ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಆಪರಂಪಾರ ೧೩೫
ನೆಲೆನಿಂತು ಕೈಗೊಂಡಿರುವ ಸಂಘಟನಾಕಾರ್ಯ__ಈ ವಿವರಗಳನ್ನೆಲ್ಲ ಸಿದ್ಧಲಿಂಗನಿಂದ ಕೇಳಿ ತಿಳಿದು ಬಸಪ್ಪಾಜಿ ಸಂತುಷ್ಟನಾದ. "ಸ್ವಾಮಿಗಳು ಮತ್ತೇನಪ್ಪಣೆ ಮಾಡಿದಾರೆ ?" "ಅವರ ಪರವಾಗಿ ಕೌರವರ ಪಾಳೆಯಕ್ಕೆ ನಾನು ಹೋಗಿ ಬರಬೇಕು." "ಅಂದರೆ ?" "ಇಕಾ, ಕಾಸ್ಸಾಮೇಜರಿಗೆ ಸ್ವಾಮಿಗಳು ಬರೆದಿರುವ ಪತ್ರ." ರೇಶಿಮೆಯ ಅರಿವೆಯಲ್ಲಿ ಸುರುಳಿಯಾಗಿದ್ದ ಆ ಕಾಗದವನ್ನು ಬಿಡಿಸಿ, ಕುತೂಹಲದಿಂದ ಬಸಪ್ಪಾಜಿ ಓದಿದ, ಓದಿ ಮುಗಿಯಿತು. ಆದರೆ ಹುಬ್ಬುಗಳು ರೂಪಿಸಿದ್ದ ಪ್ರಶ್ನಾರ್ಥಕ ಚಿಹ್ನೆಗಳು ಹಾಗೆಯೇ ಉಳಿದುವು. "ಇದನ್ನು ಕೊಡಲೇಬೇಕು ಅಂದರೆ ಸ್ವಾಮಿಗಳು ? ಮುಂಚಿತವಾಗಿಯೇ ಚಟುವಟಿಕೆಯ ಸುಳಿವು ಕೊಟ್ಟಂತಾಗುತದಲ್ಲ ?" "ಗೂಢಚಾರರು ಓಡಾಡುತಿರುವಾಗ ಸುಳಿವು ಹೇಗೂ ತಿಳೀತದೆ." “ಅದೇನೋ ನಿಜ." "ನಮ್ಮದೇನಿದ್ದರೂ ಧರ್ಮಾಚರಣೆ, ಇಂಗ್ರೇಜಿಯವರಿಗೆ ಹೀಗೆ ನಿರೂಪ ಕೊಟ್ಟಿದೇವೆ ಅಂದರೆ ಜನರು ಹುರುಪಾಗುತಾರೆ !" ಬಸಪ್ಪಾಜಿಯ ಹುಬ್ಬುಗಳು ಸಡಿಲಿದುವು. "ಸರಿ. ಆದರೆ ನಾವು ಇನ್ನೂ ಹೆಚ್ಚು ಹುಷಾರಾಗಿರಬೇಕು. ಈ ಪತ್ರ ಕೊಟ್ಟು ಏನೂ ಅಪಾಯವಿಲ್ಲದೆ ನೀವು ಹೊರಗೆ ಬಂದಿರಿ ಅಂತ ಇಟ್ಕೊಳ್ಳಿ, ರಾತ್ರೆ ಬೆಟ್ಟದ ಮೇಲೆ ಕೊಳದ ಬಳಿ ಭೇಟೀಯಾಗೋಣ." ನಾನು ಜಂಗಮನಾದರೂ ಇಷ್ಟು ಸೂಕ್ಷ್ಮ ತಿಳೀತದೆ ಬಸಪ್ಪಾಜಿ ಅರಸರೆ, ವಾಸ್ತವ ವಾಗಿ, ನಾನೇ ಹಾಗೆ ಸೂಚಿಸಬೇಕು ಅಂತ ಇದ್ದೆ." "ಆಗಲಿ, ಅಯ್ಯನವರೆ. ವೈರಿ ಶಿಬಿರಕ್ಕೆ ಹೋಗಿ ರಾಜದೌತ್ಯ ನಿರ್ವಹಿಸಿ ಬನ್ನಿ..." ................................. ಆ ರಾಜದೌತ್ಯ ಅಪೂರ್ವವಾಗಿತ್ತು. ಶಿವ ಶಂಭೋ ಶಂಕರ ಮಹಾದೇವ !" ಆಡಳಿತಗಾರ ಕಾಸ್ಸಾಮೇಜರನ ಕಚೇರಿಯ ಮಹಾದ್ವಾರದಲ್ಲೂ ಅದೇ ಘೋಷ ; ಒಳಗೆ ಆತನೆದುರಲ್ಲೂ ಅದೇ ಘೋಷ. ರಾಜಕಾರ್ಯ ನಿಮಿತ್ತ ತನ್ನನ್ನು ಕಾಣಬೇಕು–-ಎಂದ ಜಂಗಮ. ತನ್ನೆದುರು ಕುನೀರ್ರಸು ಮಾಡಲಾಗದ ಉದ್ಧಟ, ಕಾಸ್ಸಾಮೇಜರನ ಕಣ್ಣು ಕೆಂಪಾಯಿತು. ದುಭಾಷಿಗೆ ಆತ ಹೇಳಿದ: "ಅದೇನಿದೆಯೋ ಬೇಗನೆ ಬಗುಳಿ ಹೋಗಲಿ." ದೀಶೀಯನಾದ ದುಭಾಷಿ ಸಿದ್ಧಲಿಂಗನಿಗೆ ಅಂದ : "ನಿವೇದಿಸುವಂಥಾದ್ದನ್ನು ಲಗೂ ಹೇಳಿ ಹೋಗಿರಿ, ಅಯ್ಯನವರೆ." ಸಿದ್ಧಲಿಂಗ ತಾನು ತಂದ ಓಲೆಯ ಸುರುಳಿಯನ್ನು ಕಾಸ್ಸಾಮೇಜರನ ಮುಂದಿರಿಸಿದ. "ಪತ್ರ? ಯಾರಿಂದ ?" ಎಂದು ಕೇಳಿದ, ಆಂಗ್ಲ ಅಧಿಕಾರಿ.