ಪುಟ:Kannadigara Karma Kathe.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೯

೨೪ನೆಯ ಪ್ರಕರಣ

ಬಾದಶಹನ ಪತ್ರವು

ಮೇಲೆ ಹೇಳಿದ ಪ್ರಸಂಗವು ಒದಗಿ ಎಂಟು ದಿವಸವಾಗಿರಬಹುದು, ಆಗಿರಲಿಕ್ಕಿಲ್ಲ; ಅಷ್ಟರಲ್ಲಿ ವಿಜಾಪುರದ ಬಾದಶಹರು ತನ್ನ ಎರಡನೆಯ ವಕೀಲನ ಮುಖಾಂತರ ರಣಮಸ್ತಖಾನನ ಸಂಬಂಧದಿಂದ ರಾಮರಾಜನಿಗೆ ಸಷ್ಟವಾಗಿ ಪತ್ರ ಬರೆದು ಕೇಳಿದನು. ಬಾದಶಹನು ತನ್ನ ಆ ಪತ್ರದಲ್ಲಿ ರಾಮರಾಜನಿಗೆ ನಿಮ್ಮ ಕಡೆಗೆ ನಮ್ಮ ವಕೀಲನನ್ನಾಗಿ ಕಳಿಸಿದ್ದ ರಣಮಸ್ತಖಾನನನ್ನು, ನೀವು ನಮ್ಮನ್ನು ಕೇಳದೆ ನೌಕರಿಗೆ ಹಾಗೆ ಇಟ್ಟುಕೊಂಡಿರಿ ? ಆತನು ನಮ್ಮ ಮೇಲೆ ತಿರುಗಿಬಿದ್ದು ನಿಮ್ಮ ಕಡೆ ಬಂದಿರಬಹುದು; ಅಥವಾ ನೀವೇ ಆತನನ್ನು ಮೋಸಗೊಳಿಸಿ ನಿಮ್ಮ ಕಡೆಗೆ ಮಾಡಿಕೊಂಡಿರಬಹುದು, ಹ್ಯಾಗಿದ್ದರೂ ರಣಮಸ್ತಖಾನನಂಥ ದ್ರೋಹಿಗೆ ನೀವು ಆಶ್ರಯ ಕೊಡತಕ್ಕದ್ದಿದ್ದಿಲ್ಲ. ಇದರಿಂದ ನಮ್ಮ ನಿಮ್ಮ ಸ್ನೇಹಸಂಬಂಧಕ್ಕೆ ಕೊರತೆಯುಂಟಾಗಿರುತ್ತದೆ. ನಮ್ಮ ವಿಶ್ವಾಸದವನೆಂದು ರಣಮಸ್ತಖಾನನನ್ನು ನಿಮ್ಮ ಕಡೆಗೆ ವಕೀಲನನ್ನಾಗಿ ನಿಯಮಿಸಿ ಕಳುಹಿಸಿರಲು, ಆತನು ಈಗ ವಿಶ್ವಾಸಘಾತ ಮಾಡಿರುವದರಿಂದ ಸ್ವಾಮಿ ದ್ರೋಹವು ಆತನಿಂದ ಘಟಿಸಿರುವದು, ಆದ್ದರಿಂದ ನೀವು ಈ ಮಾತಿನ ಪೂರ್ಣ ವಿಚಾರಮಾಡಿ ನಮ್ಮ ಮನುಷ್ಯನನ್ನು ನಮ್ಮ ಕಡೆಗೆ ತಿರುಗಿ ಕಳಿಸಬೇಕು. ಆತನ ಅಪರಾಧಕ್ಕಾಗಿ ಆತನಿಗೆ ದೇಹಾಂತ ಪ್ರಾಯಶ್ಚಿತ್ತವನ್ನು ಕೊಡುವವರಿದ್ದೇವೆ. ನೀವು ಆ ದ್ರೋಹಿಯನ್ನು ನಮ್ಮ ಕಡೆಗೆ ಕಳಿಸಿಕೊಡದಿದ್ದರೆ, ನಮ್ಮ ನಿಮ್ಮ ಸ್ನೇಹಸಂಬಂಧವನ್ನು ಮುರಿಯುವ ಉದ್ದೇಶದಿಂದ ನೀವು ಬುದ್ಧಿಪೂರ್ವಕವಾಗಿಯೇ ಈ ಕೆಲಸ ಮಾಡಿರುವಿರೆಂದು ನಾವು ತಿಳಿಯುತ್ತೇವೆ. ಇದ್ದದ್ದರಲ್ಲಿ ನೆಟ್ಟಗಾಯಿತು, ರಣಮಸ್ತನು ಹೀಗೆ ಪ್ರಸಿದ್ಧ ರೀತಿಯಿಂದ ನಿಮ್ಮ ನೌಕರಿಗೆ ನಿಲ್ಲದೆ, ಗುಪ್ತರೀತಿಯಿಂದ ನಮ್ಮ ದ್ರೋಹ ಬಗೆದಿದ್ದರೆ ನಮಗೆ ಬಹಳ ತ್ರಾಸವಾಗುತ್ತಿತ್ತು. ಆತನು ಹೋದದ್ದರಿಂದ, ಅಥವಾ ನಿಮ್ಮನ್ನು ಕೂಡಿಕೊಂಡಿದ್ದರಿಂದ ಅಂಥವೇನೂ ನಮ್ಮ ಹಾನಿಯಾಗುತ್ತದೆನ್ನುವ ಹಾಗಿಲ್ಲ; ಆದರೆ ಹೀಗಾದದ್ದು ನಮ್ಮ ನಿಮ್ಮ ಸ್ನೇಹಸಂಬಂಧದ ದೃಷ್ಟಿಯಿಂದ