ಪುಟ:Kannadigara Karma Kathe.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತೃದ್ರೋಹೋಪಕ್ರಮ

೧೮೧

ದುಃಖದಿಂದಿರುತ್ತಿದ್ದೆನು. ಈಗ ಮಾತ್ರ ನಿನ್ನ ಸುಖ-ದುಃಖದ ಪಾಲನ್ನು ನನಗೆ ಯಾಕೆ ಕೊಡದಾದೆ ?

ರಣಮಸ್ತಖಾನ-ಮಾಸಾಹೇಬ. ನಾನು ಅಜ್ಞಾನಿಯಾಗಿರುವತನಕ ನನ್ನ ಸುಖ-ದುಃಖದ ಪಾಲನ್ನು ನಿಮಗೆ ಕೊಡುವದು ಬಿಡುವದು ನನ್ನ ಕೈಯೊಳಗಿದ್ದಿಲ್ಲ. ಈಗ ನನಗೆ ಚೆನ್ನಾಗಿ ತಿಳಿಯುತ್ತದೆ. ನನಗೆ ಈಗ ಲೇಶವಾದರೂ ಸುಖವಿಲ್ಲದೆ ಬರಿಯ ದುಃಖವೇ ಆಗುತ್ತಿರಲು, ನಿಮ್ಮನ್ನು ಬರಿಯ ದುಃಖಕ್ಕೆ ಪಾಲುಗಾರರನ್ನಾಗಿ ನಾನು ಯಾಕೆ ಮಾಡಲಿ ? ನಾನು ಸಣ್ಣವನಿರುವಾಗ ನನ್ನ ಬಾಲಲೀಲೆಯಿಂದ ನನಗೂ ನಿಮಗೂ ಕೂಡಿಯೇ ಸುಖವಾಗುತ್ತಿರಬಹುದು; ನನ್ನ ಬೇನೆಬೇಸರಿಕೆಗಳಿಂದ ನಮಗೂ ನಿಮಗೂ ಕೂಡಿಯೇ ದುಃಖವಾಗುತ್ತಿರಬಹುದು; ಆದರೆ ನನಗೆ ಈಗ ಸುಖವಿಲ್ಲ. ಹೆಜ್ಜೆ ಹೆಜ್ಜೆಗೆ ನನ್ನ ಮಾನಹಾನಿಯಾಗುತ್ತಿದೆ. ನನಗೆ ಬೇಕಾಗಿರುವ ವಸ್ತುವು ದೊರೆಯುವುದಿಲ್ಲ. ಇದರಿಂದ ನನ್ನ ಮನಸ್ಸು ಯಾವಾಗಲೂ ಉದ್ವಿಗ್ನವಾಗಿರುತ್ತದೆ. ಅಂದಬಳಿಕ ನನ್ನ ದುಃಖದ ಕಾರಣವನ್ನೆಲ್ಲ ನಿಮಗೆ ಹೇಳಿ ಸುಮ್ಮನೆ ನಿಮ್ಮ ಮನಸ್ಸನ್ನು ಯಾಕೆ ಉದ್ವಿಗ್ನವಾಗಿ ಮಾಡಬೇಕು? ನನ್ನ ಮಾರ್ಗದಲ್ಲಿರುವ ತೊಂದರೆಗಳು ನನಗೇ ಗೊತ್ತು. ಅವು ನಿಮಗೆ ಹ್ಯಾಗೆ......(ನಡುವೆ ಅಷ್ಟಕ್ಕೆ ಸುಮ್ಮನಾಗಿ ಮತ್ತೆ) ಇನ್ನು ಮುಂದೆ ನನ್ನ ಉಸಾಬರಿಯನ್ನು ಬಿಟ್ಟುಬಿಡಿರಿ. ಪರಮೇಶ್ವರನ ಚಿಂತನದಲ್ಲಿ ಕಾಲಹರಣ ಮಾಡುವ ನಿಮ್ಮ ಕ್ರಮವನ್ನು ಹಾಗೆಯೇ ನಡಿಸಿರಿ. ಅದರಿಂದಲೇ ನಿಮಗೆ ಸುಖವಾಗುವದು ನನ್ನ ಬೆನ್ನುಹತ್ತುವದರಿಂದ ನಿಮಗೆ ಸುಖವಾಗಲಿಕ್ಕಿಲ್ಲ. ನನ್ನ ಕರ್ಮವನ್ನು ನಾನು ಭೋಗಿಸುವೆನು. ನನ್ನ ಚಿಂತೆಯನ್ನು ನೀವು ಬಿಟ್ಟುಬಿಡಿರಿ ನೋಡೋಣ. ನನ್ನಿಂದ ನಿಮಗೆ ಎಂದಿಗೂ ಸುಖವಾಗದು, ಇನ್ನು ನಾನು ಹೋಗುವೆನು. ನೀವು ಕರೆದದ್ದರಿಂದ ನಾನು ನೆಟ್ಟಗೆ ಮೋರೆಯನ್ನು ಸಹ ತೊಳೆದುಕೊಳ್ಳದೆ ಹಾಸಿಗೆಯಿಂದ ಎದ್ದ ಕೂಡಲೇ ಹಾಗೆಯೇ ಬಂದಿದ್ದೇನೆ.

ಈ ಮೇರೆಗೆ ನುಡಿದು ರಣಮಸ್ತಕಾನನು ಎದ್ದು ಹೋಗಿಬಿಟ್ಟನು. ಆತನು ತನ್ನ ತಾಯಿಯ ಕಡೆಗೆ ಹೊರಳು ಸಹ ನೋಡಲಿಲ್ಲ. ಇದನ್ನು ನೋಡಿ ಮಾಸಾಹೇಬರು ಆಶ್ಚರ್ಯಮಗ್ನರಾಗಿ ಸ್ತಬ್ದವಾಗಿ ಕುಳಿತುಬಿಟ್ಟರು! ತಾವು ಮಗನೊಡನೆ ನಡೆಸುವ ಸಂಭಾಷಣದ ಪರ್ಯವಸಾನವು ಹೀಗಾದೀತೆಂದು ಅವರಿಗೆ ತೋರಿದ್ದಿಲ್ಲ. ತಮ್ಮ ಮಗನು ತಮ್ಮ ಸಂಗಡ ಇಷ್ಟು ಔದಾಶೀನ್ಯದಿಂದಲೂ, ನೈಷ್ಠುರ್ಯದಿಂದಲೂ, ಕಠೋರತನದಿಂದಲೂ ನಡೆದುಕೊಂಡಾನೆಂದು ಅವರು ಕನಸು-ಮನಸುಗಳಲ್ಲಿ ಎಣಿಸಿದ್ದಿಲ್ಲ. ಅವರ ಕಲ್ಪನೆಗೆ ಮೀರಿದ ವಿಷಯವನ್ನು