ಪುಟ:ಹಳ್ಳಿಯ ಚಿತ್ರಗಳು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ಹಳ್ಳಿಯ ಚಿತ್ರಗಳು

ತೋರುತ್ತೆ. ಹುಡುಗನಾಗಿದ್ದಾಗ ಈಜು ಕಲೀಲಿಲ್ಲ. ಅದಕ್ಕೆ ಬೆಲೆ ಕೊಡ್ತಿದ್ದೇನೆ. ಆದ್ರೆ ೫ ಗಂಡುಮಕ್ಕಳಿದ್ದಾರೆ, ಇನ್ನೂ ಎಲ್ಲಾ ಚಿಕ್ಕೋರು. ದೇವರು ಕಾಪಾಡ್ಬೇಕು” ಎಂದು ಕಣ್ಣೀರುಬಿಟ್ಟನು. ಬೋರನು “ಹಾಗೆ ಬೇಡ, ಬಾ, ನನ್ನ ಹೆಗಲಿನ ಮೇಲೆ ಭಾರವನ್ನೆಲ್ಲ ಬಿಟ್ಟು ಮಲಗಿಕೊ, ಇಬ್ಬರೂ ಒಟ್ಟಿಗೆ ಈಜಿ ಯಾವ್ದಾದ್ರೂ ಒಂದು ದಡ ಸೇರೋಣ. ಇಲ್ಲಿ ಇಬ್ಬರೂ ಸಾಯೋಣ, ಬದುಕಿರೋವಾಗ ಹೇಗೆ ಗೆಳೆಯರೊ, ಹಾಗೆ ಸಾಯೋವಾಗ ಗೆಳೆಯರಾಗಿ ಸಾಯೋಣ" ಎಂದನು. ನಿಂಗನು ಸ್ವಲ್ಪ ಯೋಚಿಸಿ "ಹಾಗಾದ್ರೆ ಒಂದ್ಕೆಲಸ ಮಾಡಿದ್ರೆ ಇಬ್ಬರೂ ಬದುಕ್ಬಹುದು. ಈ ಹರಿಗೋಲಿಗೆ ಅರ್ಧದವರೆಗೆ ನೀರು ತುಂಬಿಬಿಟ್ಟಿರೋದರಿಂದ ನಮ್ಮಿಬ್ಬರ ಭಾರಾನೂ ಇದು ತಡೀಲಾರದು. ನೀನು ಈಜೊಂಡು ಆಚೆ ದಡ ಸೇರಿಬಿಡು, ನಮ್ಮೂರು ಕಡುವಿಗೆ ಹೋಗೋವರಿಗೆ ಭಯವಿಲ್ಲ. ಅಲ್ಲಿ ಯಾರಾದ್ರೂ ಬೆಸ್ತರು ಹಿಡಿದೇ ಹಿಡೀತಾರೆ. ಆಯುಸ್ಸಿದ್ರೆ ಬದಿಕ್ಕೋತೇನೆ. ಇಲ್ದಿದ್ರೆ ಹೋಗಲಿ. ಹುಟ್ಟಿದ್ಮೇಲೆ ಸಾಯ್ಬೇಕು” ಎಂದನು. ಬೋರನು ಹಿಂದೆ ಮುಂದೆ ನೋಡಿದನು. ನೀರು ಪ್ರತಿ ನಿಮಿಷದಲ್ಲಿಯೂ ವೇಗವಾಗಿ ಹರಿಗೋಲಿನೊಳಕ್ಕೆ ನುಗ್ಗುತ್ತಿದ್ದಿತು. ಇನ್ನು ಸ್ವಲ್ಪದರಲ್ಲಿ ಹರಿಗೋಲು ಇಬ್ಬರ ಭಾರವನ್ನು ತಡೆಯಲಾರದೆ ಮುಳುಗಬಹುದೆಂದು ಅವನಿಗೆ ತೋರಿತು. ಹದಿನೈದು ಮಾರು ದೂರದೊಳಗೆ ಸಂಗಮ ಸ್ಥಳವು ಕಾಣುತ್ತಿತ್ತು. ಸಂಗಮದ ಬಳಿ ನದಿಯ ಪಾತ್ರವು ಉಳಿದ ಕಡೆಗಿಂತ ಮೂರರಷ್ಟು ಹೆಚ್ಚು ವಿಸ್ತಾರವಾಗಿದ್ದುದರಿಂದ, ಅಲ್ಲಿ ಈಜಬಹುದೆಂಬ ನಂಬಿಕೆ ಅವನಿಗೆ ಇರಲಿಲ್ಲ. ಮುಂದೆ ಸಂಗಮದಾಚೆ ಹೇಮಾವತಿಯಲ್ಲಿ ನೀರು ಹೆಚ್ಚಾಗಿದ್ದುದರಿಂದ ಅಲ್ಲಿ ಈಜುವುದೂ ಕೂಡ ಅಸಾಧ್ಯವೇ ಆಗಿದ್ದಿತು. ಹರಿಗೋಲಿನಲ್ಲಿಯೇ ಇದ್ದರೆ ಇಬ್ಬರೂ ಮುಳುಗುವ ಸಂಭವ. ಆದುದರಿಂದ ಕೊನೆಗೆ “ಆಗಲಿ ನಾನು ಈಜ್ತೇನೆ” ಎಂದನು. ಪಾಪ, ತನ್ನ ಭಾರ ಹರಿಗೋಲಿಗೆ ಕಡಮೆಯಾದರೆ, ಅದು ನಮ್ಮೂರಿನವರಿಗೆ ಮುಟ್ಟುವುದೇನೊ, ಅಲ್ಲಿ ಬೆಸ್ತರು ನಿಂಗನನ್ನು ಬದುಕಿಸುತ್ತಾರೇನೋ, ಎಂದು ಅವನಿಗೆ ಚಪಲ. ಹರಿಗೋಲಿನಲ್ಲಿ ಇಬ್ಬರೂ ಆಲಿಂಗಿಸಿಕೊಂಡರು. ಅವರಿಬ್ಬರ ಕಣ್ಣೀರೂ ನದಿಯ ನೀರಿನೊಂದಿಗೆ ಬೆರೆಯಿತು. ನಿಂಗನಿಗೆ