ಈ ಪುಟವನ್ನು ಪರಿಶೀಲಿಸಲಾಗಿದೆ
○೫○ ಸ್ವಮಿ ಅಪರ೦ಪಾ
ಕಂಡದ್ದುಂಟು, ಸ್ವಾಮಿಯವರು ಮಡಕೇರಿಯ ಅರಮನೆಗೆ ಒಮ್ಮೆ ಭೇಟಿಕೊಟ್ಟಿದ್ದರಲ್ಲ, ಆ ವೇಳೆಯಲ್ಲಿ, ಮುಂದೆ ಬೇಗನೆ ತಮ್ಮ ದರ್ಶನ ತಕ್ಕೊಂಡು ಆಶೀರ್ವಾದ ಪಡೆಯುವ ಭಾಗ್ಯ ಲಭಿಸತದೆ ಅಂತ ನಂಬಿದ್ದೇನೆ. ಈಗ ಈ ಪತ್ರ ಬರೆಯುವ ಉದ್ದಿಶ್ಯ ಏನು ಅಂದರೆ... ಉದ್ಡೇಶ--- ಕೊಡಗಿನಾದ್ಯಂತ ಆಗುತ್ತಿದ್ದ ಸಿದ್ಧತೆಗಳ ವಿಷಯ ದಾರಿಹೋಕರಿಂದ ಪುಟ್ಟಬಸವನೂ ಅವನ ಸಂಗಡಿಗರೂ ಕೇಳಿ ತಿಳಿದಿದ್ದರು. ಸಂಗಡಿಗರು ಎಂದರೆ, ಹುಲಿಕುಂದ ನಂಜಯ್ಯ , ಚೆಟ್ಟಿ ಕುಡಿಯ ಮತು ಕರ್ತು ಕುಡಿಯ, ಕುಡಿಯ ಸೋದರರನ್ನು ಅಪರಂಪಾರ ಬಲ್ಲ. ಅವರು ಅಸಮಾನ ವೀರರು. ಚಿಕವೀರರಾಜನಿಗೆ ಗುರಿವಿದ್ಯೆಯನ್ನು ಹೇಳಿಕೊಟ್ಟವರು. [ಆದರೆ ಆ ಸೋದರರೊ ? ಚಿಕವೀರರಾಜನ ದಾಯಾದಿಗಳನ್ನಷ್ಟೆ ಬಲ್ಲರು : ಸ್ವಾಮಿ ಅಪರಂಪಾರನನ್ನಲ್ಲ.] ಇಂಗ್ಲಿಷರಿಗೆ ಇದಿರಾಗಿ ನಡೆಯುವ ಬಂಡಾಯದಲ್ಲಿ ಭಾಗಿಗಳಾಗುವ ತವಕ ಅವರಿಗೆ, ದ್ರೋಹಿಗಳನ್ನು ದಂಡಿಸಿ ವಂಚಕರಿಗೆ ಶಾಸ್ತಿ ಮಾಡಿ, ಹಿಂದೆ ಆದ ಪ್ರಮಾದವನ್ನು ಸರಿಪಡಿಸುವ ಹಂಬಲ , ಪ್ರಜೆಗಳು ಈಗೇನೋ ಹತಾಶರು. ಆದರೆ ಅವಕಾಶ ದೊರೆತೊಡನೆ ಅವರು ಕಾದುವರೆಂಬುದರಲ್ಲಿ ಸಂದೇಹವಿರಲಿಲ್ಲ. ಒಂದು ವಿಶೇಷ ಸಂಗತಿ. ಘಟ್ಟದ ಕೆಳಗಿನ ನಾಲ್ಕು ಮಾಗಣೆಗಳ ಜನರು ಕೆರಳಿದ್ದರು, ಇಂಗ್ಲಿಷರ ಆಡಳಿತದ ರೀತಿನೀತಿಗಳು ಅವರಿಗೆ ಅಪ್ರಿಯವಾಗಿದ್ದವು , ಸಂಪಜೆ ಘಟ್ಟದ ಮಾರ್ಗವಾಗಿ ಬಂದವರು ಆ ಸುದ್ದಿಯನ್ನು ತಂದಿದ್ದರು ಸುಬ್ರಹ್ಮಣ್ಯದಿಂದ ಬಿಸಿಲೆ ಘಾಟಿಯ ಮಾರ್ಗವಾಗಿ ಬಂದವರೂ ಅದನ್ನು ಪುಷ್ಟೀಕರಿಸಿದ್ದರು... "...