ಪುಟ:ಹಳ್ಳಿಯ ಚಿತ್ರಗಳು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಲವಂತದ ಮದುವೆ

೧೦೭

ಆಗ ಅವನಿಗೆ ವಯಸ್ಸು ಸುಮಾರು ೧೭ ಇದ್ದಿರಬಹುದು. ಹೈಸ್ಕೂಲು ನಾಲ್ಕನೇ ಫಾರಂನಲ್ಲಿ ಓದುತ್ತಿದ್ದ. ಎಲ್ಲಿಯೋ ವಾರದ ಊಟಮಾಡಿಕೊಂಡು, ಯಾರ ಮನೆಯಲ್ಲಿಯೋ ಒಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಅದರಲ್ಲಿ ಇರುತ್ತಿದ್ದ. ಆ ಮನೆಯ ಯಜಮಾನನಿಗೆ ೩-೪ ಹೆಣ್ಣು ಹುಡುಗಿಯರಿದ್ದರು. ಯಾರಿಗೂ ಇನ್ನೂ ಮದುವೆಯಾಗಿರಲಿಲ್ಲ. ಶೀನಪ್ಪ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡ ಮೊದಲ ತಿಂಗಳಲ್ಲಿಯೇ, ಮನೆಯ ಯಜಮಾನನ ಮೊದಲ ಮಗಳಿಗೆ ಮದುವೆಯು ನಿಶ್ಚಯವಾಯಿತು. ಪಾಪ, ಆ ತಂದೆಯು ಎಲ್ಲೆಲ್ಲೋ ತಿರುಗಿ ತಿರುಗಿ ಸಾಕಾಗಿ ಕೊನೆಗೆ ಗಂಡು ಹುಡುಗ ಎಂಬುದಾಗಿ ಒಬ್ಬನನ್ನು ಗೊತ್ತುಮಾಡಿಕೊಂಡು ಬಂದಿದ್ದರು. ಮದುವೆಯ ಲಗ್ನವು ನಿಶ್ಚಯಿಸಲ್ಪಟ್ಟಿತು. ಮದುವೆಯಾಗುವುದಕ್ಕೆ ಯಾವ ಪ್ರತಿಬಂಧಕವೂ ಇರುವಂತೆ ತೋರಲಿಲ್ಲ.

ಆದರೆ “ಆರು ಮನುಷ್ಯ ಪ್ರಯತ್ನ; ಏಳನೆಯದು ದೈವದ ಇಚ್ಛೆ" ಎಂಬ ವಾಕ್ಯವು ಈ ಮದುವೆಗೆ ಸರಿಯಾಗಿ ಅನ್ವಯಿಸಿಬಿಟ್ಟಿತು. ಮದುವೆಯ ದಿವಸ ಬೆಳಿಗ್ಗೆ ವರನ ತಾಯಿಯು ಸ್ವರ್ಗಸ್ಥಳಾದ ವರ್ತಮಾನ ಬಂದಿತು. ವರನು ಹೇಳದೆ ಕೇಳದೆ ಹೊರಟುಹೋದನು.

ಪಾಪ, ಹುಡುಗಿಯ ತಂದೆಗೆ "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ”ವೆಂಬಂತೆ ಆಯಿತು. ಇಷ್ಟು ಕಷ್ಟದಿಂದ ಸಂಪಾದಿಸಿದ ವರ ಹೋಯಿತಲ್ಲಾ, ಅಯ್ಯೋ ದೇವರೆ? ಹೊಂದಿಸಿದ ಸಾಮಾನು, ಹಪ್ಪಳ, ಸಂಡಿಗೆ, ಮಾಡಿಟ್ಟ ಒಬ್ಬಟ್ಟು ಎಲ್ಲಾ ಹಾಳಾಗಿ ಹೋಯಿತಲ್ಲ" ಎಂದು ಅವರು ಕೊರಗಿದರು. ಅವರ ಮನೆಯ ಕೊಠಡಿಯ ಮೇಲೆ ಶೀನಪ್ಪನು “ಶ್ರೀನಿವಾಸಯ್ಯಂಗಾರ್” ಎಂಬುದಾಗಿ ಸೀಮೆಸುಣ್ಣದಲ್ಲಿ ಹೆಸರನ್ನು ಬರೆದಿದ್ದ. ಸ್ನೇಹಿತರು ಬಂದರೆ ತನ್ನ ಕೊಠಡಿಯನ್ನು ನೋಡಿ ತಿಳಿದುಕೊಳ್ಳಲಿ ಅಂತಲೋ ಅಥವ ಟಪಾಲ್ ಜವಾನನಿಗೆ ತನ್ನ ಕೊಠಡಿಯು ತಿಳಿಯಲಿ ಎಂದೋ, ಅಥವ ಸೀಮೆಸುಣ್ಣ ಕೈಗೆ ಸಿಕ್ಕಿದಾಗ ಕೈ ನಿಲ್ಲದೆ ಚಪಲತೆಯಿಂದ ಚೇಷ್ಟೆಗಾಗಿಯೋ ಬರೆದಿದ್ದ. ಮದುವೆಗಾಗಿ ನೆರೆದಿದ್ದ ನೆಂಟರೊಬ್ಬರು, “ಈ ಶ್ರೀನಿವಾಸಯ್ಯಂಗಾರಿ ಅನ್ನುವರು ಯಾರು?" ಎಂದರು. ಅವನ ವಯಸ್ಸು