ಪುಟ:Mahakhshatriya.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಂದಾಗ, ನಾನೂ ಇದ್ದೆ. ಆಯಿತು, ಇದನ್ನು ಈಗ ಹೇಗೆ ಅನುಸಂಧಾನ ಮಾಡುವುದು?”

ಆಚಾರ್ಯನು “ನೋಡು, ಚತುರ್ಮುಖ ಬ್ರಹ್ಮನ ಬಳಿ ಇರುವ ಸರಸ್ವತೀ ದೇವಿಯ ಅನುಚರಳು ಉಪಶ್ರುತಿದೇವಿ. ನಾವು ದೇವತೆಗಳು ತೈಜಸದೇಹಿಗಳು. ನಾವು ತೈಜಸಪ್ರಪಂಚಗಳಲ್ಲಿ ಬೇಕಾದುದನ್ನು ಮಾಡಬಲ್ಲೆವು. ಆದರೆ, ವಾಯು ಆಕಾಶ ಪ್ರಪಂಚಗಳಲ್ಲಿ ಕುಂಠಿತಗತಿಗಳಾಗುವೆವು. ಉಪಶ್ರುತಿಯು ಆಕಾಶದಲ್ಲಿ ಅಪ್ರತಿಹತ ಗಮನವುಳ್ಳವಳು. ಸರಿ, ಆಕೆಯನ್ನು ಕರೆದು ಕೇಳೋಣ. ನಾನು ಬ್ರಹ್ಮದೇವನ ಬಳಿಗೇ ಹೋಗಿ ಕೇಳೋಣವೆಂದಿದ್ದೆ” ಎಂದು ಆಸನವನ್ನು ಬಲಿತು ಧ್ಯಾನಗ್ರಸ್ಥನಾದನು.

ಇನ್ನೊಂದು ಕ್ಷಣದಲ್ಲಿ ಉಪಶ್ರುತಿದೇವಿಯು ಆತನಿಗೆ ದರ್ಶನ ಕೊಟ್ಟು “ಆಚಾರ್ಯ, ನನ್ನಿಂದೇನಾಗಬೇಕು?” ಎಂದು ಕೇಳಿದಳು. ಆತನು “ದೇವಿ, ಮೊದಲು ನೀನು ಇಲ್ಲಿರುವವರೆಲ್ಲರಿಗೂ ದರ್ಶನವನ್ನು ಕೊಡಬೇಕು” ಎಂದು ಪ್ರಾರ್ಥಿಸಿದನು. ಆಕೆಯು ಪ್ರಸನ್ನೆಯಾಗಿ ಎಲ್ಲರಿಗೂ ದರ್ಶನವಿತ್ತಳು. ಎಲ್ಲರೂ ಆಕೆಯ ದರ್ಶನ ಮಾಡಿ, ಆಕೆಯ ಅಪ್ಪಣೆ ಪಡೆದು “ದೇವಿ, ಇಂದ್ರನು ಇರುವೆಡೆಯನ್ನು ತಿಳುಹಿಸಿಕೊಡಬೇಕು” ಎಂದು ಪ್ರಾರ್ಥಿಸಿದರು.

ಆಕೆಯು “ಆಗಲಿ ಆದರೆ, ನೀವು, ಆತನನ್ನು ಏನಿದ್ದರೂ ಕನಸಿನಲ್ಲಿ ಕಂಡಂತೆ ಕಾಣುವಿರಿ. ಆತನು ನಿಮ್ಮ ಸ್ಥೂಲಚಕ್ಷುವಿಗೂ ಗೋಚರನಾಗಬೇಕು ಎನ್ನುವುದಿದ್ದರೆ ಆತನನ್ನು ಉಪಬೃಂಹಣ ಮಾಡಬೇಕು” ಎಂದು ಹೇಳಿ, ತಾನು ವೀಣೆಯನ್ನು ತೆಗೆದುಕೊಂಡಳು. ವೀಣೆಯನ್ನು ಬಾರಿಸುತ್ತ ಒಂದು ಮನೆಯನ್ನು ಹಿಡಿದು ಮೀಟು ಹಾಕುತ್ತಾ “ಸರಿ, ಇಂದ್ರನು ಮಾನಸ ಸರೋವರದ ಪದ್ಮಲತೆಗಳಲ್ಲಿ ಒಂದನ್ನು ಆಶ್ರಯಿಸಿ, ಆ ಪದ್ಮನಾಳದಲ್ಲಿ ಕುಳಿತಿರುವನು. ಆತನನ್ನು ಹಿಂಬಾಲಿಸಿದ ಹತ್ಯೆಯು ಆ ಮಾನಸ ಸರೋವರದ ಮೇರೆಯಲ್ಲಿ ಕುಳಿತಿರುವುದು. ಅದು ಜೀರ್ಣವಾಗುವವರೆಗೂ ಆತನು ಈಚೆಗೆ ಬರುವುದಿಲ್ಲ. ನೀವೆಲ್ಲರೂ ದೆವದೇವನಾದ ಮಹಾವಿಷ್ಣುವಿನ ಬಳಿಗೈದು ಬೇಡಿಕೊಳ್ಳಿ. ಆತನು ಇಂದ್ರನಿಗೆ ಹತ್ಯೆ ಕಳೆಯುವ ಉಪಾಯವನ್ನು ಸೂಚಿಸುವನು. ಅದರಂತೆ ಮಾಡಿ ಕೃತಾರ್ಥರಾಗಿ” ಎಂದಳು.

ಎಲ್ಲರೂ “ಅಪ್ಪಣೆ”ಯೆಂದರು.

ಅಗ್ನಿ ವಾಯುಗಳು ಆಕೆಯನ್ನು ಕೇಳಿದರು : “ತಾಯೆ, ನಾವು ಮಾನಸಸರೋವರವನ್ನು ಹುಡುಕಿದೆವು. ನಮಗೆ ಇಂದ್ರನೇಕೆ ಅಲ್ಲಿ ಸಿಕ್ಕಲಿಲ್ಲ ?”

ಉಪಶ್ರುತಿಯು ಹೇಳಿದಳು : “ಅಗ್ನಿಯು ಮೊದಲನೆಯ ಸಲ ಹುಡುಕಲು