ಪುಟ:ಹಳ್ಳಿಯ ಚಿತ್ರಗಳು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಲುಮೆಯ ಒರೆಗಲ್ಲು



ಅವನನ್ನು ಬಾಲ್ಯದಲ್ಲಿ ನೋಡಿದವರು ಅವನ ಕೊನೆ ಹೀಗಾಗುತ್ತದೆಂದು ಎಂದಿಗೂ ತಿಳಿದಿರಲಿಲ್ಲ. ಅವನ ಬುದ್ದಿಯೇನೊ ಬಹಳ ಚುರುಕಾಗಿರಲಿಲ್ಲ. ಅಕ್ಷರಗಳನ್ನು ಮಾತ್ರ ಚೆನ್ನಾಗಿ ಬರೆಯುತ್ತಿದ್ದ. ಅದರೆ ಅವನ ಗುಣಗಳು ಎಲ್ಲರನ್ನೂ ಮುಗ್ಧರನ್ನಾಗಿ ಮಾಡಿದ್ದುವು. ನಾವಿಬ್ಬರೂ ಒಂದೇ ತರಗತಿಯಲ್ಲಿ ಹೈಸ್ಕೂಲಿನಲ್ಲಿ ಓದುತ್ತಿದ್ದೆವು. ಅವನು ವೀರಶೈವರವನು; ನಾನು ಥೇಟ್ ಹದಿನಾರಾಣೆಯ ಗೊಡ್ಡು ವೈದಿಕ ಬ್ರಾಹ್ಮಣ. ನಾನು ಊರಿನಿಂದ ಬಂದು ಸ್ಕೂಲನ್ನು ಸೇರಿದಾಗ ಹನ್ನೆರಡು ಜನಕ್ಕೆ ಆಗುವಷ್ಟು ನಾಮವನ್ನು ಒಬ್ಬನೇ ಬಳಿದುಕೊಂಡುಬಿಡುತ್ತಿದ್ದೆನು. ಅವನು ಅದನ್ನು ನೋಡಿ ಸುಮ್ಮನೆ ಹಾಸ್ಯ ಮಾಡುತ್ತಿದ್ದನು. "ಬೀದಿಯ ಮಣ್ಣೆಲ್ಲ ನಿನ್ನ ಹಣೆಯ ಮೇಲೆ ಅಯ್ಯಂಗಾರಿ" ಎನ್ನುತ್ತಿದ್ದನು. ನಾನು “ಬೀದಿಯ ಕಲ್ಲೆಲ್ಲ ನಿನ್ನ ಎದೆಯಮೇಲೆ" ಎನ್ನುತ್ತಿದ್ದೆ. ವರ್ತಮಾನಪತ್ರಿಕೆಗಳನ್ನು ಓದುವ ಅಭಿಲಾಷೆಯನ್ನು ನನಗೆ ಮೊದಲು ಹುಟ್ಟಿಸಿದವನು ಅವನೆ.

ಅವನು ಬಹಳ ಸರಳವಾದ ಹುಡುಗ. ಉಡುಪಿನ ಆಡಂಬರವಿಲ್ಲ. ಎಲ್ಲ ಕೆಲಸಗಳನ್ನೂ ಕಾಲಕ್ಕೆ ಸರಿಯಾಗಿ ಕ್ರಮವಾಗಿ ಮಾಡುತ್ತಿದ್ದನು. ವಾರಕ್ಕೆ ಎಲ್ಲೊ ಒಂದೋ ಎರಡೋ ಕಾಗದ ಬರೆಯುತ್ತಿದ್ದರೂ ಇಂದಾ-ಗೆ ರಿಜಸ್ಟರ್ ಬೇರೆ ಇಟ್ಟುಬಿಟ್ಟಿದ್ದನು. ನಾನು ಅವನನ್ನು ಪದೇಪದೆ "ನೀನು ಬಹಳ ದೊಡ್ಡ ಅಧಿಕಾರಿಕಣೋ. ಇಂದಾ-ಗೆ ರಿಜಸ್ಟರ್‌ ಇಲ್ಲದೆ ಆಗುವುದಿಲ್ಲವೇನೋ" ಎಂದು ಹಾಸ್ಯ ಮಾಡುತ್ತಿದ್ದೆನು. ಪ್ರಪಂಚದಲ್ಲಿರುವ ಎಲ್ಲಾ ವಿಷಯಗಳಮೇಲೂ ನಾವು ಚರ್ಚೆಮಾಡುತ್ತಿದ್ದೆವು. ಒಂದು ದಿವಸ ವಿವಾಹದ ಚರ್ಚೆ ಬಂದಿತು. ನಾವು ಇಂಟರ್ ಕ್ಯಾಸ್ಟ್ (ಅಂತರ ಜಾತಿಯ) ವಿವಾಹವನ್ನು ಪ್ರಚಾರಕ್ಕೆ ತರಬೇಕೆಂದು ಯೋಚನೆಮಾಡಿ ನಿಶ್ಚಯಿಸಿದೆವು. ಅವನು "ನನಗೆ ಒಂದು ಅಯ್ಯಂಗಾರು ಹೆಣ್ಣನ್ನು ಮದುವೆಮಾಡಿಸಿಬಿಡು.