ಪುಟ:Kannadigara Karma Kathe.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದುಃಸ್ವಪ್ನವು

೧೮೫

ಸುಮ್ಮನೆಯಿದ್ದಳು. ಮುಂದೆ ಆಕೆಗೆ ಕೇಳಲಿಕ್ಕೆ ಆಸ್ಪದವೇ ದೊರೆಯಲಿಲ್ಲ. ಹೊತ್ತು ಮುಳುಗಿ ಸ್ವಲ್ಪ ರಾತ್ರಿಯಾದ ಕೂಡಲೆ ಮಾಸಾಹೇಬರ ಮನಸ್ಸಿಗೆ ಏನು ಹೊಳೆಯಿತೋ ಏನೋ, ಅವರು ಲೈಲಿಗೆ ಇಂದು ಹಗಲೆಲ್ಲ ಜಪಮಾಡಲಿಕ್ಕೆ ನನಗೆ ಅನುಕೂಲವಾಗಲಿಲ್ಲ; ಆದ್ದರಿಂದ ನಾನು ಈಗ ನನ್ನ ಕೋಣೆಯಲ್ಲಿ ಹೋಗಿ ಕುಳಿತುಕೊಳ್ಳುತ್ತೇನೆ. ನನ್ನನ್ನು ಕರೆಯಲಿಕ್ಕೆ ಇಲ್ಲವೆ ನನ್ನನ್ನೇನಾದರೂ ಕೇಳಲಿಕ್ಕೆ ನೀನು ಸರ್ವಥಾ ಬರಬೇಡ ಎಂದು ಹೇಳಿ, ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತುಕೊಂಡುಬಿಟ್ಟರು ! ಆಯಿತು, ಲೈಲಿಯು ಸಂಜೆಯ ಮುಂದೆ ಕೇಳಬೇಕೆಂದಿದ್ದು ಅಲ್ಲಿಯೇ ಉಳಿಯಿತು. ಲೈಲಿಯು ಕೆಲಸ ಬೊಗಸೆಗಳನ್ನೆಲ್ಲ ತೀರಿಸಿಕೊಂಡು, ದಿನಾಲು ತಾನು ಮಲಗಿಕೊಳ್ಳುವ ಸ್ಥಳದಲ್ಲಿ ಬಂದು ಬಿದ್ದು ಕೊಂಡಳು. ಲೈಲಿಯಾದರೂ ಸಾಧಾರಣ ಮನುಷ್ಯಳಿದ್ದಿಲ್ಲ. ಆಕೆಯು ಬಹುಜನ ಸಾಧು-ಸತ್ಪುರುಷರ ಬಳಿಯಲ್ಲಿದ್ದವಳಾದದ್ದರಿಂದ ಸುಜ್ಞಳಿದ್ದಳು. ಆದರೆ ಸ್ವಲ್ಪ ಪುಕ್ಕ ಸ್ವಭಾವದವಳು. ಆಕೆಗೆ ಸಂಕೋಚ ಬಹಳ, ತಾನು ಮಾಸಾಹೇಬರನ್ನು ಚಿಕ್ಕಂದಿನಿಂದ ಎತ್ತಿ ಆಡಿಸಿದವಳಾಗಿದ್ದರೂ, ಅವರ ಮೇಲೆ ಹೊಟ್ಟೆಯ ಮಕ್ಕಳಿಗಿಂತ ಆಕೆಯು ಹೆಚ್ಚು ಪ್ರೀತಿಯನ್ನು ಮಾಡುತ್ತಿದ್ದರೂ, ಮಾಸಾಹೇಬರ ತೇಜಸ್ಸಿಗೆ ಆಕೆಯು ಅಂಜುತ್ತಿದ್ದಳು. ಪ್ರಸಂಗದಲ್ಲಿ ಒಮ್ಮೆ ಬಾಯಿಬಿಟ್ಟಳೆಂದರೆ ಮಾಸಾಹೇಬರ ಹಂಗು ಇಲ್ಲದೆ ನಿಜವಾದ ಸಂಗತಿಯನ್ನು ಸ್ಪಷ್ಟವಾಗಿ ಹೇಳಲಿಕ್ಕೆ ಲೈಲಿಯು ಹಿಂದುಮುಂದು ನೋಡುತ್ತಿದ್ದಿಲ್ಲ; ಆದರೆ ಎಲ್ಲ ಪ್ರಸಂಗದಲ್ಲಿ ದಿಟ್ಟತನನಿಂದ ಮಾಸಾಹೇಬರನ್ನು ಹಾಗೆ ತಟ್ಟನೆ ಕೇಳುವ ಧೈರ್ಯವು ಆಕೆಗೆ ಆಗುತ್ತಿದ್ದಿಲ್ಲ. ಮಾಸಾಹೇಬರಾದರೂ ಲೈಲಿಯ ಯೋಗ್ಯತೆಯನ್ನು ಅರಿತಿದ್ದರು. ಆಕೆಯು ಬಹುಶ್ರುತಳೆಂತಲೂ, ಸುಜ್ಞಳೆಂತಲೂ ತಿಳಿದು ಆಕೆಯ ವಿಷಯವಾಗಿ ಅವರು ಆದರಭಾವವುಳ್ಳವರಾಗಿದ್ದರು. ಆದರೆ ಸಲಿಗೆಯಿಂದ ಒಮ್ಮೊಮ್ಮೆ ಆಕೆಯ ಹಂಗನ್ನು ಅವರು ಎಷ್ಟು ಮಾತ್ರವೂ ಇಡುತ್ತಿದ್ದಿಲ್ಲ. ಇರಲಿ ಲೈಲಿಗೆ ಸ್ವಲ್ಪ ಹೊತ್ತಿನಲ್ಲಿ ನಿದ್ದೆ ಹತ್ತಿತು. ಮಾಸಾಹೇಬರು ಜಪ ಮಾಡುವದನ್ನು ಬಿಟ್ಟು, ಮಗನು ಈ ದಿನ ಹೊರಗೆ ಹೋಗಿರಬಹುದೋ ಎಂದು ಚಡಪಡಿಸುತ್ತ ಕುಳಿತುಕೊಂಡಿದ್ದರು. ಅವರಿಗೆ ಹಿಂದಿನ ವೃತ್ತಾಂತವೆಲ್ಲ ನೆನಪಾಗಿತ್ತು. ಅವರು ವಿಚಾರ ಮಾಡಿಮಾಡಿ ದಣಿದು ಮಲಗಿಕೊಂಡರು; ಆದರೆ ಅವರಿಗೆ ನಿದ್ದೆಯು ಬರಲೊಲ್ಲದು. ಅವರು ಹಲವು ಸಾರೆ ಕಿಟಕಿಯಲ್ಲಿ ಹಣಿಕಿ ನೋಡಿದರು. ಸ್ವಚ್ಛವಾದ ಬೆಳದಿಂಗಳಲ್ಲಿ ಯಾರಾದರೂ ಹೋಗುವುದು ಕಂಡರೆ ನೋಡಬೇಕೆಂತಲೂ ಯಾರಾದರೂ