ಪುಟ:Mahakhshatriya.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫.ದೇವತೆಗಳ ಗುಟ್ಟು

“ಧರ್ಮಾಚಾರ್ಯನನ್ನು ವರಿಸಿದುದು ತುಂಟ ಹಸುವನ್ನು ತಂದು ಕಟ್ಟಿ ಕೊಂಡಂತಾಯಿತಲ್ಲಾ !” ಎಂದು ದೇವರಾಜನು ಚಿಂತೆಮಾಡುತ್ತಿದ್ದನು. ವಿಶ್ವ ರೂಪಾಚಾರ್ಯನು ಸಮರಾತ್ರಿಯಲ್ಲಿ ತನ್ನ ಮಾತಾಮಹರಿಗೆ ಹವಿರ್ಭಾಗಗಳನ್ನು ಕೊಡುವುದೂ, ಅದರಿಂದ ಅವರ ತೇಜಸ್ಸು ವಿವರ್ಧಿತವಾಗುತ್ತಿರುವುದೂ ದೇವೇಂದ್ರನಿಗೆ ಗೊತ್ತು. ಏನು ಮಾಡಬೇಕು ? ತಮ್ಮ ಕುಲಶತ್ರುಗಳಾದ ದಾನವರ ವೃದ್ಧಿಯನ್ನು ಕಾರ್ಯತಃ ಸಂಪಾದಿಸುತ್ತಿರುವವನು ಇಂದು ದೇವತೆಗಳ ಧರ್ಮಾಚಾರ್ಯ. ಆದರೆ, ಆತನಿಂದ ಆಗಿರುವ ಉಪಕಾರವನ್ನು ಕಡೆಗಣಿಸುವಂತಿಲ್ಲ. ದೇವತೆಗಳು ಅಸ್ತತೇಜರಾಗಿ ದಾನವರ ಕೈಗೆ ಸಿಕ್ಕಿಹೋಗುವಂತಹ ದುಷ್ಕಾಲದಲ್ಲಿ ನಾರಾಯಣ ಕವಚವನ್ನು ಉಪದೇಶಮಾಡಿ ಆಪತ್ತನ್ನು ತಪ್ಪಿಸಿದ್ದಾನೆ. ಇಂಥವನನ್ನು ತಿರಸ್ಕರಿಸುವುದೆಂತು.

ಮಹೇಂದ್ರನು ಬಹುವಾಗಿ ಯೋಚಿಸಿದನು. ಬ್ರಹ್ಮದೇವನ ವಾಕ್ಯವು ನೆನಪಾಯಿತು. “ಹೌದು. ಇವನನ್ನು ತಿರಸ್ಕರಿಸಿದರೆ ಕೇಡು ಏನೋ ಇದ್ದೇ ಇದೆ. ಅದರಿಂದ ಇವನನ್ನು ತಿರಸ್ಕರಿಸಬಾರದು. ಏನಾದರೂ ಮಾಡಿ, ಈತನಿಗೆ ಇರುವ ಅಸುರವ್ಯಾಮೋಹವನ್ನು ತಪ್ಪಿಸಿದರೆ, ಈತನು ದೇವಕುಲದ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ. ದೇವತೆಯಾಗಿ ಹುಟ್ಟಿದವನಿಗಿಂತ ಕರ್ಮಜ ದೇವತೆಯು ಪ್ರಬಲವೆನ್ನುವಂತೆ ಬಿಟ್ಟರೆ, ಶುಕ್ರಶಿಷ್ಯರು ಬಿಡದೆ ಈತನನ್ನು ಕರೆದುಕೊಂಡು ಹೋಗಿ ತಮ್ಮಲ್ಲಿ ಇಟ್ಟುಕೊಳ್ಳುವರು. ಆದರೆ ಶುಕ್ರಾಚಾರ್ಯನು ಪರಮಗರ್ವಗಂಧಿ. ಈತನನ್ನು ದೈತ್ಯರು ಕರೆದುಕೊಂಡು ಹೋಗುತ್ತಲೂ ಆತನು ಅವರನ್ನು ಕೈಬಿಡುವನು. ಅದರಿಂದ ಅವರು ಈತನನ್ನು ಕರೆದುಕೊಂಡು ಹೋಗಲಾರರು. ಅಥವಾ ಆ ರಾಕ್ಷಸರು ಏನಾದರೂ ಮಾಡಿ ಇಬ್ಬರನ್ನೂ ದಕ್ಕಿಸಿಕೊಂಡರೆ ನಾವು ಕೆಟ್ಟೆವು. ಹಾಗಾಗದಂತೆ ನೊಡಿಕೊಳ್ಳಬೇಕು. ಅಂದು ಬೃಹಸ್ಪತ್ಯಾಚಾರ್ಯನು ಹೊರಟು ಹೋಗದಿದ್ದರೆ ಈ ಅನರ್ಥಗಳೆಂದೂ ಬರುತ್ತಿರಲಿಲ್ಲ. ಈಗ ಈತನ ಯೋಗ್ಯತೆ ಪ್ರಕಟವಾಯಿತು. ಇನ್ನು ಅದನ್ನು ಮುಚ್ಚಿಡುವಂತಿಲ್ಲ ಏನು ಮಾಡಬೇಕು?”

ಇಂದ್ರನಿಗೆ ಇದರ ಜೊತೆಯಲ್ಲಿಯೇ ಮತ್ತೊಂದು ಯೋಚನೆ ಬಂತು ;