ಸೃಷ್ಟಿಯೆಂದರೆ ಅಂಕೆ
ಪ್ರಹರಿಯು ಬಂದು ಕೈಮುಗಿದು “ಯಾರೋ ಮಹಾಪಾದದ ದರ್ಶನಕ್ಕೆ ಆತುರವಾಗಿ ಬಂದಿರುವರು” ಎಂದು ಬಿನ್ನವಿಸಿದನು. ಅದು ಆಗಂತುಕರ ಕಾಲವಲ್ಲ. ಆದರೂ ನಹುಷನು ಬೇಸರಗೊಳ್ಳದೆ, “ಅವರನ್ನು ದರ್ಶನ ಮಂದಿರಕ್ಕೆ ಕರೆದುಕೊಂಡು ನಡೆ ಎಂದು ತಾನೂ ಹಿಂದೆಯೇ ಬಂದನು.
ಬಂದವರು ನಿಯತಿದೇವಿ. ಆಕೆಯು ಇಂದ್ರನನ್ನು ಕಂಡು ವಿನಯದಿಂದ ನಮಸ್ಕರಿಸಿ ತಾನು ಬಂದ ಕಾರ್ಯವನ್ನು ನಿವೇದಿಸಿದಳು : “ಮಹಾಪ್ರಭುಗಳು ಶಿಬಿಕೋತ್ಸವವು ಏಳು ದಿನ ನಡೆಯಬೇಕೆಂದು ಗೊತ್ತುಮಾಡಿರುವಿರಂತೆ. ಹಾಗಾದರೆ ಮನುಷ್ಯ ಲೋಕದಲ್ಲಿ ಎಲ್ಲವೂ ವ್ಯತ್ಯಾಸವಾಗಿ ಹೋಗಿ, ನಾನು ಮಾಡಬೇಕಾಗಿರುವುದು ಏನೂ ಉಳಿಯದೇ ಹೋಗುವುದು”
“ಹಾಗೆಂದರೇನು? ಅದನ್ನು ವಿಶದವಾಗಿ ಹೇಳು ದೇವಿ!”
“ದೇವ, ತಮ್ಮ ಏಳು ದಿನದ ಶಿಬಿಕೋತ್ಸವದಿಂದ ಮಧ್ಯಮಲೋಕದಲ್ಲಿ ಬಹು ಪತಿವರ್ತನಗಳಾಗುವುವು. ಅದು ರಜೋಗುಣಪೂರ್ಣವಾದ ಲೋಕ. ಅಲ್ಲಿ ಯಾವಾಗಲೂ ಒಳ್ಳೆಯದು ಕೆಟ್ಟುದು ಎರಡೂ ಇರಬೇಕು. ಅಂಥದರಲ್ಲಿ ತಮ್ಮ ಶಿಬಿಕೋತ್ಸವದಿಂದ ಎಲ್ಲವೂ ಒಳ್ಳೆಯದೇ ಆಗಿಹೋದರೆ, ಹಿಟ್ಟೂಬೂದಿ ಎಂಬ ಭೇದವೇ ಇಲ್ಲದೆ ಹೋದರೆ, ನಾನು ಅಲ್ಲಿ ಮಾಡಬೇಕಾದುದು ಏನೂ ಉಳಿಯುವುದಿಲ್ಲ. ಅಲ್ಲಿಗೆ ಸ್ಥಿತಿಯೇ ಲೋಪವಾಗುವುದು. ಅದನ್ನು ಬಿನ್ನವಿಸಲು ಬಂದಿದ್ದೇನೆ.”
“ಹಾಗಾದರೆ ಏನು ಮಾಡಬೇಕೆಂದಿರುವೆ?”
“ಆಜ್ಞಾಸ್ಥಾನವು ತಮ್ಮದು. ನಾವು ಏನಿದ್ದರೂ ಆಜ್ಞಾವಾಹಕರು. ಸ್ಥಿತಿಯು ಈಗಿರುವಂತೆ ಇರಬೇಕು ಎನ್ನುವುದಾದರೆ, ಸನ್ನಿಧಾನವು ಏಳು ದಿನ ಶಿಬಿಕೋತ್ಸವ ಮಾಡಿಕೊಳ್ಳಬಾರದು. ಮಾಡಿಕೊಳ್ಳುವುದಾದರೆ ಸ್ಥಿತಿ ಪರಿವರ್ತನಕ್ಕೆ ಒಪ್ಪಬೇಕು.”
ಇಂದ್ರನು ಯೋಚಿಸಿದನು. ಸ್ಥಿತಿಯನ್ನು ಬದಲಾಯಿಸುವುದು ಯಾರಿಗೂ ಸಾಧ್ಯವಿಲ್ಲ. ಏನು ಮಾಡಬೇಕು? ಕೊನೆಗೆ ಆಕೆಯನ್ನೇ ಕೇಳಿದನು : “ನೀನು ಸ್ಥಿತಿದೇವತೆ. ಈ ವಿಚಾರದಲ್ಲಿ ನೀನು ಹೇಳಿದಂತೆ ಕೇಳುವೆವು, ಹೇಳು.”