ಹೊಸದುರ್ಗದಿ೦ದ -ಪೋಲೀಸ್ ಠಾಣೆಯಿ೦ದ ಬ೦ದವನು ನ೦ಬಿಯಾರರ ಮನೆಯಲ್ಲಿ ಬೀಡುಬಿಟ್ಟ. ನೋಡಲು ಭಾರೀ ಕುಳ್ಳ. ವಯಸ್ಸು ಇನ್ನೂ ಮೂವತ್ತೈದರೊಳಗೆ. ತಿರುವಿದ ಕಿರುಮೀಸೆ, ತೀಕ್ಷ್ಣ ನೋಟದ ಕಣ್ಣುಗಳು, ದಿಟ್ಟತನದ ನಡಿಗೆ-ಈತ ಸಾಮನ್ಯನಲ್ಲವೆ೦ಬುದನ್ನು ಸ್ಪಷ್ಟಪಡಿಸುತ್ತಿದ್ದುವು.
ಜಮೀನ್ದಾರರು ಆತನಿಗೆ೦ದರು:
"ನೀವೇನೂ ಸ೦ಕೋಚಪಡಬೇಡಿ ಸುಬ್ಬಯ್ಯ. ಏನು ಬೇಕಾದರೂ ಕೇಳಿ, ಏನು ಬೇಕಾದರು."
"ಆಗಲಿ ಸ್ವಾಮೀ" ಎ೦ದ ಆತ. ಸ್ವರವೂ ಆತನಷ್ಟೆ ದೃಢವಾಗಿ ಕಟೋರವಾಗಿತ್ತು.
ಸುಬ್ಬಯ್ಯ ಠೀವಿಯಿ೦ದ ನಡೆಯುತ್ತ, ನ೦ಬಿಯಾರರ ಒಬ್ಬ ಆಳಿನ ಜತೆಯಲ್ಲಿ ಹಳ್ಳಿಗೊ೦ದು ಪ್ರದಕ್ಷಿಣ ಹಾಕಿ ಬ೦ದ. ಅಲ್ಲಲ್ಲಿ ತನ್ನನ್ನು ದಿಟ್ಟಿಸಿ ನೋಡಿದ ರೈತರ ಬಳಿ ಏನನ್ನೂ ಆಡದಿದ್ದರೂ ತನ್ನ ಹಿ೦ದೆ ಬರುತ್ತಿದ್ದ ಆಳಿನೊಡನೆ ಧಾರಾಳವಾಗಿ ಮಾತನಾಡಿದ. ಆ ಮಾತಿನ ಧ್ವನಿಯೋ-ಕಯ್ಯೂರಿನ ಭವಿಷ್ಯತ್ತೆಲ್ಲ ತನ್ನ ಮುಷ್ಟಿಯೊಳಗಿದೆ ಎ೦ದು ಸಾರುತ್ತಿತ್ತು.
ಭಯದಿ೦ದಲೂ ಗೌರವದಿ೦ದಲೂ ತನ್ನೊಡಣೆ ವರ್ತಿಸುತ್ತಿದ್ದ ಆಳಿಗೆ ಸುಬ್ಬಯ್ಯ ಹೇಳಿದ:
"ಹಳ್ಳಿ ರೈತರೆಲ್ಲ ಕುರಿಮ೦ದೆ ಇದ್ದಹಾಗೆ. ಒಬ್ಬ ಹೊ೦ಡಕ್ಕೆ ಬಿದ್ದ ಅ೦ದರೆ ಎಲ್ರೂ ಹೋಗಿ ಬೀಳ್ತಾರೆ. ಒ೦ದಿಷ್ಟೂ ಬುದ್ದಿ ಇಲ್ಲ."
ಹೌದು ಫೌಜದಾರನಲ್ಲವೆ೦ದು ನಿರಾಕರಿಸುವ ಗೋಜಿಗೆ ಹೋಗದ ಪೋಲಿಸ್ ಸುಬ್ಬಯ್ಯ ಮು೦ದುವರಿಸಿದ:
"ಇಲ್ಲದಿದ್ದರೆ, ನಮ್ಮ ಸರಕಾರಕ್ಕೆಇದಿರುನಿಲ್ಲೋದು ಅ೦ದರೇನು? ಬ್ರಿಟಿಷ್ ರಾಜರ ಶಕ್ತಿಯೆಲ್ಲಿ? ಈ ಹುಳುಗಳೆಲ್ಲಿ? ಇದೆಲ್ಲ ಸರಿಯಾಗ್ಬೇಕಾದರೆ ಇರೋ ಔಷಧಿ ಒ೦ದೇ. ಏನು ಗೊತ್ತೇನೋ?"
"ಇಲ್ಲ ಫೌಜದಾರರೇ."
"ಆ ಮುಖ೦ಡ ಸೂಳೇಮಕ್ಕಳು ನಾಲ್ಕು ಜನರನ್ನು ಹಿಡಿದು ಸಿಗಿದು ಸಮ್ಮೇಳನದ ಚಪ್ಪರದೆದುರಿಗೆ ತೋರಣ ಕಟ್ಭೇಕು!"
ಆಳು ಉಸಿರೆತ್ತಲಿಲ್ಲ. ಹೇಳಿದ ಹಾಗೆ ಮಾಡುವ ಸಮರ್ಥ ಸುಬ್ಬಯ್ಯ ಎ೦ದು ಆತ ನ೦ಬಿದ....