ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ ೧೧೫
ದರು. ಪರಿಣಾಮವಾಗಿ ಫಾಲ್ಸನ ಪಡೆ ಪ್ರತಿಯೊಂದು ಅಂಗುಲ ನೆಲಕ್ಕೂ ಅಪಾರ ಬೆಲೆ ತೆರಬೇಕಾಯಿತು. ...ಇನ್ನೊಂದು ಪಶ್ಚಿಮದ ಪಡೆ, ಕರ್ನಲ್ ಜಾಕ್ಸನ್ನನ ಮುಖಂಡತ್ವದಲ್ಲಿ, ಮಾರ್ಚ್ ೨೯ನೆಯ ದಿನ ನಡುವಿರುಳು ಕಳೆದ ಮೇಲೆ, ಕಡಲತೀರದ ಕುಂಬಳೆಯಿಂದ ಪೂರ್ವಾಭಿ ಮುಖವಾಗಿ ಹೊರಟಿತು. ದಾರಿಯುದ್ದಕ್ಕೂ ಹೋರಾಡುತ್ತ ಉಪ್ಪಿನಂಗಡಿ, ಬೆಳ್ಳಾರೆ ಗಳನ್ನು ದಾಟಿ ನಾಲ್ಕನೆಯ ದಿನ ಸುಬ್ರಹ್ಮಣ್ಯವನ್ನು ತಲುಪಿತು. ಅಲ್ಲಿಂದ ಮುಂದೆ ಸಾಗಿ ಸುಳ್ಯದ ಕೋಟೆಯನ್ನು ವಶಪಡಿಸಿಕೊಳ್ಳುವುದು ಅವನ ಉದ್ದೇಶ. ಆದರೆ ಕುಡಿಯ ಸೋದರರ ನಾಯಕತ್ವದಲ್ಲಿ ಕೊಡಗು ಸೈನಿಕರು ಶಾಖೋಪ ಶಾಖೆಗಳಾಗಿ ಹೆಜ್ಜೆಹೆಜ್ಜೆಗೂ ಜಾಕ್ಸನ್ನನ ಪಡೆಯೊಡನೆ ಕಾದಿದರು.ಆತ ಅಧೀರನಾದ. ಇಲ್ಲಿಂದ ಪಾರಾಗುವುದೇ ದುಸ್ಸಾಧ್ಯ ಎಂದು ಅವನಿಗನಿಸಿತು. ಅಳಿದುಳಿದ ದಂಡಿನೊಡನೆ ಕುಂಬಳೆಗೆ ಹಿಂತಿರುಗಲು ಯತ್ನಿಸಿದ. ಆದರೆ, ಬಂದ ದಾರಿಗೂ ಸುಂಕವಿತ್ತು. ಉದ್ದಕ್ಕೂ ಅವನ ಸೈನಿಕರು ಗೋರಿ ಕಂಡರು. ಕೊಡಗಿನ ಯೋಧರು, ರಣೋತ್ಸಾಹದಿಂದ ಆಂಗ್ಲ ಪಡೆಯ ಮೇಲೆ ಎರಗಿ, ಅದನ್ನು ಚೂರುಚೂರಾಗಿ ಕಡಿದೊಗೆದರು. ಬದುಕಿ ಉಳಿದ ಕೆಲವೇ ಜನರೊಡನೆ ಜಾಕ್ಸನ್ ಕುಂಬಳೆಯನ್ನು ತಲಪಿದ.ಕೊಡಗಿನ ಮೇಲಣ ದಂಡಯಾತ್ರೆ ಅಯಶಸ್ವಿಯಾಯಿತು, ಎಂದು ಆತ ಭಾವಿಸಿದ. ತನ್ನನ್ನು ದಂಡಿನ ವಿಚಾರಣೆಗೆ ಒಳಗುಮಾಡುತ್ತಾರೆ, ಎಂದು ಬೆದರಿದ. ಆದರೆ, ಅವನು ಕಷ್ಟಪರಂಪರೆಗಳನ್ನು ಅನುಭವಿಸಿದ್ದ ವೇಳೆಯಲ್ಲೇ ಕೊಡಗಿ ನೊಳಗೆ ಬೇರೆಯೇ ಬಗೆಯ ಘಟನೆಗಳು ನಡೆಯುತ್ತಲಿದ್ದವು.
೩೮ "ಮಹಾಸ್ವಾಮಿಯವರೆ, ಘಾತವಾಯಿತು!" ಕರೆಕಳುಹಿದ ಬೋಪು ದಿವಾನ ಬರಲಿಲ್ಲವೆಂದು ಅಸಹನೆಯಿಂದ ಅರಸ ಶತಪಥ ತುಳಿಯುತ್ತಲಿದ್ದ. ಆತನ ಕಿವಿಗೆ ಬಿದ್ದುದು, ಬಸವನ ಆರ್ತನಾದದಂತಹ ಕೂಗು. ಚಿಕವೀರರಾಜೇಂದ್ರ ಬೆಚ್ಚಿಬಿದ್ದು ಬಾಗಿಲ ಕಡೆಗೆ ನೋಡಿದ. ಅಲ್ಲಿ ಮುಖದಿಂದ ಬೆವರಿಳಿಯುತ್ತಿದ್ದ ಬಸವ ಏದುಸಿರುಬಿಡುತ್ತ ನಿಂತಿದ್ದ. ತಲೆ ಕೂದಲು ಕೆದರಿತ್ತು. "ಏನಾಯಿತು ಬಸವ ?" ರಣರಂಗಗಳಿಂದ ಕೆಟ್ಟ ಸುದ್ದಿ ಬಂತೇನೋ ಎಂದು ಅರಸನಿಗೆ ಗಾಬರಿ. "ಬೋಪಣ್ಣ ಕೊನೆಗೂ ಕೈಕೊಟ್ಟ, ಮಹಾಸ್ವಾಮಿ." ಮನೆಯಲ್ಲಿಲ್ಲವಂತೆ-ಎಂದಿದ್ದ ಕರೆಯಲು ಹೋದ ಚಾವಡಿಕಾರ. "ಏನಾಯಿತು?" "ಇಂಗ್ರೇಜಿಯವರಿಗೆ ಶರಣಾಗಬೇಕೂಂತ ನಮ್ಮ ಎಲ್ಲಾ ಗಡಿ ಸೈನ್ಯಗಳಿಗೆ ಬೋಪು ರಾಜಮುದ್ರೆ ಇರೋ ಅನುಜ್ಣ್ನೆ ಆಗಲೇ ಕಳಿಸಿದಾನೆ." ಅದು ಬರಸಿಡಲು.