ಈ ಪುಟವನ್ನು ಪರಿಶೀಲಿಸಲಾಗಿದೆ
೧೫೪ ಸ್ವಾಮಿ ಅಪರೆಂಪಾರ ತಗ್ಗಿದ ಧ್ವನಿಯಾದರೂ ಮಾತಿನಲ್ಲಿ ಗಾಂಭೀರ್ಯ ತುಂಬಿ, ಅಪರಂಪಾರನೆಂದ: “ಈ ಭೇಟಿಯ ಉದ್ದೇಶ ಮಹಾರಾಜರಿಗೆ ವೇದ್ಯವಿದ್ದೀತು." ಪೀಠಿಕೆ ಅನಗತ್ಯ ಎನ್ನುವಂತೆ ಅಸಹನೆ ತೋರುತ್ತ ಕೃಷ್ಣರಾಜ ಒಡೆಯನೆಂದ: "ಬಸಪ್ಪಾಜಿ ಹೇಳಿದಾರೆ.ನಮ್ಮಿಂದೇನಾಗಬೇಕು, ತಿಳಿಸಿಬಿಡಿ." ಅಪರಂಪಾರ ಸಾವಧಾನವಾಗಿ ಅಂದ: "ಲೋಕದಲ್ಲಿ ಜನ್ಮತಾಳುವವರೆಲ್ಲ ಮಹಾಪುರುಷರಲ್ಲ. ಆದರೂ ಹುಟ್ಟಿದ ಪ್ರತಿಯೊ ಬ್ಬನೂ ದೈವತ್ವ ಪಾಪ್ತಿಗೆ ಪ್ರಯತ್ನಿಸಬೇಕು. ಸಾಧ್ಯವಾಗತದೋ ಇಲ್ಲವೋ ಅನ್ನೋದು ಬೇರೆ ಮಾತು. ನಾವು ಒಂದಷ್ಟು ಜನ ಆ ದಿಕ್ಕಿನಲ್ಲಿ ಅಲ್ಪ ಪ್ರಯತ್ನ ಮಾಡತಾ ಇದ್ದೇವೆ. ಅದೇನೂಂತ ತಮಗೆ ಗೊತ್ತಿದೆ. ಮೈಸೂರಿಗೆ ಅನ್ಯಾಯವಾದಾಗಲೇ ನಾವು ಅಂದು ಕೊಂಡೆವು, ಕೊಡಗಿಗೂ ಈ ದುರ್ಗತಿ ಬೇಗ ಪ್ರಾಪ್ತವಾಗತದೆ. ಅಂತ, ಹಾಗೇ ಆಯು. ಡೊಂಕಾದದ್ದನ್ನ ಸರಿಪಡಿಸೋಕೆ ಈಗ ನೋಡತಿದೇವೆ.' ಕೃಷ್ಣರಾಜ ನಡುವೆ ಬಾಯಿ ಹಾಕಿದ : "ಬಸಪ್ಪಾಜಿ ಎಲ್ಲ ವಿಷಯ ಬಲ್ಲರು. ನಮ್ಮ ಬೊಕ್ಕಸ ಈಗ ಬರಿದಾಗಿದೆ. ಕುಂಪಣಿಯ ವರು ಕೊಡುವ ಹಣ ಅರಮನೆಯ ವೆಚ್ಚಕ್ಕೇ ಸಾಲದು. ಆದರೂ ನಮ್ಮ ಕೈಲಾದ ಸಹಾಯ ನಾವು ಮಾಡುತೇವೆ." ಉಗುಳು ನುಂಗಿ ಅಪರಂಪಾರನೆಂದ: "ಹಣದ ಮಾತಲ್ಲ. ತಮಗೆ ಅನ್ಯಾಯ ಮಾಡಿದರೂಂತ ಬಹಿರಂಗವಾಗಿ ತಾವು ಸಾರಿ ದರೆ ಜನ ರೊಚ್ಚಿಗೇಳತಾರೆ.ತಮ್ಮ ಕಡೆಯ ಧೀರರು ಒಬ್ಬಿಬ್ಬರು ದಾರಿ ತೋರಿದರೆ ಇಂಗ್ರೇಜಿ ಯವರಿಗೆ ಪ್ರಜೆಗಳೇ ಬುದ್ಧಿ ಕಲಿಸತಾರೆ." "ಬಂಡಾಯವೇಳಬೇಕು ಅಂತಲೆ ನೀವು ಹೇಳೋದು?" "ಅದು ಸಾಧ್ಯವಾದರೆ ನಾವು ಧನ್ಯರಾಗುತೇವೆ." "ವಿಚಾರಮಾಡಿ ನೋಡುತೇವೆ. ಇಕ್ಕೇರಿಯ ಸೂರಪ್ಪ ನಾಯಕರೂ ನಿಮ್ಮ ಜತೆ ಇದಾರಂತೆ." "ಹೌದು: ಮೈಸೂರು, ಇಕ್ಕೇರಿ, ಕೊಡಗುಗಳು ಸ್ವತಂತ್ರ ರಾಜ್ಯಗಳಾಗಿ ಪುನಃ ಉದಯಿಸೋದನ್ನು ನೋಡಿದರೆ ನಮ್ಮ ಜನ್ಮ ಸಾರ್ಥಕವಾಗತದೆ.' ತುಸು ಅನುಮಾನಿಸಿ ಕೃಷ್ಣರಾಜನೆಂದ: "ಒಂದು ಮಾತು ನಾವು ಹೇಳಿಬಿಡುವುದು ಮೇಲು." "ತಿಳಿಸೋಣಾಗಲಿ." "ಇಕ್ಕೇರಿ ಮೈಸೂರಿನ ಒಂದು ಭಾಗ." "ಹೈದರ್ ಗೆದ್ದಮೇಲೆ ಹಾಗಾಯ್ತು. ಈಗಂತೂ ಇಕ್ಕೇರಿ, ಮೈಸೂರುಗಳೆರಡೂ ಇಂಗ್ರೇಜಿಯವರ ವಶದಲ್ಲಿವೆ ಮೈಸೂರು, ಇಕ್ಕೇರಿಗಳೆರಡೂ ಸ್ವತಂತ್ರವಾದರೆ ಅನ್ಯೋನ್ಯ ಮೈತ್ರಿಯಿಂದ ಇರಬಹುದಲ್ಲ ?" "ವಿಚಾರಮಾಡಿ ಹೇಳತೇವೆ." "ಅಪರಾತ್ರಿಯಲ್ಲಿ ಹೀಗೆ ಕರೆಸಿ ತೊಂದರೆ ಕೊಟ್ಟೆವು." "ಪರವಾಗಿಲ್ಲ. ನಮಗೆ ಅಂಥ ಕೆಲಸವಾದರೂ ಏನಿದೆ? ಶಿವಮೊಗ್ಗಿಯಿಂದ ದಶಾವತಾರ