ಪುಟ:Mahakhshatriya.pdf/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂದೊಂದು ಪ್ರಮಾಣವುಳ್ಳದ್ದಾದುದರಿಂದ ಶಾಶ್ವತವೆನ್ನುವುದರಲ್ಲಿ ಅರ್ಥವಿಲ್ಲ.”

ನಹುಷನು “ಭಲೆ” ಯೆಂದನು. “ನನ್ನ ಈ ಪದವಿಯು ಅಶಾಶ್ವತವೆಂಬುದನ್ನು ಪ್ರದಕ್ಷಿಣವಾಗಿ ಹೇಳಿದೆ. ಆಯಿತು, ಈ ರಹಸ್ಯ ಯಾರಿಗೆ ಗೊತ್ತು ? ಯಾರನ್ನು ಕೇಳಿದರೆ ಇದು ತಿಳಿಯುವುದು ?”

“ದೇವಾ ಈ ರಹಸ್ಯವನ್ನು ತಿಳಿಸಿ ಆಗುವುದೂ ಆಗಬೇಕಾದುದೂ ಯಾವುದೂ ಇಲ್ಲ. ಆದರೆ, ತಮಗೆ ಮಾತು ಕೊಟ್ಟಿರುವಂತೆ, ನಾವು ಇದನ್ನು ಹೇಳಿಯೇ ತೀರಬೇಕಾಗಿ ಹೇಳುತ್ತೇವೆ. ದೇವಗುರುಗಳೊಬ್ಬರು ಇದನ್ನು ಬಲ್ಲರು.”

“ಸರಿ.”

ಇಂದ್ರನು ಅಗ್ನಿ ವಾಯುಗಳಿಬ್ಬರಿಗೂ ಅಪ್ಪಣೆಯನ್ನಿತ್ತು ವಿಸರ್ಜಿಸಿ, ತಾನು ನೇರವಾಗಿ ಬೃಹಸ್ಪತಿಯ ಬಳಿಗೆ ಬಂದನು. ಹಠಾತ್ತಾಗಿ ಇಂದ್ರನು ಬಂದನೆಂದು ಆಚಾರ್ಯನು ತಾನಾಗಿ ಬಾಗಿಲಿಗೆ ಬಂದು ಆತನನ್ನು ಒಳಗೆ ಕರೆದುಕೊಂಡು ಹೋದನು. ಇಂದ್ರನು ಆ ಮಾತು ಈ ಮಾತು ಆಡುತ್ತ “ದೇವ, ನನಗೆ ಇಂದ್ರಪಟ್ಟವನ್ನು ಕಟ್ಟಿರುವರಲ್ಲಾ ಅದು ಪೂರ್ಣವಾಗಿದೆಯೆ ?” ಎಂದು ಕೇಳಿದನು. ಇಂದ್ರನು ಪೂರ್ಣವೆಂಬ ಶಬ್ದವನ್ನು ಪೂರ್ವಕಾಲ ಎಂಬರ್ಥದಲ್ಲಿ ಉಪಯೋಗಿಸಿದುದು ಬೃಹಸ್ಪತಿಗೆ ಅಧಿಕಾರ ಪೂರ್ಣವಾಗಿದೆಯೇ ಎಂದು ಅರ್ಥವಾಯಿತು. ಆತನು ಇಂದ್ರನನ್ನು ನೋಡಿ, “ನಿನಗೆ ಅಪಾರವಾದ ಲಾಭವಾಗಿದೆ. ಹೀಗಿರಲು ಈ ಪ್ರಶ್ನೆಯೇಕೆ ? ಇದನ್ನು ನೀನು ಕೇಳದಿದ್ದರೆ ಒಳ್ಳೆಯದು” ಎಂದನು.

“ಏಕೆ ? ಕೇಳಬಾರದೆ ?”

“ನೀನು ತಿಳಿಯಬೇಕೆಂದ ರಹಸ್ಯವನ್ನು ನಿನಗೆ ಹೇಳುವೆವು ಎಂದು ನಾವು ವರವನ್ನು ಕೊಟ್ಟಿದ್ದೇವೆಯಾಗಿ ಹೇಳಲೇಬೇಕು. ಆದರೆ ಅದನ್ನು ತಿಳಿದು ನಿನಗೆ ಆಗಬೇಕಾದುದೇನು ?”

“ಅಧಿಕಾರವು ಪೂರ್ಣವಾಗಲು ಏನು ಮಾಡಬೇಕೋ ಅದನ್ನು ಮಾಡಿರೆಂದು ತಮ್ಮನ್ನೇ ಕೇಳುವುದು.”

"ಕಾಲವನ್ನು ಕುರಿತು ಆಗಲೇ ಹೇಳಿದ್ದೇವೆ. ನೀನಾಗಿ ಮಾನವತ್ವವನ್ನು ಒಪ್ಪಿಕೊಂಡಿರುವೆಯಾಗಿ ಕಾಲದಲ್ಲಿ ಅದು ಅಪೂರ್ಣ. ಕಾಲದೃಷ್ಟಿಯಿಂದ ಅಪೂರ್ಣವಾದ ಅಧಿಕಾರವು ಎಷ್ಟು ಪೂರ್ಣವಾಗಬಹುದೋ ಅಷ್ಟನ್ನು ನಾವು ಕೊಟ್ಟೇ ಇದ್ದೇವೆ.”

“ಹಾಗಾದರೆ, ಇಂದ್ರಾಧಿಕಾರವು ನನಗೆ ಪೂರ್ಣವಾಗಿ ಬಂದಿಲ್ಲ