ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರ೦ಪಾರ ೧೫೩ "ಅವರಿಗೊಂದು ಸಂದೇಶ ತಲಪಿಸುವುದು ಸಾಧ್ಯವೇ?” "ಸಾಧ್ಯವಾದೀತು,ಅನ್ನಿ." "ಬಿಡುಗಡೆಯ ದಿನ ದೂರವಿಲ್ಲ ಅಂತ ನಾವು ತಿಳಿಸಿದೇವೆ--ಎಂದರಾಯ್ತು." ದೂತನಾಗಿ ಬಂದವನೊಬ್ಬನ ವಿಷಯದಲ್ಲಿ ಇಷ್ಟೊಂದು ಅನುಕಂಪ! ಬಸಪ್ಪಾಜಿಯ ಕಣ್ಣುಗಳು ಮ೦ಜಾದುವು. "ಸ್ವತಃ ನಾನೇ ಪಟ್ಟಕ್ಕೆ ಹೋಗಿ ಸಂದೇಶ ಮುಟ್ಟೋ ಹಾಗೆ ಏರ್ಪಾಟುಮಾಡುತೇನೆ, ಸ್ವಾಮಿಯವರೆ." ೫೪ ರಾತ್ರೆಯ ಊಟದ ಹೊತ್ತು. ಅರಮನೆಯ ಕೈದೋಟದ ಕಡೆಗೆ ನಾಲ್ವರು ವ್ಯಕ್ತಿಗಳು ಚಲಿಸುತ್ತಿದ್ದುದು ಗಮನಕ್ಕೆ ಬಂದು, ಕಾವಲುಗಾರ ಧ್ವನಿ ಏರಿಸಿ ಕೇಳಿದ: "ಯಾರದು ?" ವ್ಯಕ್ತಿಗಳಲ್ಲೊಬ್ಬ--ಬಸಪ್ಪಾಜಿ ಅರಸು---ಗಡಸು ಸ್ವರದಲ್ಲಿ ಉತ್ತರವಿತ್ತ: "ನಾವು ಕಣಪ್ಪ. ಮಹಾಸ್ವಾಮಿಯೋರು ಕರೆಸಿದಾರೆ." ಕಾವಲುಗಾರನಿಗೆ ಅದು ಪರಿಚಿತ ಗಂಟಲು. "ಯಾರೂಂತ ತಿಳೀದೆ ಕೇಳ್ದೆ. ತಪ್ಪಾಯ್ತು ನನ್ನೊಡ್ಯಾ" ಎಂದ ಆತ. ಕೈದೋಟದೊಂದು ಮೂಲೆಯಲ್ಲಿ ಚಪ್ಪರದ ಕೆಳಗೆ ಕಲ್ಲು ಹಾಸುಗೆಯ ಮೇಲೆ ಕೃಷ್ಣರಾಜ ಒಡೆಯ ಕುಳಿತಿದ್ದ.ಕಾವಲುಗಾರ–ಬಸಪ್ಪಾಜಿಯವರ ಸಂಭಾಷಣೆ ಆತನಿಗೆ ಕೇಳಿಸಿತ್ತು. ವ್ಯಕ್ತಿಗಳು ಹತ್ತಿರ ಬಂದಾಗ ಆತ ಎದ್ದು ನಿಂತ. ಏಳಬಾರದಿತ್ತೇನೋ ಎಂದು, ಅತ್ತಿತ್ತ ನಡೆಯತೊಡಗಿದ. ಬಂಧುವಿನ ಸಲಿಗೆಯನ್ನು ಧ್ವನಿಯಲ್ಲಿ ತೋರುತ್ತ ಬಸಪ್ಪಾಜಿ ಅರಸನೆಂದ : "ಬಹಳ ಹೊತ್ತಾಯ್ತು ಬಂದು ?" ಕೃಷ್ಣರಾಜನೆಂದ : "ಇಲ್ಲಪ್ಪ, ಇಲ್ಲಪ್ಪ. ನಾವು ಈ ದಾರಿಯಾಗಿ ಬಂದ್ವಿ; ನೀವು ಆ ದಾರಿಯಾಗಿ ಬಂದಿರಿ." "ಇವರೇ ಸ್ವಾಮಿಯವರು.” ಅಪರಂಪಾರ ತಾನು ಹೊದೆದಿದ್ದ ಕಂಬಳಿಯನ್ನು ತೆಗೆದು ಇನ್ನೊಂದು ವ್ಯಕ್ತಿಯ– ಅಪ್ಪಯ್ಯನ—ಕೈಗಿತ್ತ, ಕಾವಿಯ ನಿಲುವಂಗಿ ಕೃಷ್ಣರಾಜನಿಗೆ ಕಾಣಿಸಿತು. ಆತನೆಂದ : "ಶರಣು." "ಶರಣು, ಒಡೆಯರು ಕೂತಿರೋಣಾಗಲಿ." ಅಪ್ಪಯ್ಯ ವೆಂಕಟಪ್ಪರ ಪರಿಚಯವನ್ನೂ ಬಸಪ್ಪಾಜಿ ಮಾಡಿಕೊಟ್ಟ. ಅವರಿಬ್ಬರೂ ತುಸು ದೂರದಲ್ಲಿ ಕುಳಿತರು. ನಾಲ್ವತ್ತರ ಗಡಿ ದಾಟಿದ್ದ ಅರಸ ಬಕ್ಕತಲೆಯಲ್ಲೆ ಬಂದಿದ್ದರೂ ರಾಜೋಚಿತವಾದ ಪೋಷಾಕನ್ನು ಧರಿಸಿದ್ದ. ಯಾರಾದರೂ ನೋಡುತ್ತಿರುವರೇನೋ ಎಂದು ಅವನ ದೃಷ್ಟಿ ಅತ್ತಿತ್ತ ಚಲಿಸುತ್ತಿತ್ತು.