ನಾಲ್ವರು ಹುಡುಗಿಯರು ಅಲ್ಲಿ ನಿಂತಿದ್ದರು, ನಾಲ್ಕನೆಯ ತರಗತಿಯವರು. ಅವರಲ್ಲಿ ಹೆಚ್ಚು ಬುದ್ಧಿವಂತೆಯಾದ ವಿದ್ಯಾರ್ಥಿನಿ ಪ್ರಭಾಮಣಿ ಕೇಳಿದಳು :
“ಪುರಸೊತ್ತಿದೆಯಾ ಸಾರ್?”
“ಯಾಕಮ್ಮ? ಏನಾಗ್ವೇಕು?
“ಒಂದೆರಡು ವಿಷಯ ಕೇಳ್ಬೇಕಾಗಿತ್ತು.”
"ಬನ್ನಿ ಒಳಕ್ಕೆ.”
ಆ ನಾಲ್ವರೂ ಬಂದು ಜಯದೇವನ ಸಮೀಪದಲ್ಲೆ ನಿಂತುಕೊಂಡರು. ಪ್ರಭಾಮಣಿ ಚಿಕ್ಕ ಹುಡುಗಿ—ಹದಿಮೂರು ಇರಬಹುದು. ಅವಳು ಸೀರೆಯುಟ್ಟಿದ್ದರೂ ಆ ಉಡುಗೆ ಬೊಂಬೆಗೆ ಸೀರೆಯುಡಿಸಿದ ಹಾಗಿತ್ತು, ಉಳಿದಿಬ್ಬರು ಲಂಗ ತೊಟ್ಟಿದ್ದರು. ನಾಲ್ಕನೆಯವಳು ಮಾತ್ರ ದೊಡ್ಡವಳು. ಹದಿನಾಲ್ಕು ದಾಟಿತ್ತೇನೋ, ಉಟ್ಟಿದ್ದ ಸೀರೆ ಮೈ ಸೊಬಗನ್ನು ಹೆಚ್ಚಿಸಿತ್ತು. ಬಣ್ಣ ನಸುಗೆಂಪು, ತು೦ಬಿತುಳುಕುತಿದ್ದ ಆರೋಗ್ಯ, ನಗೆಯು ರೂಪದಲ್ಲಿ ಚೆಲ್ಲಾಟವಾಡಬಯಸುತ್ತಿತ್ತು. ಕಣ್ಣುಗಳು ಚ೦ಚಲವಾಗಿದ್ದುವು.ಜಯದೇವನಿಗೆ ಒಂದು ವಿಧವಾಯಿತು. ಹುಡುಗಿಯರ ಸಾಮಿಪ್ಯ ಅವನಿಗೆ ಹೊಸದಾಗಿರಲಿಲ್ಲ. ಬೆಂಗಳೂರಲ್ಲಿ ಸುನಂದಾ ಆತನೊಡನೆ ಒಡನಾಟವಾಡಿ ಸಂಕೋಚವನ್ನೆಲ್ಲ ತೊಡೆದು ಹಾಕಿದ್ದಳು. ಆದರೂ ಮೂವರನ್ನೂ ಮುಂದೆ ಬಿಟ್ಟು ತಾನೊಬ್ಬಳೇ ಹಿಂದೆ ನಿಂತು ತನ್ನನ್ನು ಸೂಕ್ಷ್ಮವಾಗಿ ನೋಡುತ್ತಿದ್ದ ಆ ಹುಡುಗಿ.. ಆ ನೋಟ.. ಹದಿನಾಲ್ಕಕ್ಕಿಂತಲೂ ಜಾಸ್ತಿಯಾಗಿತ್ತೇನೋ ವಯಸ್ಸು....
"ಏನು ವಿಷಯ ಕೇಳಿ."
"ವೀರಮಾತೆ ವಿಮಲಾ ಪಾಠಕ್ಕೆ ಸಂಬಂಧಿಸಿದ್ದು ಸಾರ್."
"ಯಾಕೆ, ಏನು ಕಷ್ಟವಿದೆ ಆ ಪಾಠದಲ್ಲಿ?"
ಹುಡುಗಿಯರು ಸಂದೇಹವೆಂದು ಅದೇನನ್ನೋ ಕೇಳಿದರು. ಅದು ಹೀಗೆ ಯಾಕೆ ? ಹಾಗೆ ಯಾಕೆ ? 'ಈ ಪದದ ಅರ್ಥವೇನು ಸಾರ್ ? 'ಇದು ನಿಜವಾಗಿಯು ನಡೆದದ್ದೇ ಸಾರ್? 'ಸುಳ್ಳು ಚರಿತ್ರೆ ಬರಿಯೋಕೆ ಆಗಲ್ವೇ ಸಾರ್?'
ತಾನು ಉಪಾಧ್ಯಾಯನೆಂಬುದನ್ನು ಮರೆಯುದೆ ಜಯದೇವ ಎಲ್ಲವನ್ನೂ ವಿವರಿಸಿದ. ವಿವರಿಸುತ್ತ ಗುಂಪಿನಲ್ಲಿದ್ದ ದೊಡ್ಡ ಹುಡುಗಿಯನ್ನು