ಹತ್ಯೆಯು ಮಾತನಾಡಿತು. ಅದು ಗಾಳಿಯಲ್ಲಿರುವ ಶಬ್ದವರ್ಣವಾದಂತೆ.
“ಇಂದ್ರ ! ಇಂದ್ರನಿಗಾಗಿ ಇನ್ನು ಎಷ್ಟು ದಿನ ಕಾಯಬೇಕೋ?”
“ನಾನು ಬಂದಿರುವವನು ಇಂದ್ರನಲ್ಲ”
“ಹೌದು ನಿನ್ನ ಸ್ಪರ್ಶದಿಂದ ಗೊತ್ತಾಯಿತು”
“ನಿನಗೆ ಸ್ಪರ್ಶವಲ್ಲದೆ ಇನ್ನೇನೂ ಗೊತ್ತಾಗುವುದಿಲ್ಲವೇನು?”
“ಇಲ್ಲ”
“ಹಾಗಾದರೆ, ಇಂದ್ರನನ್ನು ಹೇಗೆ ಗೊತ್ತುಮಾಡಿಕೊಳ್ಳುವೆ?”
“ಇಂದ್ರನು ಬಂದರೆ ನನಗೆ ತಿಳಿಯುತ್ತದೆ. ನಾನು ಹೋಗಿ ಹಿಡಿದು ಬಿಡುತ್ತೇನೆ.”
“ಇಂದ್ರನಿರುವುದು ಸ್ವರ್ಗದಲ್ಲಿ. ಇದು ಹಿಮಾಲಯ ಪ್ರಾಂತ. ಮನುಷ್ಯ ಭೂಮಿ. ಇಲ್ಲಿ ಕಾದು ಏನು ಫಲ?”
“ಇದು ಮನುಷ್ಯ ಭೂಮಿಯಲ್ಲ. ದೇವಿಭೂಮಿ. ಇಲ್ಲದಿದ್ದರೆ ನನ್ನನ್ನು ಹೀಗೆ ಸುಡುತ್ತಿರಲಿಲ್ಲ. ಇಂದ್ರನು ಇಲ್ಲಿಗೆ ಓಡಿಬಂದ. ಅವನನ್ನು ಬೆನ್ನಟ್ಟಿ ನಾನು ಬಂದೆ.”
“ಆತನೀಗ ಎಲ್ಲಿದ್ದಾನೆ?”
“ಅದೂ ನನಗೆ ಗೊತ್ತಿಲ್ಲ. ಅವರು ಬಂದರೇ ನನಗೆ ಗೊತ್ತಾಗುವುದು. ಹಿಡಿದುಬಿಡುವೆ. ಹುಂ. ಹೇಳಿಕೊಂಡು ಏನು ಫಲ? ಎರಡು ಹೆಜ್ಜೆಯಲ್ಲಿ ತಪ್ಪಿಸಿಕೊಂಡ. ಎಲ್ಲಿಗೆ ಹೋದಾನು? ಇಲ್ಲಿಯೇ ಎಲ್ಲಿಯೋ ಸೇರಿಕೊಂಡಿದ್ದಾನೆ. ಬರಲಿ ಈಚೆಗೆ,”
“ಬಂದರೇನು ಮಾಡುವೆ? ನಿನಗೆ ಅಂಗಾಗಗಳೇ ಇಲ್ಲವಲ್ಲ?”
“ಏನು ಮಾಡುವುದೆ? ನಾನು ಮುಟ್ಟಿದಲ್ಲಿ ಹುಣ್ಣಾಗುವುದು. ಕೊಳಕು ಮಂಡಲದ ಹುಣ್ಣಿನಂತೆ ತೀವ್ರವಾಗಿ ಒಂದೇ ಗಳಿಗೆಯೊಳಗೆ ಮೈಯೆಲ್ಲಾ ಹುಣ್ಣೇ ಹುಣ್ಣಾಗುವುದು.”
“ಧನ್ವಂತರಿಯು ಅಮೃತಸೇಚನದಿಂದ ಅದನ್ನು ಗುಣಪಡಿಸುವನು.”
“ಉಹುಂ, ಸಾಧ್ಯವಿಲ್ಲ. ಇದು ಪಾಪದಿಂದ ಆದುದು. ಇದಕ್ಕೆ ಸಾವೇ ಕೊನೆ.”
“ಇಂದ್ರನು ಅಮರನೆಂಬುದನ್ನು ಮರೆತು ಮಾತನಾಡುತ್ತಿರುವೆ.”
“ಹಾಗಾದರೆ ಅನುಭವಿಸಿ ಅನುಭವಿಸಿ ಕೊನೆಗೆ ಸತ್ತಂತೆ ಬೀಳುವನು.”
“ನೀನು ಕುರಿತು ಹೇಳುತ್ತಿರುವುದು ದೇವರಾಜನನ್ನು! ಬೀದಿಯ ಭಿಕಾರಿಯನ್ನಲ್ಲ.”