ಪುಟ:Kannadigara Karma Kathe.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೧

೧೦ನೆಯ ಪ್ರಕರಣ

ರಾಮರಾಜನ ಉತ್ಕರ್ಷ

ಅಚ್ಯುತರಾಯನು ರಾಜ್ಯಭಾರಕ್ಕೆ ಕೇವಲ ಅಯೋಗ್ಯನೆಂಬುದನ್ನು ವಾಚಕರು ಅರಿತಿರುವರು. ಸ್ವತಂತ್ರ ರೀತಿಯಿಂದ ಕಾರಭಾರ ಮಾಡಲಿಕ್ಕೆ ಆತನಲ್ಲಿ ಯೋಗ್ಯತೆಯೇ ಇದ್ದಿಲ್ಲ. ಹೋಜೆ ತಿರುಮಲರಾಯನು ಇರುವ ತನಕ ಆತನ ಕೈಯೊಳಗಿನ ಸೂತ್ರದ ಗೊಂಬೆಯಾಗಿದ್ದನು. ಈಗ ರಾಮರಾಜನ ಕೈಯೊಳಗಿನ ಸೂತ್ರದ ಗೊಂಬೆಯಾದನು. ರಾಮರಾಜನ ವಿಷಯವಾಗಿ ಯಾವತ್ತು ಜನರು ಆದರ ಬುದ್ದಿಯುಳ್ಳವರಾಗಿದ್ದರು. ಆತನ ಬುದ್ದಿ ಸಾಮರ್ಥ್ಯದಿಂದಲೇ ವಿಜಯನಗರದ ಸಂರಕ್ಷಣವಾಯಿತೆಂದು ಎಲ್ಲರು ತಿಳಿದಿದ್ದರು ರಾಮರಾಜನು ಒಳ್ಳೆ ಚತುರನೂ, ಮಹಾ ಪರಾಕ್ರಮಿಯೂ, ನಿಜವಾದ ಹಿಂದೂ ಧರ್ಮಾಭಿಮಾನಿಯೂ ಎಂಬ ಕೀರ್ತಿಯೂ ಎಲ್ಲೆಡೆಗೆ ಹಬ್ಬಿತು. ತಿರುಮಲರಾಯನ ಮರಣದ ನಂತರದ ರಾಜ್ಯದಲ್ಲಿ ಸ್ವಾಸ್ಥ್ಯವು ನೆಲೆಗೊಂಡ ಬಳಿಕ ರಾಮರಾಜನು ದರ್ಬಾರು ಕೂಡಿಸಿ ಅಚ್ಯುತರಾಯನಿಂದ ತಾನು ಮಂತ್ರಿ ಪದದ ಉಡುಗೊರೆಗಳನ್ನು ಇಸುಕೊಳ್ಳಬೇಕೆಂದು ಮಾಡಿದನು. ಈ ದರ್ಬಾರದ ನೆವದಿಂದ ವಿಜಯನಗರದ ರಾಜ್ಯದ ಐಶ್ವರ್ಯವನ್ನೂ ಸಾಮಥ್ಯವನ್ನೂ, ಪರರಾಜರ ಕಣ್ಣಿಗೆ ಹಾಕಿ, ವಿಜಯನಗರದ ಅರಸರ ವಿಷಯದ ಭಯವು ಅವರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕೆಂದು ರಾಮರಾಜನು ಯೋಚಿಸಿದ್ದನು. ಹೋಜೆ ತಿರುಮಲನ ಕಾಲದಲ್ಲಿ ಉಂಟಾಗಿದ್ದ ವಿಜಯನಗರದ ರಾಜ್ಯದೊಳಗಿನ ಒಡಕು ಹೋಗಿ, ಪುನಃ ರಾಜ್ಯದಲ್ಲಿ ಒಕ್ಕಟ್ಟು ಉತ್ಪನ್ನವಾಗಿರುವದೆಂದು ಎಲ್ಲರಿಗೆ, ವಿಶೇಷವಾಗಿ ಮುಸಲ್ಮಾನ ಬಾದಶಹರಿಗೆ ಆತನು ತೋರಿಸಬೇಕಾಗಿತ್ತು. ಹೀಗೆ ಮುಸಲ್ಮಾನ ಬಾದಶಹರು ತನ್ನ ಸಾಮರ್ಥ್ಯವನ್ನು ಅರಿತು, ಕೆಲವು ವರ್ಷಗಳವರೆಗಾದರು ತನ್ನ ಗೊಡವೆಗೆ ಬಾರದಿರುವಾಗ, ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಮೇಲೆ ವಿಜಾಪುರದ ಇಬ್ರಾಹಿಂ ಆದಿಲಶಹನ ಸಮಾಚಾರವನ್ನು ತಕ್ಕೊಂಡು, ಹೊಜೆ ತಿರುಮಲರಾಯನ ಕಾಲದಲ್ಲಾಗಿದ್ದ ಅಪಮಾನದ ಸೇಡು