ಪುಟ:Mahakhshatriya.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಇನ್ನೆಷ್ಟು ದಿನ ಅಜ್ಞಾತವಾಸದಲ್ಲಿರುವಿರಿ ?”

“ನಾನು ಸಂಕಲ್ಪಿಸಿದ್ದ ಕಾಲವಾಯಿತು. ಆದರೆ, ಈಗ ದೇವಲೋಕಕ್ಕೆ ಬರುವುದೆಂತು ? ಇನ್ನೊಬ್ಬ ಧರ್ಮಚಾರ್ಯನಿರುವನಲ್ಲ ?”

“ತಾವು ಬರುವುದಾದರೆ ದೇವೇಂದ್ರನು ಆತನನ್ನು ಕಿತ್ತೆಸೆಯುವನು.”

“ಅದಷ್ಟು ಸುಲಭವಲ್ಲ. ಅಲ್ಲದೆ ಕಿತ್ತೆಸೆಯುವ ಕಾರ್ಯವು ಸಕಾರಣವಾಗಿರಬೇಕು.”

“ಆತನು ದಾನವ ಪಕ್ಷಪಾತಿಯೆಂಬ ಕಾರಣವಿದೆ. ಅಲ್ಲದೆ, ಆತನು ನಮ್ಮನ್ನು ಕುರಿತು ಬಹಳ ನಿಷ್ಠುರವಾಗಿ ಆಡುತ್ತಾನೆ.”

“ಅದನ್ನು ನಾನು ಮೊದಲಿಂದಲೂ ಬಲ್ಲೆ. ಆತನನ್ನು ತೆಗೆದುಹಾಕಿದ ಮರುಕ್ಷಣವೇ ನಾನು ಅಲ್ಲಿರುತ್ತೇನೆ. ಆದರೆ ಇದು ಪರಮರಹಸ್ಯವಾಗಿರಬೇಕು.

“ಹಾಗೆಯೇ ತಾವೂ ದೇವಲೋಕದಲ್ಲಿ ಪ್ರಕಟವಾಗುವವರೆಗೂ ಯಾರಿಗೂ ದರ್ಶನಾದಿಗಳನ್ನು ಕೊಡದೆ ಗೋಪ್ಯವಾಗಿರಬೇಕು”

“ಹಾಗೂ ಆಗಬಹುದು. ಅತ್ತಕಡೆ ಕೇಳುತ್ತಿರುವವರನ್ನು ಬಿಟ್ಟು ಇನ್ನು ಯಾರಿಗೂ ಈ ವಿಷಯವು ತಿಳಿಯದು ತಾನೇ ?”

“ತಿಳಿಯದು”

“ಹಾಗಾದರೆ ಸರಿ.”

ಮತ್ತೊಂದು ಕ್ಷಣದೊಳಗಾಗಿ ವಾಯುವು ಅಲ್ಲಿ ಪ್ರತ್ಯಕ್ಷನಾದನು. ಇಂದ್ರನು ಆತನನ್ನು ಬಾಚಿ ತಬ್ಬಿಕೊಂಡು “ಮಹತ್ಕಾರ್ಯವನ್ನು ಸಾಧಿಸಿದೆ” ಎಂದು ಭುಜ ತಟ್ಟಿದನು. ವಾಯುವು “ಏನು ಮಹತ್ಕಾರ್ಯವನ್ನು ಸಾಧಿಸಿದೆನೋ ! ನಾವು ಸ್ವಭಾವತಃ ತೇಜೋದೇಹಿಗಳು. ಅಲ್ಲದೆ ಆಕಾಶವಿರುವೆಡೆಯಲ್ಲೆಲ್ಲ ವ್ಯಾಪ್ತಿಯುಳ್ಳವರು. ಸಂಕಲ್ಪ ಮಾತ್ರದಿಂದ ಎಲ್ಲೆಂದರಲ್ಲಿಗೆ ಹೋಗಿಬರಬಲ್ಲವರು. ಹೀಗಿರಲು ಬ್ರಹ್ಮಲೋಕಕ್ಕೆ ಹೋಗಿಬಂದುದು ಒಂದು ಸಾಹಸವೇ ?” ಎಂದು ತಲೆದೂಗಿದನು.

ಇಂದ್ರನು “ಕೊಂಚ ಕಾಲ ತಡೆ. ಈಗ ಬಂದಿರುವ ಈ ವಿಶ್ವರೂಪ ಸ್ವರೂಪದ ಆಪತ್ತು ಕಳೆಯಲಿ. ಆ ನಂತರ ನೀನು ದೇವಕುಲಕ್ಕೆ ಎಂತಹ ಉಪಕಾರ ಮಾಡಿದೆ ಎನ್ನುವುದು ತಿಳಿಯುವುದು” ಎಂದನು.

ಅಗ್ನಿಯು “ಅನರ್ಥವಾಗದಂತೆ ನೋಡಿಕೋ ಇಂದ್ರ !” ಎಂದನು.

ಇಂದ್ರನು ಲೊಚಗುಟ್ಟಿ “ಅದರ ಯೋಚನೆ ಆಮೇಲೆ, ಈಗೇಕೆ” ಎಂದನು.

* * * *