ಪುಟ:Kadaliya Karpoora.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧

ಬೆಳೆಯುವ ಬೆಳಕು

``ವೈಹಾಳಿ ! ಹಾಗೆಂದರೇನು ಮಹಾದೇವಿ? ಕಲ್ಯಾಣಮ್ಮ ಕೇಳಿದಳು.

``ಊರ ಮುಂದೆ ವಿಸ್ತಾರವಾದ ಬಯಲಿದೆಯಲ್ಲ , ಮಠದಿಂದಲೂ ಆಚೆ ; ಅಲ್ಲಿ ರಾಜನ ಕುದುರೆ ಸವಾರಿಯಂತೆ ! ಹೊಸ ಕುದುರೆಗಳು ಬಂದಿವೆಯಂತೆ. ಅವುಗಳನ್ನೇರಿ ಸವಾರಿ ಮಾಡುವುದು. ಆ ವಿನೋದಕ್ಕೆ ವೈಹಾಳಿ ಎಂದು ಕರೆಯುತ್ತಾರಂತೆ. ಮಹಾದೇವಿ ತನಗೆ ತಿಳಿದುದನ್ನು ಹೇಳಿದಳು.

ಹೀಗೆ ಮಾತನಾಡುತ್ತಾ ನಡೆಯುತ್ತಿರುವಷ್ಟರಲ್ಲಿ ಕಲ್ಯಾಣಮ್ಮ ತನ್ನ ಮನೆಯ ಕಡೆ ತಿರುಗುವ ರಸ್ತೆ ಬಂದಿತು. ಮಹಾದೇವಿಯಿಂದ ಬೀಳ್ಕೊಳ್ಳುವ ಮುನ್ನ ಕಲ್ಯಾಣಮ್ಮ ಹೇಳಿದಳು :

``ಮಹಾದೇವಮ್ಮ, ಬಾವಿಯ ಕಟ್ಟೆಯ ಬಳಿ ನಡೆದುದನ್ನು ಮರೆತು ಬಿಡಮ್ಮ. ಆ ಜನಗಳೇ ಹಾಗೆ. ಬಾಯಿ ಹಿಡಿತವಿಲ್ಲದ ಜನ...

``ಇರಲಿ ಬಿಡಿ, ಕಲ್ಯಾಣಮ್ಮನವರೇ. ಅದಕ್ಕೆಲ್ಲಾ ನಾನು ಅಂಜುವವಳಲ್ಲ. ಜಗತ್ತಿನಲ್ಲಿ ಬರೀ ಅಂತಹವರೇ ಇಲ್ಲವಲ್ಲ. ನಿಮ್ಮಂತಹವರೂ ಇದ್ದಾರೆ. ಅದನ್ನೇನೂ ಯೋಚಿಸಬೇಡಿ. ನಾನದೆಲ್ಲವನ್ನೂ ಸಹಿಸಿಕೊಳ್ಳಬಲ್ಲೆ ಎಂದು ಸಮಾಧಾನಪಡಿಸಿ ಮುಂದೆ ನಡೆದಳು. ಅದೇ ಆಲೋಚನೆ ಮನಸ್ಸಿನಲ್ಲಿ ಸುತ್ತುತ್ತಿತ್ತು.

``ಅವರ ಮನಸ್ಸಿನ ಮಟ್ಟವೇ ಅಷ್ಟು. ಅದಕ್ಕಿಂತ ಹೆಚ್ಚು ಅವರು ಆಲೋಚಿಸಲಾರರು. ಅವರ ಮೇಲೇಕೆ ಕೋಪ ! ಎಂದು ಮನಸ್ಸು ಒಂದು ಕಡೆ ಸಹಾನುಭೂತಿಯನ್ನು ಮಿಡಿಯುತ್ತಿತ್ತು.

`ತಮ್ಮ ಮನಸ್ಸಿನ ಅಷ್ಟೇ ಮಟ್ಟವನ್ನಿಟ್ಟುಕೊಂಡು, ತಮ್ಮ ಪಾಡಿಗೆ ತಾವು ಇರಬಾರದೇ ! ಹೋಗುತ್ತಿರುವವರನ್ನು ಕರೆದು ಅವಮಾನಿಸಬೇಕೆ ! ನಾನು ಮದುವೆಯಾಗದಿದ್ದರೆ ಅವರಿಗೇನು? ಎಷ್ಟು ಸೊಕ್ಕು ಅವರಿಗೆ ?' ಎಂದು ತನ್ನ ಕೋಪವನ್ನು ಸಮರ್ಥಿಸುವುದು ಇನ್ನೊಂದು ಮನಸ್ಸು.

`ಲೋಕಕ್ಕೆ ಬಂದನಂತರ ಇಂತಹವುಗಳನ್ನೆಲ್ಲಾ ಎದುರಿಸಲೇಬೇಕಾಗುತ್ತದೆ. ಸಾಧನೆಯ ಮಾರ್ಗದಲ್ಲಿ ಸದಾ ಜಾಗೃತವಾಗಿರುವುದಕ್ಕೆ ಇಂತಹ ನಿಂದೆಯ ಮಾತುಗಳು ಸಹಾಯಕವಾಗುವುದಿಲ್ಲವೇ ? ಹೊಗಳಿಕೆಗಿಂತಲೂ ಇವುಗಳಿಂದಲೇ ಹೆಚ್ಚು ಪ್ರಯೋಜನವಾದೀತು.'

ಈ ದಿಕ್ಕಿಗೆ ಆಲೋಚನೆ ಹರಿಯುತ್ತಿದ್ದಂತೆಯೇ ಮಹಾದೇವಿಗೆ ಬಸವಣ್ಣನವರ ಒಂದು ವಚನ ನೆನಪಿಗೆ ಬಂದಿತು :

ಹೊಯಿದವರೆನ್ನ ಹೊರೆದವರೆಂಬೆನು,

ಬೈದವರೆನ್ನ ಬಂಧುಗಳೆಂಬೆನು ;