೭
ಮೂರನೆಯು ತರಗತಿ ಜಯದೇವನ ತಲೆನೋವಿಗೆ ಕಾರಣವಾಯಿತು. ಕರಿಹಲಗೆಯ ಮೇಲೆ ಯಾರೋ ಆತನ ವ್ಯಂಗ್ಯಚಿತ್ರ ಬರೆದಿದ್ದರು. ಜಯದೇವ ಮುಗುಳ್ನಗುತ್ತಲೆ ಅದನ್ನು ಒರೆಸಿದ.
“ಚಿತ್ರ ಚೆನಾಗಿದೆ. ಇದನ್ನು ಬರೆದ ಕಲಾವಿದ ಯಾರು ? ಎಂದು ಹುಡುಗರನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತ ಪ್ರಶ್ನಿಸಿದ. ಉತ್ತರ ಬರಲಿಲ್ಲ.
“ಯಾರ್ರೀ ಮಾನಿಟರ್ ಈ ತರಗತಿಗೆ?
ಆ ಪ್ರಶ್ನೆಗೆ ಉತ್ತರವಾಗಿ ಬಲು ಕಿರಿಯವನಾದ ಶ್ರೀನಿವಾಸಮೂರ್ತಿ ಎದ್ದು ನಿಂತ. ಭಯಲಜ್ಞೆಗಳು ಅವನ ಮುಖವನ್ನು ಮುಸುಕಿದ್ದುವು.
“ಚಿತ್ರಕಾರರ ಪರಿಚಯ ಮಾಡ್ಕೊಟ್ಟರಾಗ್ದೆ?
ಜಯದೇವ ಇಷ್ಟಪಡದೇ ಇದ್ದರೂ ವ್ಯಂಗ್ಯಮಿಶ್ರಿತವಾಗಿ ಹೊರಬಿತ್ತು ಧ್ವನಿ.
ಹುಡುಗ ಗಳಗಳನೆ ಅತ್ತುಬಿಟ್ಟ. ಅವನದೊಂದೇ ಹಾಡು:
“ನನಗೆ ಮಾನಿಟರ್ ಕೆಲಸ ಬೇಡಿ ಸಾರ್, ಬೇಡಿ ಸಾರ್.”
ಜಯದೇವನಿಗೆ ಅರ್ಥವಾಗಲಿಲ್ಲ, ಯಾಕೆ-ಏನು-ಎಂದು ಆತ ಮತ್ತೆ ಮತ್ತೆ ಕೇಳಿದ. ಬಂದ ಉತ್ತರ ಒಂದೇ:
“ನನಗೆ ಈ ಕೆಲಸ ಬೇದಿ ಸಾರ್.
ವ್ಯಂಗ್ಯ ಚಿತ್ರದ ವಿಷಯ ಜಯದೇವನಿಗೆ ಮರೆತೇ ಹೋಯಿತು. ಈ ಹಿರೇಮಣಿಯ ಅಳು ಪ್ರಕರಣ, ಅವನ ಮನಸ್ಸಿನ ನೆಮ್ಮದಿಯನ್ನು ಕೆಡಿಸಿತು. ಪಾಠ ತಡವಾಗುತ್ತಿದೆಯೆಂದು ಆತ ಚಡಪಡಿಸಿದ.
“ಯಾಕೋ? ಯಾಕಪ್ಪ?”
ಉತ್ತರ–ಯಾವ ನಿರ್ಬಂಧವೂ ಇಲ್ಲದೆ ಹರಿಯುತಿದ್ದ ಕಣ್ಣೀರು.
“ಯಾರು ನಿನ್ನ ಚುನಾಯಿಸಿದ್ದು?”
“ಹೆಡ್ಮೇಷ್ಟ್ರು ಇದ್ದಾಗ್ಲೇ ಚುನಾಯ್ಸಿದ್ದು ಸಾರ್.”
“ಸರಿ ಹಾಗಾದರೆ, ಹೆಡ್ಮಷ್ಟ್ರಿಗೆ ಹೇಳ್ತೀನಿ.”