ಈ ಪುಟವನ್ನು ಪರಿಶೀಲಿಸಲಾಗಿದೆ
೧೧೬ ಸ್ವಾಮಿ ಅಪರಂಪಾರ
"ಎಲಾ ಘಾತಕಿ! ಹೀಗೂ ವಂಚಿಸಿದನಾ ? ಇನ್ನು-ಇನ್ನೇನಾಗತದೆ ಬಸವ?" "ನಮ್ಮ ಪಡೆಗಳೆಲ್ಲ ಶರಣಾಗತವೆ! ವೈರಿಗಳ ದಂಡು ಇಲ್ಲಿಗೆ ಬರತದೆ !" ಚಿಕವೀರರಾಜನ ಜಂಘಾಬಲ ಉಡುಗಿತು. ಅವನ ಕಣ್ಣುಗಳನ್ನು ಕತ್ತಲು ಕವಿಯಿತು. ಆ ಸ್ಥಿತಿಯಲ್ಲೂ ಅವನು ಆಕ್ರೋಶ ಮಾಡಿದ : "ಎಲ್ಲಿ ಬೋಪಣ್ಣ! ಅವನನ್ನು ಹಿಡಕೊಂಡು ಬನ್ನಿ. ಅವನ ಎದೆ ಬಗೀತೀನಿ!" ಮುಂದಿನ ಕ್ರಮಗಳನ್ನು ಕುರಿತು ಚಿಂತೆಗೀಡಾಗಿದ್ದ ಬಸವ, ರಾಜನನ್ನು ಸಂತೈಸ ಲೆತ್ನಿಸಿದ: "ಇನ್ನೂ ಹೋರಾಟ ಸಾಧ್ಯ. ಮಹಾಸ್ವಾಮಿ. ಈ ಕ್ಷಣವೆ ನಾವು ನಾಲ್ಕುನಾಡು ಅರಮನೆಗೆ ತೆರಳಬೇಕು. ಅಲ್ಲಿ ಸೈನ್ಯವನ್ನು ಒಟ್ಟುಗೂಡಿಸಬೇಕು. ಇಲ್ಲಿ ಇರೋದು ಅಪಾಯ! ನಾವು ತಡಮಾಡಬಾರದು!" ಅರಸ ಶಿಲೆಯಂತೆ ನಿಂತ. ಅವನ ಮುಖದಲ್ಲಿ ಕ್ರೋಧ ಹೆಪ್ಪುಗಟ್ಟಿತ್ತು. ಧ್ವನಿ. ಹೊರಡಲಾರದೆ ಗಂಟಲಲ್ಲೆ ಒರಲುತ್ತಿತ್ತು. ಈ ಮಾತುಕತೆಯನ್ನು ರಾಣಿ ಕೇಳಿಸಿಕೊಂಡಿದ್ದಳು.ಆಕೆ ಶಾಂತವಾಗಿ ಹೆಜ್ಜೆ ಇರಿಸುತ್ತ ತೆರೆಯಿಂದ ಹೊರಬಂದಳು. ಬಸವನೆಂದ : "ಮಹಾರಾಣಿಯವರು ಶೋಕಿಸಬಾರದು." ಯಾವ ಕಂಪನವೂ ಇಲ್ಲದ ಸ್ವರದಲ್ಲಿ ರಾಣಿ ಅಂದಳು : "ನಾಲ್ಕುನಾಡಿಗೆ ಈಗಲೆ ಹೊರಡೋದೇ ಹ್ಯಾಗೆ ಅಂತ ಕೇಳೋಕೆ ಬಂದೆ." "ಹೌದು ತಾಯೀ." "ರಾಜಕುಮಾರಿ ಬಿಸಿಲ ಮಹಡೀಲಿದಾಳೆ. ಕರೀತೇನೆ." ಕರ್ಕಶವಾಗಿ ಅರಸನೆಂದ : "ಆಗಲೀ ಬಸವ, ನಾಲ್ಕುನಾಡಿಗೆ ಹೋಗೋಣ."
೩೯ ಐದು ಗಡಿಗಳಲ್ಲೂ ಕದನ ಆರಂಭವಾದೊಡನೆಯೇ, 'ಶರಣಾಗತಿಯ ಕೆಲಸ ಸುಲಭ ವಾಗುವುದಿಲ್ಲ'- ಎಂಬುದು ಬೋಪಣ್ಣನಿಗೆ ಮನದಟ್ಟಾಯಿತು. ಸ್ವತಃ ಚಿಕವೀರರಾಜನೂ ರಣರಂಗಕ್ಕಿಳಿದರೆ ವಿಜಯಶ್ರೀ ಇಂಗ್ಲಿಷರಿಗೆ ಒಲಿಯದಿರಲೂ ಬಹುದು-ಎಂದು ಅವನು ಚಿಂತೆಗೀಡಾದ. ಇದ್ದ ಪರಿಹಾರವೊಂದೇ : ಯುದ್ಧದ ಕ್ಷಿಪ್ರ ಮುಕ್ತಾಯ. ಅದಕ್ಕೆ ಉಪಾಯ : ದಾಳಿಕಾರರಿಗೆ ಶರಣಾಗಿರೆಂದು ರಾಜನ ಹೆಸರಲ್ಲಿ ಅನುಜ್ಞೆ. ಅಪ್ಪಚ್ಚು ಮತ್ತು ಉತ್ತಯ್ಯ ಅದಕ್ಕಾಗಿಯೇ ಕಾದಿದ್ದರು. ಕಳಿಂಗಯ್ಯನೂ ಸಮಾ ಧಾನದ ನಿಟ್ಟುಸಿರು ಬಿಟ್ಟ. ಕುಡಿಯ ಸೋದರರಿಗೇನೋ ಅದು ತಲಪಲಿಲ್ಲ. ಅರಸನ ನಂಬಿಗೆಯ ಕಾರ್ಯಕಾರನಾದ ಐಯಣ್ಣ ಮಾತ್ರ, ಹೀಗೂ ಉಂಟೆ ?-ಎಂದು ವಿಸ್ಮಿತನಾದ. ಕ್ರಮಕ್ರಮವಾಗಿ ವೈರಿಯನ್ನು ಹಣ್ಣುಮಾಡುವ ಅವನ ಸಮರ ನೀತಿ ಆವರೆಗೂ