್ತಿಗೇ ! ನಮ್ನ
ಕುಂದನನ್ನು ಪ್ರಸನ್ನನಗರಕ್ಕೆ ಕಳುಹಿಸಿ ಹದಿನೈದು ದಿನಗಳಾದುವು.
ಇದುವರೆಗೂ ಅವನು ಕಾಗದವನ್ನೂ ಬರೆಯಲಿಲ್ಲ. ಹಿಂತಿರುಗಿಯೂ
ಬರಲಿಲ್ಲ. ಇದಕ್ಕೆ ಕಾರಣವೇನಿರಬಹುದೋ ತಿಳಿದುಕೊಂಡು ಹೋಗಬೇ
ಕೆಂದು ಹೊರಟು ಬಂದೆನು. ಪ್ರಸನ್ನನಗರದಿಂದ ಬರುವಾಗ ಇಲ್ಲಿಗೆ
ಬರುವೆನು. ಸಾವಕಾಶವಾಗಿ ಮಾತನಾಡೋಣ. " ಎಂದು ಕುದುರೆ
ಯನ್ನು ಹತ್ತಿದನು. ಕಳಾಮಾಲಿನಿಯು " ವಿನಯಾ ! ಸ್ವಲ್ಪ ನಿಲ್ಲು.
ನಮ್ಮ ವಿಜಯನೂ ಪ್ರಸನ್ನನಗರಕ್ಕೆ ಹೊರಡಬೇಕೆಂದಿರುವನು. ಅವನನ್ನು
ಕರೆದುಕೊಂಡು ಹೋಗು " ಎಂದಳು.
ವಿನಯ :- ಅತ್ತಿಗೆ ! ಅವನು ಯಾರು ?
ಕಳಾ :- ಅವನೂ ನನ್ನ ಪೋಷ್ಯವರ್ಗಕ್ಕೆ ಸೇರಿದವನು. ಅವನ
ವಿಷಯವನ್ನು ಸಾವಕಾಶವಾಗಿ ತಿಳಿಸುವೆನು. ಪ್ರಕೃತದಲ್ಲಿ ಅವನು
ನಿನ್ನೆಯದಿನ ಆವುದೋ ಒಂದು ಮಹತ್ಕಾರ್ಯ ಸಾಧನೆಗೋಸುಗ ಹೋ
ಗಿದ್ದನಂತೆ ! ಅಲ್ಲಿಂದ ಬರುವಾಗ ಮಾರ್ಗದಲ್ಲಿ ಕಳ್ಳರಕೈಗೆ ಸಿಕ್ಕಿ ಪೆಟ್ಟುತಿಂದು
ಮೂರ್ಛಿತನಾಗಿ ಬಿದ್ದಿದ್ದನು. ಹೂಕೊಯ್ದು ತರಬೇಕೆಂದು ಬೆಳಗಿನ
ಜಾವದಲ್ಲಿ ನಾನು ಅತ್ತಕಡೆಗೆ ಹೋದಾಗ ಅಲ್ಲಿ ನರಳಾಡುತ್ತಿದ್ದನು.