ಪುಟ:ಹಳ್ಳಿಯ ಚಿತ್ರಗಳು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

ಅವನ ಮೇಲೆಯೇ ಬಿಡುವಂತೆ ತಿರುಗಿಸುವುದು; ಕರಿಯ ಪಿಶಾಚಿಯಂತೆ ತಮ್ಮನ್ನು ನುಂಗಲು ಬರುತ್ತಿರುವ ಬಸ್ಸನ್ನು ನೋಡಿ, ಎತ್ತುಗಳು ಹೆದರಿ ಗಾಡಿಯವನ ಸ್ವಾಧೀನಕ್ಕೆ ಸಿಕ್ಕದೆ, ರಸ್ತೆಯನ್ನು ಬಿಟ್ಟು ಹಳ್ಳದ ಕಡೆಗೆ ಓಡುವುದು; ಹುಲ್ಲಿನ ಭಾರದಿಂದ ಓಸರವನ್ನು ಹೊಂದಿದ ಗಾಡಿಯು ಮಗುಚಿಕೊಳ್ಳುವುದು; ಗಾಡಿಯವನು ನಿರ್ದಾಕ್ಷಿಣ್ಯವಾಗಿ ಡೈವರನನ್ನು ಬಯ್ಯಲು, ಅವನು ನಗುತ್ತಾ ಭೂತದಿಂದ ಹಿಡಿಯಲ್ಪಟ್ಟವನಂತೆ ಬಸ್ಸನ್ನು ೬೦ ಮೈಲು ವೇಗದಲ್ಲಿ ಓಡಿಸುವುದು; ಪ್ರಯಾಣಿಕರು ಇಳಿಯಬೇಕಾದ ಕಡೆ ನಿಲ್ಲಿಸದೆ, ಅರ್ಧ ಮೈಲು ಮುಂದೆ ನಿಲ್ಲಿಸುವುದು; ಇಳಿಯುತ್ತಿರುವಾಗ ಕಂಡಕ್ಟರ್ ಎಂಬ ಬ್ರಹ್ಮನು ಪ್ರಯಾಣಿಕನು ಇನ್ನೇನು ಇಳಿದನೆಂದು ತಿಳಿದುಕೊಂಡು, ರೈಟ್ ಎಂಬುದಾಗಿ ಶಿಳ್ಳು ಹಾಕುವುದು; ಡೈವರನು ಹಿಂದು ಮುಂದು ನೋಡದೆ, ಒಮ್ಮಿಂದೊಮ್ಮೆ ಬಸ್ಸನ್ನು ಮುಂದಕ್ಕೆ ಬಿಡಲು, ಇಳಿಯುತ್ತಿದ್ದ ಪ್ರಯಾಣಿಕನು ಕೆಳಕ್ಕೆ ಬಿದ್ದು, ಭೂಚುಂಬನ ಮಾಡಿ ಹಲ್ಲು ಮುರಿದುಕೊಳ್ಳುವುದು; ಮಳೆಯು ಒಳಕ್ಕೆ ಬರದಂತೆ ತಡೆಯಲು ಗಾಡಿಯ ಅಂಚಿಗೆ ಕಟ್ಟಿರುವ ಮೇಣಗಬಟದ ತುದಿಯ ಗುಂಡಿಯು ಕಿತ್ತುಹೋಗಿ, ಗಾಳಿಯಿಂದ ಅದು ಪಟಪಟನೆ ಒಳಕ್ಕೆ ಹೊಡೆಯುವಾಗ, ತುದಿಯಲ್ಲಿ ಕುಳಿತಿರುವ ಪ್ರಯಾಣಿಕನು ಅದರ ಹೊಡೆತದ ಸವಿಯನ್ನು ನೋಡುವುದು; ಪೋಲೀಸ್ ಸ್ಟೇಷನ್ ಬಳಿ ಪ್ರಯಾಣಿಕರು ಹತ್ತು ಮಂದಿ ಇದ್ದರೆ, ಊರ ಹೊರಗಡೆ ೧೪ ಮಂದಿ ನಿಂತಿದ್ದು, ಗಾಡಿಯು ಅಲ್ಲಿಗೆ ಬಂದ ಕೂಡಲೆ ಕಂಡಕ್ಟರ್ ಮಹಾಶಯನು ಚೀಲಕ್ಕೆ ಧಾನ್ಯವನ್ನು ತುಂಬುವಂತೆ ಅವರನ್ನೆಲ್ಲಾ ಗಾಡಿಯೊಳಕ್ಕೆ ತುಂಬುವುದು - ಜನರು ಹೆಚ್ಚಿದಂತೆಲ್ಲಾ ಗಾಡಿಯು ಪುಷ್ಪಕದಂತೆ ಹೆಚ್ಚು ಹೆಚ್ಚು ವಿಸ್ತಾರವಾಗದಿರುವುದು. ಈ ಪಟ್ಟಿಯನ್ನು ಮುಂದರಿಸಿ ಪ್ರಯೋಜವಿಲ್ಲ. ಇವುಗಳೆಲ್ಲವನ್ನೂ ಅನುಭವಿಸಿದ್ದ ನಾನು, ಮಂಡ್ಯದ ಬಸ್ಸಿನಲ್ಲಿ ಕುಳಿತೊಡನೆಯೇ ಒಂದು ವಿಧವಾದ ಭಯದ ಶಂಕೆಯಿಂದ ನಡುಗತೊಡಗಿದೆ. ಬಸ್ಸು ಸಕಾಲದಲ್ಲಿ ಹೊರಟಿತು.

ಬಸ್ಸು ಬನ್ನೂರಿಗೆ ಬರುವವರೆಗೆ ಹೆಚ್ಚು ಸಂಗತಿಗಳೇನೂ ನಡೆಯಲಿಲ್ಲ. ಅಷ್ಟು ಮುಖ್ಯವಾದುದಲ್ಲದಿದ್ದರೂ ಬನ್ನೂರಿಗೆ ೪ ಮೈಲು ಹಿಂದೆ