ಪುಟ:Kannadigara Karma Kathe.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಡೆಯ ಉಪಾಯ

೧೯೩

ಎಂದು ಕೇಳಿದಳು. ಪಾಪ ! ಲೈಲಿಯು ತಿರುಗಿ ಮಾತಾಡದೆ ಹಾಲು ತರಲಿಕ್ಕೆ ಹೋದಳು. ಇತ್ತ ಮಾಸಾಹೇಬರು ವಿಚಾರಮಗ್ನರಾಗಿಯೇ ಇದ್ದರು. ಇಷ್ಟು ಹೊತ್ತಾದರೂ ಮಗನು ಬಾರದೆಯಿರುವದು ಅವರಿಗೆ ಸಲಕ್ಷಣವಾಗಿ ತೋರಲಿಲ್ಲ. ಅವರ ಮನಸ್ಸು ಬಹಳ ಅಸ್ವಸ್ಥವಾಯಿತು. ನಾನು ನಿನ್ನೆ ಆಡಿದ ಮಾತಿಗೆ ರಣಮಸ್ತನು ಸಿಟ್ಟಾಗಿ ಎಲ್ಲಿಗಾದರೂ ಹೊರಟುಹೋಗಿರಬಹುದೆ? ಹಾಗಿದ್ದರೆ ಮುಂದೆ ನನ್ನ ಗತಿಯೇನು ? ಛೇ, ನನ್ನ ರಣಮಸ್ತನು ಹೀಗೆ ಮಾಡಲಿಕ್ಕಿಲ್ಲ. ಆತನು ಹೀಗೆ ನನ್ನನ್ನು ಎಂದೂ ಬಿಟ್ಟುಹೋಗಲಿಕ್ಕಿಲ್ಲ. ಸಿಟ್ಟಾಗಿ ತಾಸೆರಡು ತಾಸು ಹೋಗುವದರೊಳಗೇ ಆತನಿಗೆ ಪಶ್ಚಾತ್ತಾಪವಾದೀತು. ಎಂಬಿವೇ ಮೊದಲಾದ ವಿಚಾರಗಳಿಂದ ಅವರು ತಲ್ಲಣಿಸುತ್ತಿರಲು, ಲೈಲಿಯು ಹಾಲು ತಕ್ಕೊಂಡುಬಂದಳು. ಮಾಸಾಹೇಬರು ಹಾಲನ್ನು ಕುಡಿದು; ಆದರೂ ಅವರಿಗೆ ಸಮಾಧಾವಾಗಲಿಲ್ಲ. ಅವರು ತಮ್ಮ ಕೋಣೆಯಿಂದ ಹೊರಬಿದ್ದು ಮಗನ ಬಂಗಲೆಗೆ ಹೋದರು. ಅಲ್ಲಿಂದ ಕುಂಜವನವನ್ನು ಪ್ರವೇಶಿಸಿದರು ಹೋದ ನಜೀರನು ಇನ್ನೂ ಬರಲಿಲ್ಲವಲ್ಲ ? ಕರೀಮನು ಹಾದಿಯಲ್ಲಿ ಭೇಟಿಯಾಗಿದ್ದರೆ ನಜೀರನು ಇಷ್ಟು ಹೊತ್ತಿಗೆ ಬರುತ್ತಿದ್ದನು. ಕರೀಮನು ಹಾದಿಯಲ್ಲಿ ಭೆಟ್ಟಿಯಾದಂತೆ ತೋರುವದಿಲ್ಲ. ಇನ್ನು ಏನು ಮಾಡಬೇಕು? ನಾನಾದರೂ ಹೋಗಲಾ ! ಏನೂ ಗೊತ್ತಿಲ್ಲದೆ ಹೋಗುವದಾದರೂ ಎತ್ತ ? ಎಂದು ಚಡಪಡಿಸುತ್ತ ಕುಂಜವನವನ್ನೆಲ್ಲ ತಿರುಗಿದರಲ್ಲದೆ, ವಿಜಯನಗರದ ಹಾದಿಯ ಕಡೆಗೆ ಹೋಗಿ ನೋಡಿ ನೋಡಿ ದಣಿದರು. ಇಷ್ಟರಲ್ಲಿ ಮಧ್ಯಾಹ್ನವು ತಿರುಗಿತು. ಅದರೂ ಯಾರೂ ಸುಳಿಯಲಿಲ್ಲ.

ಆಗ ಲೈಲಿಯು ಮಾಸಾಹೇಬರ ಬಳಿಗೆ ಬಂದು- “ನಿನ್ನಿನಿಂದ ಅನ್ನವಿಲ್ಲ. ಊಟಮಾಡಬೇಕೆಂದು” ಹೇಳಿಕೊಳ್ಳಲು, ಮಾಸಾಹೇಬರು-ಹುಡುಗನ ಗೊತ್ತು ಹತ್ತುವವರೆಗೆ ಅನ್ನ-ನೀರು ವರ್ಜ್ಯವು. ಆತನು ನನ್ನ ಮೇಲೆ ಸಿಟ್ಟಾಗಿ ಹೋಗಿರುವನು. ಆತನ ಗೊತ್ತುಹಚ್ಚಿ, ಆತನ ಸಂಗಡ ಎರಡು ಮಾತುಗಳನ್ನಾಡಿದ ಬಳಿಕ ಊಟವು, ಅಲ್ಲಿಯವರೆಗೆ ಊಟವಿಲ್ಲ. ಸುಮ್ಮನೆ ಆಗ್ರಹ ಮಾಡಬೇಡ ಎಂದು ಸ್ಪಷ್ಟವಾಗಿ ಹೇಳಿದರು. ಲೈಲಿಯು ಎಷ್ಟು ಹೇಳಿಕೊಂಡರೂ ಅವರು ಕೇಳಲಿಲ್ಲ. ಆಗ ಲೈಲಿಯು-ಊಟವಿಲ್ಲದಿದ್ದರೆ ಇಲ್ಲ, ಹೀಗೆ ಬಿಸಲಲ್ಲಿ ಎಡತಾಕುವದನ್ನು ಬಿಟ್ಟು ಒಳಗಾದರೂ ನಡೆಯಿರಿ, ಎಂದು ಹೇಳಿದಳು. ಅದಕ್ಕೂ ಮಾಸಾಹೇಬರು ಕಿವಿಗೊಡಲಿಲ್ಲ. ಕಡೆಗೆ ತಾಯಿಯು ಮಗಳನ್ನು ಸಥಿಯಿಂದ ಸಿಟ್ಟುಮಾಡಿ ಕರಕೊಂಡು ಹೋಗುವಂತೆ, ಲೈಲಿಯು ಮಾಸಾಹೇಬರನ್ನು