ಪುಟ:Duurada Nakshhatra.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೇಣುಗೋಪಾಲನ ತಂಗಿ ಸುನಂದಾ....

ಈ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆ ಕಟ್ಟಿ ಆಕೆ ಉತ್ತೀರ್ಣಳಾಗಿದ್ದಳು. ಜಯದೇವನ ತಂಗಿಯ ವಯಸ್ಸೇ ಅವಳಿಗೂ. ಸುರಸುಂದರಿಯಲ್ಲದೆ ಹೋದರೂ ನೋಡಿದವರು ಮತ್ತೆ ನೋಡುವಂತೆ ಮಾಡುವ ಸಾಮರ್ಥ್ಯ ಅವಳಿಗಿತ್ತು. ಆ ಪ್ರೀತಿಯ ಸ್ವರೂಪವೇನೆಂಬುದು ಖಚಿತವಾಗಿ ನಿರ್ಧಾರವಾಗದೇ ಇದ್ದರೂ ಜಯದೇವ ಆಕೆಯನ್ನು ಪ್ರೀತಿಸುತಿದ್ದ.

ಈಗ ಅವರನ್ನು ಬಿಟ್ಟು ಹೋಗುವ ಪ್ರಮೇಯ....

....ಹಿಂದಿನ ರಾತ್ರೆ ರೈಲು ನಿಲ್ದಾಣಕ್ಕೆಂದು ಜಯದೇವ ಜಟಕಾಗಾಡಿ ಹತ್ತಿದ್ದು ವೇಣುಗೋಪಾಲನ ಮನೆಯಿಂದಲೆ. ವೇಣುವೂ ಆತನ ಜತೆಯಲ್ಲಿ ಬಂದಿದ್ದ. ವೇಣುವಿನ ತಂದೆ-ತಾಯಿ ಮತ್ತು ಸುನಂದಾ ಬೀದಿಯವರೆಗೂ ಬಂದು ಜಯದೇವನನ್ನು ಬೀಳ್ಕೊಟ್ಟರು. ಸುನಂದಳ ತುಂಬು ಮುಖ ಮುಗುಳುನಗುತಿತ್ತು. ಕಣ್ಣುಗಳು ಮಾತ್ರ ಆಶ್ರುಭಾರದಿಂದ ಕಿತ್ತು ಬರುತಿದ್ದವು. ಆ ಮನೆಯವರು ತೋರುತಿದ್ದ ಪ್ರೀತಿಯಿಂದಾಗಿ ಮಾತು ಬಾರದೆ ಮೂಕನಾಗಿದ್ದ ಜಯದೇವ, ಸುನಂದಳ ಹೃದಯದೊಳಗಿನ ಆಳಲನ್ನು ಗುರುತಿಸದೆ ಇರಲಿಲ್ಲ.

..............

ಮೋಟಾರು ಬಸ್ಸು ಓಡುತಿತ್ತು. ನಡುವೆ ನಿಂತು ಯಾರನ್ನೋ ಇಳಿಸಿ ಯಾರನ್ನೋ ಹತ್ತಿಸಿಕೊಂಡು ಮುಂದುವರಿಯುತಿತ್ತು. ಆ ಧೂಳೋ ಅಸಾಧ್ಯ. ಜಯದೇವನ ಮೈಯ ಒಂದು ಭಾಗಕ್ಕೆಲ್ಲ ಧೂಳಿನ ಸ್ನಾನವಾಗದೆ ಇರಲಿಲ್ಲ. ಎಂದೋ ಒಮ್ಮೆ ಸುನಂದಾ ಈ ಬಣ್ಣ ಚೆನ್ನಾಗಿದೆ ಎಂದಿದ್ದಳೆಂದು, ಬಿಸ್ಕತ್ತು ಬಣ್ಣದ ಜುಬ್ಬವನ್ನೇ ಜಯದೇವ ಹೊರಡುವಾಗ ಹಾಕಿಕೊಂಡಿದ್ದ. 'ಬಿಳೇ ಜುಬ್ಬ ಹಾಕಿಕೊಳ್ಳದಿದ್ದುದೇ ಮೇಲಾಯಿತೆಂದೂ ಆತ ಈಗ ಸಮಾಧಾನ ಪಟ್ಟುಕೊಂಡ.

ಮತ್ತೆ ಗಾಡಿ ಚಲಿಸಿದಂತೆಯೇ ಯೋಚನೆಗಳು. ಒಂದಕ್ಕೊಂದು ಸಂಬಂಧವಿರಲಿಲ್ಲ. ಸಾವಿರ ತುಂಡುಗಳಿಗೆ ತೇಪೆಹಾಕಿ ಮಾಡಿದಂತಿತ್ತು ಯೋಚನೆಗಳ ಆ ಸುರುಳಿ.

ಓಡುತಿದ್ದ ಗಾಡಿಯನ್ನು ಬೆನ್ನಟ್ಟುತಿದ್ದ ಸೂರ್ಯನ ಕೈಯೇ ಮೇಲಾಯಿತೇನೋ ಎಂಬಂತೆ, ಬಿಸಿಲಿನ ಝಳ ಒಳಗೆ ಕುಳಿತಿದ್ದವರಿಗೆ