ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ ೧೧೯
ಮಗಳೊಡನೆಯೂ ರಾಣಿಯೊಡನೆಯೂ ಮಡಕೇರಿಯ ಅರಮನೆಯನ್ನು ತಲಪಿದ ಚಿಕವೀರರಾಜ, ಫ್ರೇಸರನನ್ನು ತಾನು ಕಾಣಬಯಸುವುದಾಗಿ ಹೇಳಿಕಳುಹಿದ.ಆ ಅಧಿಕಾರಿ ಸಂಜೆಯ ವೇಳೆಗೆ ಅರಮನೆಗೆ ಬಂದ. ಕಿಟಕಿಯ ಪರದೆಗಳನ್ನೆಲ್ಲ ಮುಚ್ಚಿದ್ದ ದಿವಾಣಖಾನೆಯ ಮಬ್ಬು ಬೆಳಕಿನಲ್ಲಿ ಚಿಕವೀರ ರಾಜೇಂದ್ರ ನಿಂತಿದ್ದ. ಒಳಕ್ಕೆ ಬಂದ ಫ್ರೇಸರ್ , ವಂದಿಸಿ , 'ಕುಶಲವೇ?" ಎಂದು ಹಿಂದೂಸ್ಥಾನಿಯಲ್ಲಿ ಕೇಳಿದಾಗ ಚಿಕವೀರರಾಜ "ಹೀಗಿದೀವಿ" ಎನ್ನುತ್ತಾ ಆತನಿಗೆ ಹಸ್ತಲಾಘವವಿತ್ತ. ಸ್ಪಷ್ಟೀಕರಣ, ವಾದ-ಪ್ರತಿವಾದ, ವಿನಂತಿಗಳಿಂದ ಯಾವ ಪ್ರಯೋಜನವೂ ಇರಲಿಲ್ಲ. ಕಲಕತ್ತೆಯಲ್ಲಾಗಿದ್ದ ಪೂರ್ವಭಾವಿ ತೀರ್ಮಾನವನ್ನು ಕೃತಿಗಿಳಿಸುವುದಕ್ಕೋಸ್ಕರವಷ್ಟೇ ನಿಯೋಜಿತನಾಗಿದ್ದವನು ಫ್ರೇಸರ್. ಹಾಗೆಂದು ಪ್ರಕಟವಾಗಿ ಹೇಳಲೊಲ್ಲ. ಅಪ್ರತಿಮನಾದ ಕಾರ್ಯಸಾಧಕ ಆತ. ಬೆಣ್ಣೆಯಿಂದ ಕೂದಲೆಳೆಯುವಷ್ಟು ನಯವಾಗಿತ್ತು ಅವನ ಮಾತು. ಅದೇ ಮಿದುತನದಿಂದ ಎದುರಾಳಿಯ ಗುಂಡಿಗೆಯನ್ನೂ ಬಸಿಯಬಲ್ಲ ಸಮರ್ಥನಾಗಿದ್ದ ಆತ. ಅವನೆಂದ : "ನಾವು ಗೆದ್ದೆವು, ತಾವು ಸೋತಿರಿ ಅಂತ ಬೇಡ. ತಮ್ಮನ್ನು ಕೈದಿಯಾಗಿ ನಾವು ಪರಿಗಣಿಸುವುದಿಲ್ಲ. ತಮ್ಮ ಬದಲು ತಮ್ಮ ತಂಗಿಯನ್ನೋ ಮತ್ತೊಬ್ಬರನ್ನೋ ಪಟ್ಟದ ಮೇಲೆ ನಾವು ಕೂರಿಸಿಲ್ಲವಷ್ಟೆ? ಪರಿಸ್ಥಿತಿ ಶಾಂತವಾಗಲಿ,ಅಷ್ಟರವರೆಗೆ ಸಕುಟುಂಬ ಸಪರಿ ವಾರ ತಾವು ರಾಜ್ಯದ ಹೊರಗಿರೋದು ಮೇಲು. ಗವರ್ನರ್ ಜನರಲ್ ಸಾಹೇಬರೂ ಅದನ್ನೇ ಅಪೇಕ್ಷೆಪಟ್ಟಿದ್ದಾರೆ, ಬೆಂಗಳೂರಿಗೆ ಹೋಗುತೀರಾ? ಬೇಡಿ. ತಮಗೆ ಅದು ಇಷ್ಟ ವಾಗದು. ವೇಲೂರಿಗೆ ಹೋಗಿ, ತಮ್ಮ ರಾಜಭಂಡಾರವನ್ನೂ ಜತೆಗೆ ತಗೊಳ್ಳಿ. ಅಲ್ಲಿ ನಮ್ಮ ಅತಿಥಿಗಳಾಗಿ ವಾಸಮಾಡಿ ಮುಂದೆ ಎಲ್ಲಾ ಸರಿಹೋಗುತ್ತದೆ." ಕತ್ತಲಾಗಿತು. ಚಿಕವೀರರಾಜ ಫ್ರೇಸರನನ್ನು ಮೇಲ್ಮಾಳಿಗೆಗೆ ಕರೆದೊಯ್ದ. ಎಣ್ಣೆಯ ದೀಪದೆದುರು ಅವರ ನೆರಳುಗಳು ನೀಳವಾಗಿ ಗೋಡೆಗಳ ಮೇಲೆ ನರ್ತಿಸಿದುವು. ಒಂದು ಕ್ಷಣ, 'ಇವನ ಕತ್ತು ಹಿಸುಕಿ ಕೆಳಕ್ಕೆ ಎಸೆದುಬಿಡಲೇ'– ಎನಿಸಿತು ಚಿಕವೀರರಾಜ ನಿಗೆ. ಹಾಲೇರಿ ವಂಶದ ದೊರೆಯಾದ ತನ್ನೆದುರು ಈ ಯಃಕಶ್ಚಿತ್ ಮನುಷ್ಯ ಐಂದ್ರ- ಜಾಲಿಕ ವಿದ್ಯೆ ತೋರಿಸುತ್ತಿದಾನಲ್ಲಾ... ಮನಸ್ಸು ಹುಚ್ಚು ಕುದುರೆಯಾಗಬಾರದೆಂದು ಕಡಿವಾಣವನ್ನು ಅರಸ ಜಗ್ಗಿದ, ಬಲ ವಾಗಿ ಜಗ್ಗಿದ. ಆ ನೋವಿನಿಂದ ತನ್ನ ಮೈಯೇ ನರಳಿ ಕೂಗಿದಂತಾಯಿತು. ಫ್ರೇಸರ್ ಸ್ವರಾಲಾಪನೆಯನ್ನು ಮತ್ತಷ್ಟು ಮಧುರಗೊಳಿಸಿ ತನ್ನ ಹಾಡನ್ನು ಪುನಃ ನುಡಿಸಿದ. ಅರಸನಿಗೆ ಉಸಿರುಕಟ್ಟಿದಂತಾಯಿತು. ಈ ಬಂಧನದಿಂದ ತಾನು ಪಾರಾಗಬೇಕು– ಎಂದು ಆತ ಚಡಪಡಿಸಿದ. -ದಾರಿ ಹುಡುಕಿಕೊಂಡು ಅರಮನೆಯಿಂದ ಹೊರಬಿದ್ದು, ಅಂಗರಕ್ಷಕರೊಡನೆ ತನ್ನ ಶಿಬಿರವನ್ನು ಫ್ರೇಸರ್ ತಲಪಿದಾಗ, ಇರುಳಾಗಿ ಬಹಳ ಹೊತ್ತಾಗಿತ್ತು. ಬೋಪಣ್ಣ ಅವನಿ ಗಾಗಿ ಕಾದಿದ್ದ.