ಪುಟ:ಹಳ್ಳಿಯ ಚಿತ್ರಗಳು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

೧೧

ತಪ್ಪುಮಾಡಿದ ವಿದ್ಯಾರ್ಥಿಗೆ ಶಿಕ್ಷೆಯನ್ನು ಕೊಟ್ಟಿದ್ದರೆ ಅವನ ಮುಖವು ನನ್ನ ಮುಖವು ಆಗ ಇದ್ದುದಕ್ಕಿಂತ ಹೆಚ್ಚು ಪೆಚ್ಚಾಗಿರುತ್ತಿರಲಿಲ್ಲ. ಸಾಲದುದಕ್ಕೆ ನನ್ನ ಸ್ನೇಹಿತನು ಬಂದವರನ್ನೆಲ್ಲಾ ಕುರಿತು, “ಇವರು ಬಹಳ ವಿದ್ವಾಂಸರು, ಸಂಸ್ಕೃತ ಮತ್ತು ಕನ್ನಡದಲ್ಲಿ ದಿಗ್ದಂತಿಗಳು” ಎಂದು ಬಿಟ್ಟ. ನಾನು ರೋದನ ಧ್ವನಿಯಿಂದ "ಯಾವ ಭಾಗ ಓದುತ್ತೀಯೆ" ಎಂದೆ. ನನ್ನ ಸ್ನೇಹಿತನು ನನಗೇನೋ ಬಹಳ ದೊಡ್ಡ ಸಹಾಯಮಾಡುವವನಂತೆ “ನಿನಗೆ ಬೇಕಾದ ಸ್ಥಳದಲ್ಲಿ ಓದುತ್ತೇನೆ. ದೌಪದಿ ಸ್ವಯಂವರ, ವಸ್ತ್ರಾಪಹರಣ, ಕೀಚಕ ವಧೆ, ಅಭಿಮನ್ಯುವಿನ ಕಾಳಗ-". ಪ್ರತಿಯೊಂದು ಹೆಸರಿನೊಂದಿಗೂ ನನ್ನ ಮಿದುಳು ಗರಗರನೆ ತಿರುಗತೊಡಗಿತು. ನನಗೆ ಯಾವ ವಿಷಯವೂ ಚೆನ್ನಾಗಿ ಗೊತ್ತಿರಲಿಲ್ಲ. ಕಥೆಯನ್ನೇನೊ ಕೇಳಿದ್ದೆ. ಆದರೆ ಸದ್ಯಕ್ಕೆ ಅರ್ಥ ಹೇಳುವುದೆಂದರೆ ಸಾಮಾನ್ಯವೇ. ಹೋಮರನ ಒಡಿಸಿಯನ್ನು ಬೇಕಾದರೆ ಚಾಚೂ ತಪ್ಪದಂತೆ ಒಪ್ಪಿಸಿಬಿಡುತ್ತಿದ್ದೆ. ಆದರೆ ಕನ್ನಡ ಭಾರತದಲ್ಲಿ ಒಂದು ಪದ್ಯಕ್ಕೂ ಅರ್ಥವನ್ನು ಹೇಳುವ ಯೋಗ್ಯತೆ ನನ್ನಲ್ಲಿ ಇರಲಿಲ್ಲ. ಕೊನೆಗೆ "ದ್ರೌಪದೀ ಸ್ವಯಂವರ ಓದು" ಎಂದೆ. ನಮ್ಮ ತಂದೆಯವರು ಸಂಸ್ಕೃತ ಭಾರತದಲ್ಲಿ ದೌಪದೀ ಸ್ವಯಂವರವನ್ನು ಓದಿ, ಅರ್ಥವನ್ನು ಹೇಳಿದುದನ್ನು ನನ್ನ ಹನ್ನೊಂದನೆಯ ವಯಸ್ಸಿನಲ್ಲಿ ಕೇಳಿದ್ದೆ. ಅಲ್ಲದೆ ಮಾತಾಡುವ ಪೆಟ್ಟಿಗೆಯಲ್ಲಿ (ಗ್ರಾಮಾಫೋನು) “ನೀವೆದ್ದದ್ದೇನು ಗಡ್ಡದುಪಾದ್ಯರೆ" ಎಂಬ ಹಾಡನ್ನೂ ಕೇಳಿದ್ದೆ. ಅಲ್ಲದೆ, ಅಲ್ಲಿ ಕುಳಿತಿದ್ದವರಾರಿಗೂ ಕನ್ನಡದಲ್ಲಿ ಜ್ಞಾನವಿರಲಿಲ್ಲ. 'ಕುಂತೀ ಪುತ್ರೋವಿನಾಯಕಃ' ಎಂಬಂತೆ ಯದ್ವಾತದ್ವಾ ಹೇಳಿ ಮುಗಿಸಿಬಿಡಬಹುದೆಂದು ಯೋಚಿಸಿಕೊಂಡೆ. ಆದರೆ “ಪುರಾಣ ವ್ಯುತ್ಪತ್ತಿಯ" ಫಲವು ನನಗೆ ಗೊತ್ತಿಲ್ಲದೆ ಇರಲಿಲ್ಲ. ಕಾವ್ಯದ ವರ್ಣನೆಗಳನ್ನು ವಿವರಿಸಲರಿಯದೆ, ಬರಿಯ ಕಥೆಯನ್ನು ಎತ್ತು ಉಚ್ಚೆ ಹುಯ್ದಂತೆ ಹೇಳುವುದರಲ್ಲಿರುವ ಅಪಾಯದ ಒಂದು ದೃಷ್ಟಾಂತವನ್ನು ಕೇಳಿ. ನನ್ನ ಮತ್ತೊಬ್ಬ ಸ್ನೇಹಿತನು, ಒಬ್ಬ ದೊಡ್ಡ ಅಧಿಕಾರಿಗಳ ಮನೆಯಲ್ಲಿ ನವರಾತ್ರೆಯ ಕಾಲದಲ್ಲಿ, ವಾಲ್ಮೀಕಿ ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದ. ಪಾರಾಯಣವನ್ನು ಪ್ರಾರಂಭಿಸಿದ ಮೂರನೆಯ ದಿವಸ, ಆ ಅಧಿಕಾರಿಗಳ ಹೆಂಡತಿಯು ಇವನೇನೋ ವಿದ್ಯಾ