ವಿಷಯಕ್ಕೆ ಹೋಗು

ಪುಟ:27-Ghuntigalalli.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭ ಘಂಟೆಗಳಲ್ಲಿ
೪೭

ತನ್ನ ಹೆಂಡತಿಯನ್ನು ಕರೆತರಲಾಗದ್ದಕ್ಕೆ ಏನಾದರೊಂದು ನೆವ ಹೇಳಿ, 'ಈಗ ಕರೆತರುತ್ತೇನೆ. ಆಗ ಕರೆತರುತ್ತೇನೆ' ಎಂದು ಸಮಾಧಾನ ಇದರಿಂದ ಉಮಾದೇವಿಯು ತೃಪ್ತಳಾಗದಿದ್ದರೂ ನೀಡುತ್ತಿದ್ದ. ಗಿರೀಶನಿಗೂ ಅವನ ಮಾವನ ಮನೆಯವರಿಗೂ ಏನೋ ಮನಸ್ತಾಪ ಬಂದಿರಬೇಕೆಂದೂ, ಅದರಿಂದಲೇ ಅವನು ತನ್ನ ಹೆಂಡತಿಯನ್ನಿದು ವರೆಗೂ ಕರೆತರಲಿಲ್ಲವೆಂದೂ ಭಾವಿಸಿಕೊಂಡಿದ್ದಳು.

ಇದು ಗಿರೀಶನು ಶಶಿಯೊಡನೆ ನಾಲ್ಕನೆಯ ಮಹಡಿಯನ್ನು ಸೇರುವ ವೇಳೆಗೆ ಅವನ ಮೂರು ಮಂದಿ ಮಿತ್ರರೂ ಪುರುಷೋತ್ತಮನ ಮನೆಯ ಬಾಗಿಲಲ್ಲಿ ಕುತೂಹಲದಿಂದ ಕಾದು ನಿಂತಿದ್ದರು. ಮೆಟ್ಟಲು ಗಳ ಮೇಲೆ ಇವರಿಬ್ಬರ ತಲೆಗಳೂ ಕಂಡೊಡನೆಯೇ “ ಆಯೆ ! ಆಯೆ!” ಎಂದು ಸಂತೋಷದಿಂದ ಕೂಗಿ ಗುಲ್ಲೆಬ್ಬಿಸಿಬಿಟ್ಟರು. ಪುರುಷೋತ್ತ ಮನ ಮನೆಯೊಳಗಿನಿಂದ ಉಮಾದೇವಿಯೂ, ಗಿರೀಶನ ಉಳಿದಿಬ್ಬರು ಮಿತ್ರರ ಪತ್ನಿಯರೂ ಸಡಗರದಿಂದ ಹೊರಕ್ಕೋಡಿ ಬಂದರು. ಉಮಾದೇವಿಯು ಕೈಯಲ್ಲಿ ಆರತಿ ತಟ್ಟೆಯನ್ನು ಹಿಡಿದಿದ್ದಳು. ಎಲ್ಲರ ಮುಖದಲ್ಲೂ ಹರ್ಷದ ಚಿನ್ನೆಯು ಮೂಡಿತ್ತು.

ಶಶಿಯು ಇದನ್ನು ಕಂಡು “ಇವನ್ಯಾಕೆ ಹೀಗೆ ನಿಂತಿದ್ದಾರೆ ?” ಎಂದು ಗಿರೀಶನನ್ನು ಕೇಳಿದಳು. ಗಿರೀಶನು, “ನನಗೂ ಗೊತ್ತಿಲ್ಲ. ಸುಮ್ಮನೆ ಬಂದು ಬಿಡು. ನಾನ್ಹೇಳಿದ್ದು ಜ್ಞಾಪಕವಿರಲಿ, ಅವರೇನೇನು ಹೇಳಿದರೆ ಅದನ್ನ ಪ್ರತಿ ಮಾತಾಡದೆ ಮಾಡಿಬಿಡು ; ನಾನಿದ್ದೇನೆ” ಎಂದು ಅವಳ ತೋಳನ್ನು ಹಿಡಿದುಕೊಂಡು ಮುಂದೆ ಹೋಗಿ ತನ್ನ ಮಿತ್ರರನ್ನು ಕುರಿತು “ಹಲೊ ಬಾ ! ಏನು ಇವತ್ತು ಎಲ್ಲರೂ ಆಫೀಸುಗಳಿಗೆ ಚಕ್ಕರ್ ಹಾಕಿದ್ದಾಗಿದೆ” ಎಂದು ನಸುನಗುತ್ತ ನುಡಿದು ಉಮಾದೇವಿಯ ಕಡೆ ತಿರುಗಿ, “ಏ ಸಬ್ ಕ್ಯಾ ಹೈ ಭಾಬಿ ?” ಎಂದು ಕೇಳಿದ.