ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ റ೫೧
ಮಾತು ಮಾತಿಗೂ ಅಚ್ಚಣ್ಣ, 'ಅರ್ಥವಾಯಿತು ಅರ್ಥವಾಯಿತು' ಎಂಬಂತೆ
ತಲೆಯಾಡಿಸಿದ.
ಅಪರಂಪಾರ ತುಸು ಯೋಚಿಸಿ ನುಡಿದ :
"ಯೋಜನೆ ದಿವ್ಯವಾಗಿದೆ, ಇಲ್ಲಿ ನಾವು ಕೊಳ್ಳಿ ಇಡತೇವೆ. ಪುಟ್ಟಬಸವನೂ ಅವನ
ಸಂಗಡಿಗರೂ ಘಟ್ಟದ ಕೆಳಗೆ ದೀವಟಿಗೆ ಹಿಡಿಯಲಿ. ಮೈಸೂರು ಇಕ್ಕೇರಿಗಳು ಉರಿದೇಳಲಿ.
ಆಗ ಮಹಾದೇವನ ಹಣೆಗಣ್ಣು ತೆರೆದ ಹಾಗಾಗುತದೆ. ಆ ಬೆಳಕಿನಲ್ಲಿ ಹಿಂದೂಸ್ಥಾನದ
ಬೇರೆ ರಾಜ್ಯಗಳ ಜನ ತಮ್ಮ ದಾರಿ ಕುಡುಕೊಳ್ಳುತಾರೆ. ಸರಿಯೆ ಅಪ್ಪಯ್ಯ ?"
ಅಪರಂಪಾರನ ಸಂತೋಷದಲ್ಲಿ ತಾನೂ ಪಾಲುಗೊಳ್ಳುತ್ತ ಅಪ್ಪಯ್ಯನೆಂದ:
"ಸರಿ, ಸ್ವಾಮಿಯವರೆ."
"ಹಾಗಾದರೆ ಪುಟ್ಟಬಸವನಿಗೆ ಒಂದು ಮಾರೋಲೆ ಬರೆಯೋಣಾಗಲಿ, ಒಕ್ಕಣೆ..."
||ಓಂ||
ಶ್ರೀ ಶ್ರೀ ಶ್ರೀ ಅಪರಂಪಾರಸ್ವಾಮಿಗಳ ಕಾಜಗೋಡು ಮುಕ್ಕಾವಿನಿಂದ ಭಕ್ತಾಗ್ರಣಿ
ಪುಟ್ಟಬಸವನಿಗೆ ಬರೆಯುವುದೇನೆಂದರೆ---
ಕ್ಷೇಮ. ಸಾಂಪ್ರತ. ನಿನ್ನ ಓಲೆ ಮುಟ್ಟಿ ಮಹದಾನಂದವಾಯಿತು. ಎಲ್ಲವನ್ನೂ
ವಿಚಾರಿಸಿ ನೋಡಿ ನಾವು ಅಭಿಪ್ರಾಯಪಡುವುದೇನೆಂದರೆ...
೫೩
ಉರಿಯ ಶಾಖ ಲೀಹಾರ್ಡಿಗೆ ತಗಲಿತು. ಮೈಸೂರಿನ ಕಾಸ್ಸಾಮೇಜರನಿಗೂ ಆ
ಹೊಗೆಯಿಂದ ಉಸಿರು ಕಟ್ಟಿತು. ಮದರಾಸಿನ ಗವರ್ನರನೆಂದ: "ಇದೇನು ಮೋಡ ?"
ಕಲಕತ್ತೆಯಿಂದ ಗವರ್ನರ್ ಜನರಲ್ ಕೇಳಿದ: “ಅಲ್ಲಿ ಏನು ನಡೆದಿದೆ?"
ಅವರು ರೂಢಿಗೆ ತಂದ ಶಕೆಯ ಅನ್ವಯ : ಒಂದು ಸಾವಿರದ ಎ೦ಟುನೂರು
ಮೂವತ್ತಾರನೆಯ ಇಸವಿ,
ಕಂಪೆನಿ ಸರಕಾರದಿಂದ ಆಜ್ಞಪ್ತನಾಗಿ ಸ್ಟೋಕ್ಸ್ ಎಂಬಾತ ಮೈಸೂರಿಗೆ ಬಂದು,
ರಾಜ್ಯದ ಮುಖ್ಯಾಧಿಕಾರಿಯಾಗಿ ಕಾಸ್ಸಾಮೇಜರನಿಂದ ಅಧಿಕಾರ ವಹಿಸಿಕೊಂಡ.
ಸಡಿಲಗೊಂಡಿತ್ತಲ್ಲವೆ ರಾಜ್ಯಯಂತ್ರ ? ಸ್ಟೋಕ್ಸ್ ತಡಮಾಡಲಿಲ್ಲ. ಕೀಲುಗಳನ್ನೆಲ್ಲ
ಬಿಗಿಗೊಳಿಸತೊಡಗಿದ.
ಗವರ್ನರನಿಗೆ ಅತ ಸಲಹೆ ಮಾಡಿದ:
“ಆದಷ್ಟು ಬೇಗನೆ ಆಡಳಿತದ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದು ಉತ್ತಮ.
ಮೈಸೂರಿಗಿರುವ ಮಹತ್ವವನ್ನ ಕಡಿಮೆ ಮಾಡುವುದು ಒಳಿತು, ಆಗ ನಾಗರಹಾವಿನ
ವಿಷದ ಹಲ್ಲುಗಳನ್ನೆಲ್ಲ ಕಿತ್ತಹಾಗಾಗುತದೆ."
ಕಾಸ್ಸಾಮೇಜರ್ ದುರ್ಬಲನಾಗಿದ್ದ: ತನಗೂ ಆತನಿಗೂ ಹೋಲಿಕೆಯಿಲ್ಲ--–ಎಂದು
ಮೇಲಣವರಿಗೆ ತೋರಿಸಿಕೊಡುವ ಆತುರ ಸ್ಟೋಕ್ಸ್ ಗೆ.
ಇನ್ನೊಂದು ನಿರ್ಧಾರವನ್ನು ಆತ ಕೈಕೊಂಡ, ರಾಜಕಾರ್ಯದಲ್ಲಿ ಆಸಕ್ತಿ ಇಲ್ಲದವ
ನೆಂದೂ ಸಂಶಯಾಸ್ಪದ ಜನರೊಡನೆ ಸಂಪರ್ಕವಿರಿಸಿಕೊಂಡವನೆಂದೂ ಆರೋಪ ಹೊರಿಸಿ,
ದಿವಾನ ವೆಂಕಟರಮಣಯ್ಯನನ್ನು ಅವನು ಉದ್ಯೋಗದಿಂದ ಕಿತ್ತುಹಾಕಿದ.