ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಿರಸ್ಮರಣೆ
೨೫೭

ಇಲ್ಲಿಂದ. ಇವರು ಪಟ್ಟಣವಾಸಿಗಳು... ಬಡವರ ಸಂಕಟವೇನೆಂದು ಬಲ್ಲವರು.. ಅವರ ನಡುವೆ ಗೂಢಚಾರರೂ ಇರಬಹುದು. ಹೂವಿನ ದಂಟಿಗೆ ಅಂಟಿಕೊಂಡೇ ಮುಳ್ಳು....

ಮೊದಲು ನಾಲ್ವರು-ಅಪ್ಪು, ಚಿರಕುಂಡ, ಕುಂಞ್ಂಬು ಮತ್ತು ಅಬೂಬಕರ್. ಬಳಿಕ-ಕುಟ್ಟಿಕೃಷ್ಣ. ಅವನ ಹಿಂದೆ ಶಿಕ್ಷೆಗೆ ಗುರಿಯಾದ ಮಾಸ್ತರು ಮತ್ತಿತರರು. ಅವರ ಹಿಂದೆಯೇ ಮೋಟಾರನ್ನೇರಿ ಬರಲೆತ್ನಿಸಿದ ಬಂಧಮುಕ್ತರು.

"ನೀವು ಬರಬೇಡಿ! ಬುದ್ದಿ ಇಲ್ಲ ನಿಮಗೆ? ಹಾಕಿ ಬಾಗಿಲು!"

ಉದ್ವೇಗ ತುಂಬಿದ್ದ ಧ್ವನಿಯಲ್ಲಿ ಯಾರೋ ಕೂಗಿದರು:

"ಇಂಕ್ವಿಲಾಬ್-"

ಅದು ಅನಿರೀಕ್ಷಿತವಾಗಿತ್ತು. ಅಂಜುತ್ತ ಉತ್ತರವಿತ್ತುದೊಂದೇ ಸ್ವರ:

"ಜಿಂದಾಬಾದ್!"

ಮತ್ತೆ ಮೊದಲಿನ ಧ್ವನಿಯೇ ಹೆಚ್ಚು ಗಟ್ಟಿಯಾಗಿ ಕೂಗಿತ್ತು:

"ಇಂಕ್ವಿಲಾಬ್-"

ಈಗ ಧೈರ್ಯದಿಂದ... ಉತ್ತರಕೊಟ್ಟ ಸ್ವರಗಳು ನೂರು.

"ಜಿಂದಾಬಾದ್!"

ಹಳ್ಳಿಯವರೂ ಪಟ್ಟಣದವರೂ ವಾಹನದೊಳಗಿದ್ದವರೂ ಹೊರಗಿದ್ದವರೂ ನೂರಾರು ಜನ ಈಗ ಕೂಗಿದರು:

"ದಬ್ಬಾಳಿಕೆಗೆ-"

"ಧಿಕ್ಕಾರ!"

"ಸಾಮ್ರಾಜ್ಯಶಾಹಿ-"

"ನಾಶವಾಗಲಿ!"

"ಕ್ರಾಂತಿಗೆ_"

"ಜಯವಾಗಲಿ!"

ನೆರೆದವರನ್ನು ಚೆದರಿಸಲೆಂದು ಪೋಲೀಸರು ದಂಡವೆತ್ತುತ್ತಿದ್ದಂತೆ ವಾಹನ ಹೊರಟಿತು.

ಕೊನೆಯದಾಗಿ ಹಲವು ಕಂಠಗಳಿಂದ ವಂದನೆ:

"ಕಯ್ಯೂರು ಬಾಂಧವರಿಗೆ ರಕ್ತ ನಮಸ್ಕಾರ!"

ಅದಕ್ಕೆ, ಧಾವಿಸುತ್ತಿದ್ದ ವಾಹನದೊಳಗಿಂದ ಹಲವು ಧ್ವನಿಗಳ ಮರುವಂದನೆ:

"ಸಂಗಾತಿಗಳೇ ರಕ್ತನಮಸ್ಕಾರ!"