ಪುಟ:ಹಳ್ಳಿಯ ಚಿತ್ರಗಳು.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ಹಳ್ಳಿಯ ಚಿತ್ರಗಳು

ಊರು ಎಲ್ಲಾ ತಿಳಿದ ಮೇಲೆ "ಅವನಿಗೆ ಯಾಕೆ ನಿಮ್ಮ ಹೆಣ್ಣನ್ನು ಕೊಟ್ಟು ಮದುವೆ ಮಾಡಿಬಿಡಬಾರದು?” ಎಂದರು. ಹೆಣ್ಣಿನ ತಂದೆಯು ನಿರುತ್ಸಾಹದಿಂದ “ಮಾಡಬಹುದು, ಆದರೆ ಅವನು ಒಪ್ಪಬೇಕಲ್ಲ" ಎಂದರು. ಸ್ವಲ್ಪ ಹೊತ್ತು ಅವರಲ್ಲಿಯೇ ಮಾತುಕತೆಯಾದನಂತರ, ಹೆಣ್ಣಿನ ತಂದೆಯೂ ಅವನ ೨-೩ ಜನ ಬಂಧುಗಳೂ ಶೀನಪ್ಪನನ್ನು ಕರೆತರಲು ಸ್ಕೂಲಿಗೆ ಹೋದರು. ಆ ವೇಳೆಗೆ ಮೊದಲನೆಯ 'ಪೀರಿಯಡ್' ಪ್ರಾರಂಭವಾಗಿತ್ತು. ಭೂಗೋಳ ಪಾಠ ನಡೆಯುತ್ತಿತ್ತು. ಉಪಾಧ್ಯಾಯರು 'ಜಿ. ಐ. ಪಿ. ರೈಲ್ವೆಯ ವಿಚಾರವಾಗಿ ಉಪನ್ಯಾಸ ಮಾಡುತ್ತಿದ್ದರು. ಅದು ಏನಾದರೂ ಶೀನಪ್ಪನ ತಲೆಗೆ ಹತ್ತಲೇ ಇಲ್ಲ. "ಹಾಳಾದ್ದು ಪಾಠ ಮುಗಿದುಹೋದರೆ ಸಾಕಲ್ಲ" ಎಂದುಕೊಂಡು ಅವನು ತೂಗಡಿಸುತ್ತಿದ್ದನು. ಅಲ್ಲದೆ "ಮನೆಯವರು ತನಗೆ ಊಟಕ್ಕೆ ಹೇಳಲಿಲ್ಲ. ಮರೆತುಬಿಟ್ಟರೇನೋ? ಮದುವೆಯ ಒಳ್ಳೆಯ ಊಟ ತಪ್ಪಿಹೋಯ್ತು. ಆದರೂ ೧೨ ಗಂಟೆಗೆ ಹೋದಾಗ ಮನೆಯ ಮುಂದೆ ಸ್ವಲ್ಪ ಸುಳಿದಾಡಿ ನೋಡುತ್ತೇನೆ. ಮದುವೆಯ ಊಟ ಸಿಕ್ಕಿದರೆ ಅದೇ ಲಾಭ" ಎಂದು ಅವನು ಯೋಚಿಸುತ್ತಿದ್ದನು. ಅಷ್ಟು ಹೊತ್ತಿಗೆ ಸ್ಕೂಲು ಜವಾನನು ಕೈಯ್ಯಲ್ಲಿ ಒಂದು ಚೀಟಿಯನ್ನು ಹಿಡಿದುಕೊಂಡು ಒಳಗೆ ಬಂದನು. “ನಾಳೆ ದಿವಸ ರಜ ಸಿಕ್ಕಬಹುದು” ಎಂದುಕೊಂಡು ಹುಡುಗರೆಲ್ಲ ಉಪಾಧ್ಯಾಯರ ಕಡೆಗೆ ನೋಡಿದರು. ಉಪಾಧ್ಯಾಯರು ಚೀಟಿಯನ್ನು ನೋಡಿ ಗಂಭೀರಧ್ವನಿಯಿಂದ "ಶ್ರೀನಿವಾಸಯ್ಯಂಗಾರ್‍ಯರನ್ನು ಯಾರೋ ಕರೆಯುತ್ತಾರೆ” ಎಂದು ಹೇಳಿ ಶೀನಪ್ಪನ ಕಡೆಗೆ ತಿರುಗಿ “ನೀನು ಹೋಗಬಹುದು" ಎಂದರು. ಶೀನಪ್ಪನಿಗೆ ಸದ್ಯ ಪಾಠ ತಪ್ಪಿತಲ್ಲಾ ಎಂದು ಆನಂದ. ಎರಡನೆಯದಾಗಿ “ಓಹೋ ನನ್ನನ್ನು ಊಟಕ್ಕೆ ಕರೆಯಲು ಅವರ ಮನೆಯವರು ಯಾರೋ ಬಂದಿರಬೇಕು. ಅನ್ಯಾಯವಾಗಿ ಅವರ ವಿಷಯದಲ್ಲಿ ಕೆಟ್ಟ ಆಲೋಚನೆಯನ್ನು ಮಾಡಿದೆ. ನನ್ನನ್ನು ಮರೆಯುತ್ತಾರೆಯೇ ಅವರು” ಎಂದುಕೊಂಡು ಹೊರಕ್ಕೆ ಬಂದನು. ಮನೆಯ ಯಜಮಾನನಲ್ಲದೆ ಇನ್ನೂ ಮೂರು ಜನರಿದ್ದರು. ಒಬ್ಬನನ್ನು ನೋಡಿಯಂತೂ ಇವನಿಗೆ ಭಯವೇ ಆಯಿತು. ಅವನು ಹೊಡೆದಾಡುವುದಕ್ಕೆ ಸಿದ್ದವಾಗಿದ್ದ ಪೈಲ್ವಾನನಂತೆ ಧಾಂಡಿಗನಾಗಿ ತೋರುತ್ತಿದ್ದನು. ಇವನು