ಮತ್ತೆ ಗುಡಿಸಲ ತಡಿಕೆಗಳೆಡೆಯಿಂದ, ಬಾಗಿಲ ಮರೆಯಿಂದ ಭೀತಿಯ ಕಾತರದ ದೃಷ್ಟಿಗಳು ಆ ದೃಶ್ಯವನ್ನು ನೋಡಿದವು. ಅಪ್ಪು-ಅಬೂಬಕರರನ್ನು ಗುರುತಿಸಿದವರು
"ಅಯ್ಯೋ!" ಎಂದರು. ಇನ್ನೊಂದು ಕ್ಷಣದಲ್ಲಿ ಗುಂಡುಹಾರುವುದೆಂದು ಹಲವರು ಸ್ತಬ್ಧರಾದರು.
ಎದುರು ಬದುರಾಗಿ ಬರುತ್ತಿದ್ದರು-ಹತ್ತು ಜನ ಬಂದೂಕನ್ನು ಗುರಿಹಿಡಿದ ಸೈನಿಕರು ಮತ್ತು ಬರಿಗೈಯ ಇಬ್ಬರು ಜವ್ವನಿಗರು.
ನಡೆಯುವುದು ಇನ್ನು ಸಾಕೆಂದು ಅಪ್ಪು ಮತ್ತು ಅಬೂಬಕರ್ ನಿಂತರು- ಚಿತ್ರ ಹಿಂಸೆಗೆ ಸಿದ್ದರಾಗಿ ನಿಂತರು.ಸೈನಿಕರು ಅವರನ್ನು ಸುತ್ತುವರಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಅದರೆ ರೈತರಿಗೆ ಹೊಡೆದುಹೊಡೆದು ಬೇಸತ್ತಿದ್ದ ಸೈನಿಕರು ಇವರಿಬ್ಬರ ಮೇಲೆ ಕೈಮಾಡಲಿಲ್ಲ. ಈ ನಾಯಕರ ಕೈಸೆರೆಯಾಯಿತೆಂಬುದೇ ಅವರಿಗೆ ಅತ್ಯಾನಂದದ ವಿಷಯವಾಗಿತ್ತು.
ಕೈದಿಗಳಾದ ಅಪ್ಪು ಮತ್ತು ಅಬೂಬಕರ್ ಅಧಿಕಾರಿಯ ಕಡೆಗೆ ಸೈನಿಕರುಒಯ್ದರು.
ದಳದ ತುತೂರಿ ಮೊಳಗಿ, ವಿಜಯದ ಸುದ್ದಿಯನ್ನು ಸಾರಿತು.
ಶಿಬಿರದ ಮೇಲಿತ್ತು ದೊಡ್ಡ ಯೂನಿಯನ್ ಜಾಕ್ ಧ್ವಜ. ಗಾಳಿ ಇಲ್ಲದೆ ಜೋತು ಬಿದ್ದಿದ್ದರೂ ಶಸ್ತ್ರಾಸ್ತ್ರಗಳ ಸಂರಕ್ಷಣೆಯಲ್ಲಿ ಅದು ಭದ್ರವಾಗಿತ್ತು.
೪
ಹೊಸದುರ್ಗದಿಂದ ಪೋಲೀಸರು ದಳವೊಂದು ಕಯ್ಯೂರಿಗೆ ಹೋಗಿ ಅಪ್ಪು ಮತ್ತು ಅಬೂಬಕರರನ್ನು ಕರೆದು ತಂದಿತು.ಆ ಪೋಲೀಸರು ದೃಷ್ಟಿಯಲ್ಲಿ ಅವರಿಬ್ಬರೂ ಭೂಗತರಾಗಿದ್ದ ಕ್ರಾಂತಿಕಾರರು, ಅತಿಭಯಂಕರರು.ಸುಬ್ಬಯ್ಯನನ್ನು 'ಕೊಂದು ಕರುಳ ಬಗೆದ'ಆ ಕೈಗಳು ಈಗಲೂ ಕೆಂಪಗಿದ್ದಂತೆ ಆವರಿಗೆ ತೋರಿದುವು.ಸರಕಾರದ ಕಡುವೈರಿಗಳು ಆ ಇಬ್ಬರು; ಸಾಮ್ರಾಜ್ಯಕಂಟಕರು. ಅವರು ತಪ್ಪಿಸಿಕೊಂಡರೆಂದರೆ ಲೋಕಕ್ಕೆ ಆಪತ್ತು.ಆ ಆಪತ್ತಿನ ಮೊದಲ ಪರಿಣಾಮವಾಗಿ ಪೋಲೀಸರೆಲ್ಲರ ಕೆಲಸ ಹೋಗುವುದು. ಅದಕ್ಕಾಗಿ ಅವರು ಆ ಇಬ್ಬರು ಕೈದಿಗಳ ಒಂದೊಂದು ಕೈಗಳನ್ನು ಜೋಡಿಸಿ ಬೇಡಿಹಾಕಿದರು. ಉಳಿದ ಒಂದೊಂದು ಕೈಗಳ ಬೇರೆ ಬೇರೆ ಬೇಡಿ ತೊಡಿಸಿ ಸಂಕೋಲೆಗಳನ್ನು ತಾವು ಹಿಡಿದರು.
ಆ ಊರಲ್ಲಿದ್ದುದು ದೊಡ್ಡ ಸೆರೆಮನೆಯೇನಲ್ಲ. ವಿಶಾಲವಾದ ಲಾಕಪ್ಪು- ಕೂಡುದೊಡ್ಡಿ.ಅಲ್ಲಿ ಬಂಧಿತರಾಗಿದ್ದ ಐವತ್ತೆಂಟು ಜನರೂ ನೆಟ್ಟದೃಷ್ಟಿಯಿಂದ,