ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ
ಮಲ್ಲಪ್ಪ, ತನ್ನ ಕಾತರವನ್ನು ಮರೆಮಾಡಲೆತ್ನಿಸುತ್ತ ದಪ್ಪಗಂಟಲಲ್ಲಿ ಒಂದೇ ಉಸುರಿಗೆ ಅಂದ :
"ಸೋಮಿಯೋರು ನಾ ಹೇಳಿದ್ದನ್ನ ಕೇಳಬೇಕು, ಮುಖ್ಯವಾದ್ದೆಂದರೆ, ವೇಷ ಮರೆ ಸೋದು. ಇಕಾ, ರೈತನ ಉಡುಪು ಧೋತರ ಉಟ್ಟೊಳ್ಳಿ, ಕಂಬಳಿ ಹೆಗಲ ಮೇಲೆ ಹಾಕ್ಕೊಳ್ಳಿ, ಈ ಬಡಿಗೆ ಹಿಡಕೊಳ್ಳಿ, ರುಮಾಲು ನಾ ಸುತ್ತತೀನಿ. ದಾರೀಲಿ ಯಾರೇ ಮಾತಾಡಿಸಿದರೂ ನೀವು ಸುಮ್ಮನಿರಬೇಕು-" ವೀರಪ್ಪ ನಕ್ಕು, ನಡುವೆ ಬಾಯಿ ಹಾಕಿದ: "ಅವರೆಲ್ಲ ನಾನು ಮೂಕ ಅಂದ್ಯೋಂಡ್ರೊ?"
“ಮೂಕ ಅಲ್ಲ, ಮದುವೆಗೆ ಹೆಣ್ಣು ಹುಡುಕ್ಕೊಂಡು ಓಗೋ ಗಂಡು. ಬೋ ನಾಚಿಕೆ.
ಉತ್ತರ ಯಾನಿದನ್ನೂ, ಸೋದರಮಾವ ನಾ ಕೊಡತೇನೆ!"
“ಇದೇನು ಮಲ್ಲಪ್ಪ? ನನ್ನ ಸಂಗಾತ ಬರೋ ಯೋಚನೆಯೊ?" ಮಲ್ಲಪ್ಪ ಮಂಡಿಯೂರಿ ಕುಳಿತು, ಕೈ ಜೋಡಿಸಿದ:
"ಈ ಒಂದು ಪಾರ್ಥನೆ ನಡಸ್ಕೊಡಿ. ನಂಜರಾಜಪಟ್ಟ ಮಟ ಬಂದು ನಿಮ್ನನ್ನ ಸ್ವಾಮಿಗಳಿಗೂಪ್ಪಿಸಿ ವಾಪಸಾಗತೀನಿ."
"ಹೌದು ಸೋಮಿಯೋರೆ" ಎಂದು ಅಕ್ಕವ್ವ ಧ್ವನಿ ಕೂಡಿಸುತ್ತಲಿದ್ದಂತೆ, ವೀರಪ್ಪ ನೆಂದ:
"ಛೆ! ಛೆ! ನಿಮ್ಮಿಬ್ಬರ ಪಾದಮುಟ್ಟಿ ಆಶೀರ್ವಾದ ಬೇಡಿಕೋಬೇಕೂಂತ ನಾನಿದ್ದರೆ, ಅಣ್ಣನೇ ಮಂಡಿಯೂರಿ ಕೈ ಜೋಡಿಸೋದಾ? ಏಳು ಮಲ್ಲಪ್ಪಣ್ಣ, ಒಪ್ಪಿದೆ." ಎಳೆಯನ ಉತ್ಸಾಹದಿಂದ ಮಲ್ಲಪ್ಪ ಜಿಗಿದು ನಿಂತ. ಕೆಲವೇ ನಿಮಿಷಗಳಲ್ಲಿ ಸೋದರಮಾವನೂ ಅಳಿಯನೂ ಪಯಣಕ್ಕೆ ಸಿದ್ದರಾದರು. ವೀರಪ್ಪ, ಅಕ್ಕವ್ವನ ಪಾದಗಳಿಗೆ ನಮಿಸ ಹೋದ. "ಉಂಟೆ ಸೋಮಿಯೋರಾ?" ಎನ್ನುತ್ತ ಆಕೆ ಹಿಂದೆ ಹಿಂದಕ್ಕೆ ಸರಿದಳು. ಗದ್ದದ ಕಂಠದಿಂದ ವೀರಪ್ಪನೆಂದ: "ಹೋಗ್ವರತೀನಿ, ತಾಯಿ." "ನಂಜರಾಜ ಪಟ್ಟ ತಲಪೋಕೆ ಎರಡು ಮೂರು ದಿನ ಹಿಡೀತದೆ. ಯಾನಿದ್ದರೂ ಮುಂದಿನ ವಾರ ಇದೇ ಸಮಯದೊಳಗೆ ಬಂದುಬಿಡತೀನಿ” ಎಂದ ಮಲ್ಲಪ್ಪ, ಹೆಂಡತಿ ಯೋಡನೆ. ಬುತ್ತಿಯ ಗಂಟು, ಮಡಚಿದ ಕಂಬಳಿ, ಅದರೊಳಗೆ ಬಚ್ಚಿಟ್ಟ ಬಿಚ್ಚುಗತ್ತಿ ಇಷ್ಟ ರೊಡನೆ ಮಲ್ಲಪ್ಪ ಮುಂದಾದ: ವೀರಪ್ಪ ಹಿಂಬಾಲಿಸಿದ. ಅವರ ಬರಿ ಪಾದಗಳು ಸದ್ದಿಲ್ಲದೆ ಅಂಗಳವನ್ನು ದಾಟಿದುವು. ಅಂಗಳದ ಅಂಚಿನ ತನಕ ಹೋಗಿ ಅಕ್ಕವ್ವ ಅವರನ್ನು ಬೀಳ್ಕೊಟ್ಟಳು.
ಮಲೆತಿರಿಕೆ ಬೆಟ್ಟದ ತಪ್ಪಲಲ್ಲಿದ್ದ ಆ ಹಳ್ಳಿಗೆ ರಾಜದೂತರು ಬಂದು ತಲಪಿದಾಗ ನಡು ಮಧ್ಯಾಹ್ನವಾಗಿತ್ತು.