ಅಲ್ಲಿಯ ಜನರನ್ನು ಸುಲಭವಾಗಿ ಒಟ್ಟುಗೂಡಿಸಬಹುದು, ಅಷ್ಟೇ ಅಲ್ಲ. ಮಂಗಳೂರಿನವರೆಗೂ ದೌಡು ನಡೆಸಬಹುದು. ಯಾವುದಕ್ಕೂ ತಮ್ಮ ಸಮ್ಮತಿ ಬೇಕು. ಇಷ್ಟು ವಿವರ ವೇಲೂರಿನಲ್ಲಿ ಸನ್ನಿಧಿಗೆ ಅರಿಕೆಯಾಗಬೇಕು. ಅಲ್ಲದೆ, ನಾಲ್ಕುನಾಡು ಅರಮನೆ ನೋಡಿಕೊಳ್ಳುವವರಿಲ್ಲದೆ ಹಲಾಕು ಆಗಿಯದೆ, ಅಲೆಯುತ್ತ ನಮ್ಮ ದೇಶಕ್ಕೆ ಬಂದ ಅಬ್ಯಾಸ್ ಅಲಿ ತಿರುಗಿ ಮಲೆಯಾಳಕ್ಕೇ ಹೋದ ಅಂತ ಪ್ರತೀತಿ ಅದೆ, ಬಸವಯ್ಯ ನವರು ಏನಾದರೋ ಗೊತ್ತಿಲ್ಲ, ಮಾದಂತ ಆಪ್ಪಚ್ಚು, ಯಾದವ ನಾಡಿನ ಕಳಿಂಗಯ್ಯ ಹಾಗೂ ಉತ್ತಯ್ಯ ಇಂಗ್ರೇಜಿಯವರ ಚಾಕರರಾದದ್ದು ತಮಗೆ ವಿದಿತವೇ ಅದೆ. ಉಳಿಕೆ ಯಾರೂ ಅವರ ಎಂಜಲು ತಿನ್ನಲು ಹೋಗಿಲ್ಲ, ತಾವುನಾಡು, ಬೈಂಗುನಾಡಿನವರು ನಮ್ಮ ಕಡೆಗಿದ್ದಾರೆ. ಮುದ್ದಯ್ಯ ತಕ್ಕನವರು ನಮ್ಮನ್ನು ಕೂಡಿಕೊಳ್ಳುವುದಾಗಿ ಮಾತುಕೊಟ್ಟಿ ದ್ದಾರೆ. ಇರುವ ಸಂಗತಿ ಇಷ್ಟು, ತಮ್ಮ ಆದೇಶ ಏನು ಅಂತ ತಿಳಿಸುವ ಕೃಪೆಮಾಡಬೇಕು. ನಾವು ಕಾದಿರುತ್ತೇವೆ." ಓಲೆಯನ್ನೋದಿ ಮುಗಿಸಿ, ಅಪ್ಪಯ್ಯನ ಕೈಗೆ ಅದನ್ನು ಕೊಟ್ಟು, ಅಪರಂಪಾರನೆಂದ: “ನೆಲ ತಳವಾರನಾದೊಡೆ ಕಳ್ಳಂಗೆ ಹೋಗಲೆಡೆಯುಂಟೆ? ನೆನಪಿಡಿ, ಅಚ್ಚಣ್ಣ ನೀನೂ ತಿಳಕೋ, ಕೊಡಗಿನ ಇಡಿಯ ನೆಲವೇ ತಳವಾರನಾಗಿದೆ ಈ ರಾಜ್ಯವನ್ನು ಹೊಕ್ಕಿರುವ ಕಳ್ಳನಿಗೆ ಹೋಗಲು ಇನ್ನು ಎಡೆಯುಂಟೆ ? ಕರ್ಪೂರದ ಗಿರಿಯನುರಿ ಹಿಡಿದ ಬಳಿಕ ಇದ್ದಿಲುಂಟೆ? ಅವರ ಕರ್ಪುರದ ಗಿರಿಗೇ ನಾವು ಉರಿ ಇಟ್ಟ ಬಳಿಕ ಏನು ಉಳೀತದೆ?"