ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಸರಂಪಾರ ೧೪೯ 'ಅಲ್ಲಿ ಎಲ್ಲರೂ ಕ್ಷೇಮವೇ?'-ಎಂದು ರೂಪುಗೊಂಡ ಪ್ರಶ್ನೆ, "ಹೌದೆ?" ಎಂಬ ಏಕಪದವಾಗಿ ಹೊರಬಿದ್ದಿತು. "ಸಾಮಿಯೋರು ಒಂದಾವರ್ತಿ ಬಂದು ಓದದ್ದನ್ನ ಗಂಗಮ್ಮಾಜಿ ಜ್ಞಾಪಿಸಿಕೊಂಡ್ರು." ಅಪರಂಪಾರ ಏನನ್ನೂ ಹೇಳಲಿಲ್ಲ. ಕಟ್ಟುಬಿಚ್ಚಿ, ರತ್ನಹಾರವನ್ನು ಸ್ವಾಮಿಯ ಎದುರಿಗಿದ್ದ ಮಣೆಯ ಮೇಲಿರಿಸಿ, ಧರ್ಮಪ್ಪನೆಂದ: "ಸ್ವಾಮಿಯೋರಿಗೆ ತಲಪಿಸೋಕೆ ಅಂತ ಚಿಕ್ಕಮ್ಮಣ್ಣಿಯೋರು ಕೊಟ್ರು. ಅಪ್ಪಂಗಳದ ಸೊಸೆ ಕೊಟ್ಟಿದ್ದೂಂತ ಯೋಳು-ಅಂದ್ರು." ಹಣತೆಯ ಬೆಳಕಿನಲ್ಲಿ ಹಾರ ಮಿನುಗಿತು. ಆ ಪ್ರಭೆ ತನ್ನ ಕಣ್ಣುಗಳನ್ನು ಕುಕ್ಕುತ್ತಿದ್ದಂತೆ ಅಪರಂಪಾರನಿಗೆ ಭಾಸವಾಯಿತು. ಎಲ್ಲಿ ಕಂಡಿದ್ದೆ ಇದನ್ನು? ತಾನು ಅಮ್ಮ ಅಮ್ಮ ಎಂದು ಸೆರಗು ಹಿಡಿದು ಹಿಂದೆಯೇ ಹೋಗುತ್ತಿದ್ದ ಒಂದು ಜೀವ ಇದನ್ನು ತೊಟ್ಟುಕೊಂಡಿರುತ್ತಿತ್ತಲ್ಲ? ಆಕೆ ಕೊಟ್ಟಳೇನೋ ತನ್ನ ಸೊಸಗೆ ? ಆ ರೂಪ. ಪಾದಗಳೆರಡು. ಎರಡು ಅಂಗೈಗಳು... ಅಪರಂಪಾರನ ಮೆದುಳು ಸಿಡಿಯತೊಡಗಿತು. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿ, ಶಂಕರಪ್ಪನನ್ನು ಆತ ಕರೆದ: “ಏನಪ್ಪಣೆ ಸ್ವಾಮಿಯೋರೆ?" ಎಂದು ಅವನು ಕೇಳಿದಾಗ, "ಇದೊಂದು ಹಾರ ಅಪ್ಪಂಗಳದ ಅರಮನೆಯಿಂದ ಬಂದದೆ. ರಾಜಭಂಡಾರದ ಒಡವೆ. ರಾಜಭಂಡಾರಕ್ಕೇ ಸೇರಬೇಕು. ಆ ತನಕ ಇದನ್ನು ಜೋಪಾನವಾಗಿಟ್ಟಿರಬೇಕಲ್ಲ?” ಎಂದು ಅಪರಂಪಾರ ನುಡಿದ. ಶಂಕರಪ್ಪ ಮಣೆಯ ಮೇಲಿಂದ ರತ್ನಹಾರವನ್ನೆತ್ತಿಕೊಂಡು ಅಂದ: "ನಾನು ತೆಗೆದಿಟ್ಟಿರತೇನೆ.” ೫೨ ಅಂದು ಅಪರಂಪಾರಸ್ವಾಮಿಯ ಸಂದರ್ಶನಕ್ಕೆ ಅಪರಿಚಿತನೊಬ್ಬ ಬಂದ. ಅವನ ಹೆಸರು ಅಚ್ಚಣ್ಣ.ಕೊಡಗು ಇಂಗ್ಲಿಷರಿಗೆ ವಶವಾದಾಗ ಗ್ರಾಮಾಂತರ ಪ್ರದೇಶವನ್ನು ಸೇರಿ ತಪ್ಪಿಸಿಕೊಂಡು ಹೋಗಿದ್ದ ಕಾರ್ಯಕಾರರಲ್ಲೊಬ್ಬ, ಪುಟ್ಟಬಸವ, ಒಂದು ಓಲೆಯನ್ನು ಅಚ್ಚಣ್ಣನೊಡನೆ ಕೊಟ್ಟ ಕಳುಹಿದ್ದ. ಆ ಓಲೆ ಅಪರಂಪಾರನನ್ನು ಹರ್ಷಿತನನ್ನಾಗಿ ಮಾಡಿತು. ಅವನೆಂದ : "ಮಹಾದೇವ ಮುನಿದಾಗ ಅಶುಭ ಪರಂಪರೆಗಳೇ ಒದಗುತವೆ. ಅವನು ಒಲಿದಾಗ ಶುಭದ ಮೇಲೆ ಶುಭ." ಯಾರು ಪುಟ್ಟಬಸವ ? ಆತನೇ ಬರೆದಿದ್ದ: "ನಾನು ಸ್ವಾಮಿಯರಿಗೆ ಪರಿಚಯಸ್ಥನಲ್ಲ. ತಮ್ಮನ್ನು ಮಾತ್ರ ನಾನು ಒಮ್ಮೆ